ಕೊಪ್ಪಳ: ‘ಇತರೆ ಇಲಾಖೆಗಳಿಗೆ ಹೋಲಿಸಿದರೆಅಂಚೆ ಇಲಾಖೆ ಭ್ರಷ್ಟಾಚಾರ ರಹಿತ ಮತ್ತು ಸೇವಾ ಮನೋಭಾವ ಹೊಂದಿದ ಇಲಾಖೆಯಾಗಿದೆ’ ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು.
ಜಿಲ್ಲಾಡಳಿತ ಭವನದಲ್ಲಿ ಉಪ ಅಂಚೆ ಕಚೇರಿ ಉದ್ಘಾಟಿಸಿ ಮಾತನಾಡಿದ ಅವರು,‘ರೈಲ್ವೆ ನಂತರ ಅಂಚೆ ಇಲಾಖೆಯೇ ದೇಶದಲ್ಲಿ ದೊಡ್ಡ ಇಲಾಖೆ. ಜನರೊಂದಿಗೆ ಮೊದಲಿನಿಂದಲೂ ತಳಮಟ್ಟದಿಂದ ಕೆಲಸ ಮಾಡಿಕೊಂಡು ಬಂದಿದೆ. ಪ್ರಧಾನಿ ಮೋದಿ ಅವರು ಅಧಿಕಾರಕ್ಕೆ ಬಂದ ಮೇಲೆ ಅಂಚೆ ಇಲಾಖೆಗೆ ಹೊಸ ಸ್ಪರ್ಶ ನೀಡಿದ್ದಾರೆ’ ಎಂದರು.
ದೇಶದಲ್ಲಿ 1,55,618 ಅಂಚೆ ಕಚೇರಿಗಳಿವೆ. ಇದರ ವಿಭಾಗವನ್ನು ಕೊಪ್ಪಳ ಜಿಲ್ಲಾಡಳಿತ ಭವನದಲ್ಲಿ ತೆರೆಯಲು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದಾಗ ಅವರು ಇದಕ್ಕೆ ಅವಕಾಶ ಮಾಡಿಕೊಟ್ಟರು. ಹಾಗಾಗಿ ಈ ಸಂದರ್ಭದಲ್ಲಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಇದರಿಂದ ಜಿಲ್ಲಾಡಳಿತ ಭವನಕ್ಕೆ ಬರುವ ಸಾರ್ವಜನಿಕರು ಮತ್ತು ಇಲ್ಲಿರುವ ವಿವಿಧ ಇಲಾಖೆಗಳಿಗೂ ಅನುಕೂಲವಾಗಲಿದೆ. ಪತ್ರದ ಬಟವಾಡೆಗೆ ಸೀಮಿತವಾಗಿದ್ದ ಅಂಚೆ ಇಲಾಖೆ ವಿಮೆ, ಸಾರ್ವಜನಿಕ ಸೇವೆ, ನಾಗರಿಕರ ಸೇವೆ ಒದಗಿಸುತ್ತಿದೆ. ಅವುಗಳನ್ನು ಬ್ಯಾಂಕ್ಗಳನ್ನಾಗಿ ಪರಿವರ್ತನೆ ಮಾಡಿದ್ದು,ಭಾರತವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಲಾಗುತ್ತಿದೆ ಎಂದು ಹೇಳಿದರು.
ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಮಾತನಾಡಿ,‘ಸಂಸದರು ಹೆಚ್ಚಿನ ಮುತುವರ್ಜಿ ವಹಿಸಿದ ಕಾರಣ ಇಲ್ಲಿ ಇದನ್ನು ಸ್ಥಾಪಿಸಲಾಯಿತು. ಇದರಿಂದ ಜಿಲ್ಲಾಡಳಿತ ಕಚೇರಿಗೆ ಬರುವ ಜನರಿಗೆ ಅನುಕೂಲವಾಗಲಿದೆ’ ಎಂದರು.
ಸಂಸದ ಸಂಗಣ್ಣ ಕರಡಿ ಅವರು ಜಿಲ್ಲಾಡಳಿತ ಭವನದಲ್ಲಿ ಉಪ ಅಂಚೆ ಕಚೇರಿಯಲ್ಲಿ ಮೊದಲ ಪೋಸ್ಟ್ ಮಾಡುವ ಮೂಲಕ ಚಾಲನೆ ನೀಡಿದರು.
ಅಂಚೆ ಅಧೀಕ್ಷಕರಾದ ಪಿ.ಚಿದಾನಂದ, ಸಹಾಯಕ ಅಂಚೆ ಅಧೀಕ್ಷಕ ಎಂ.ಎಲ್.ಭಾಗವಾನ, ಕೊಪ್ಪಳ ಅಂಚೆ ನಿರೀಕ್ಷಕ ಷಣ್ಮುಖಪ್ಪ ಎಸ್. ಶಿರಹಟ್ಟಿ, ಜಿ.ಎನ್.ಹಳ್ಳಿ ಮುಂತಾದವರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.