ತಾವರಗೇರಾ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ನಭೀಸಾಬ ಅವರಿಗೆ ಸ್ಥಳೀಯ ಬುದ್ಧಂ, ಶರಣಂ, ಗಚ್ಛಾಮಿ ಸೇವಾ ಟ್ರಸ್ಟ್ ಪದಾಧಿಕಾರಿಗಳು ವಸತಿ ಯೋಜನೆಯ ಫಲಾನುಭವಿಗಳಿಗೆ ಹಕ್ಕುಪತ್ರ ನೀಡುವಂತೆ ಮನವಿ ಸಲ್ಲಿಸಿದರು
ತಾವರಗೇರಾ: ಸ್ಥಳೀಯ ಬುದ್ದಂ, ಶರಣಂ, ಗಚ್ಛಾಮಿ ಸೇವಾ ಟ್ರಸ್ಟ್ ವತಿಯಿಂದ ವಸತಿ ಯೋಜನೆ ಫಲಾನುಭವಿಗಳಿಗೆ ಹಕ್ಕುಪತ್ರ ನೀಡುವಂತೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ನಭೀಸಾಬ ಖುದನ್ನವರ ಅವರಿಗೆ ಈಚೆಗೆ ಮನವಿ ಸಲ್ಲಿಸಲಾಯಿತು.
ಪಟ್ಟಣ ಪಂಚಾಯಿತಿ ಆಡಳಿತದಿಂದ 2019-20ನೇ ಸಾಲಿನ ವಾಜಪೇಯ ನಗರ ವಸತಿ ಯೋಜನೆ ಅಡಿ ಪಟ್ಟಣದ 747 ನಿವಾಸಿಗಳು ಅರ್ಜಿ ಸಲ್ಲಿಸಿದ್ದರು. ಅದರಲ್ಲಿ 435 ಫಲಾನುಭವಿಗಳ ದಾಖಲಾತಿ ಪರಿಶೀಲಿಸಿ ಅವುಗಳಲ್ಲಿ 351 ಮಂದಿಯನ್ನು ಆಯ್ಕೆ ಮಾಡಲಾಗಿದೆ. ನಂತರ 2021ರಲ್ಲಿ ನಿವೇಶನ ರಹಿತ ಫಲಾನುಭವಿಗಳಿಗೆ 296 ಹಕ್ಕುಪತ್ರಗಳನ್ನು ನೀಡಿ 55 ಅರ್ಜಿಗಳನ್ನು ಪಟ್ಟಣ ಪಂಚಾಯಿತಿ ಬಾಕಿ ಉಳಿಸಿಕೊಂಡಿದೆ. ಆ ಫಲಾನುಭವಿಗಳಿಗೆ ಈವರೆಗೆ ಹಕ್ಕುಪತ್ರ ನೀಡಿಲ್ಲ. ಕೂಡಲೇ ಅಧಿಕಾರಿಗಳು ಬಾಕಿ ಇರುವ ನಿವೇಶನ ಹಕ್ಕುಪತ್ರ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಮನವಿ ಸಲ್ಲಿಸಿದರು.
ಟ್ರಸ್ಟ್ ಗೌರವಾಧ್ಯಕ್ಷ ಲಕ್ಷ್ಮಣ ಮುಖಿಯಾಜಿ, ಅಧ್ಯಕ್ಷ ಯಮನೂರಪ್ಪ ಬಿಳೆಗುಡ್ಡ, ಕಾರ್ಯದರ್ಶಿ ರಾಜಾನಾಯ್ಕ ಸದಸ್ಯರಾದ ದೇವೇಂದ್ರಕುಮಾರ ಹುನಗುಂದ, ರವಿ ಆರೇರ್, ಉಪ್ಪಳೇಶ ವಿ.ನಾರಿನಾಳ, ಆರ್.ಬಿ.ಅಲಿಆದಿಲ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.