ADVERTISEMENT

ಸಂಸದ ಸಂಗಣ್ಣ, ಶಾಸಕ ಧಡೇಸೂಗೂರ ವಿರುದ್ಧ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2022, 5:44 IST
Last Updated 18 ಆಗಸ್ಟ್ 2022, 5:44 IST
ಕಾರಟಗಿ ತಾಲ್ಲೂಕಿನ ಸಿದ್ದಾಪುರ- ನಂದಿಹಳ್ಳಿ ರಸ್ತೆ ದುರಸ್ತಿಗೆ ಆಗ್ರಹಿಸಿ ಉಳೇನೂರಲ್ಲಿ ಬುಧವಾರ ಪ್ರತಿಭಟನೆಯಲ್ಲಿ ಗ್ರಾಮದ ಮುಖಂಡ ಸುರೇಶ ಮಡಿವಾಳ ಮಾತನಾಡಿದರು
ಕಾರಟಗಿ ತಾಲ್ಲೂಕಿನ ಸಿದ್ದಾಪುರ- ನಂದಿಹಳ್ಳಿ ರಸ್ತೆ ದುರಸ್ತಿಗೆ ಆಗ್ರಹಿಸಿ ಉಳೇನೂರಲ್ಲಿ ಬುಧವಾರ ಪ್ರತಿಭಟನೆಯಲ್ಲಿ ಗ್ರಾಮದ ಮುಖಂಡ ಸುರೇಶ ಮಡಿವಾಳ ಮಾತನಾಡಿದರು   

ಉಳೇನೂರ (ಕಾರಟಗಿ): ತಾಲ್ಲೂಕಿನ ಸಿದ್ದಾಪುರ-ನಂದಿಹಳ್ಳಿ ಸಂಪರ್ಕ ರಸ್ತೆಯನ್ನು ದುರಸ್ತಿಗೊಳಿಸಬೇಕು ಎಂದು ಆಗ್ರಹಿಸಿ ಉಳೇನೂರ ಹಾಗೂ ಇತರ ಗ್ರಾಮಸ್ಥರು ಬುಧವಾರ ರಸ್ತೆತಡೆ ನಡೆಸಿ ಪ್ರತಿಭಟನೆ ಮಾಡಿದರು.

ಗ್ರಾಮದ ಸುರೇಶ ಮಡಿವಾಳ ಮಾತನಾಡಿ, ರಸ್ತೆ ದುರಸ್ತಿ ಮಾಡಿ ಎಂದು ಈ ಹಿಂದೆ ಪ್ರತಿಭಟನೆ ನಡೆಸಿದ್ದ ವೇಳೆ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ನೀಡಿದ್ದ ಭರವಸೆ ಹಾಗೆಯೇ ಉಳಿದಿದೆ. ಇದರಿಂದಾಗಿ ನಿತ್ಯ ಅನೇಕರು ವಾಹನದಿಂದ ಬಿದ್ದು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಆರೋಪಿಸಿದರು.

ಈಚೆಗೆ ನಿಯಂತ್ರಣ ತಪ್ಪಿ ಕಾರು ಭತ್ತದ ಗದ್ದೆಯಲ್ಲಿ ಬಿದ್ದು, ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದರು. ಸರ್ಕಾರಿ ಬಸ್‌ಗೆ ರಸ್ತೆಯಿಂದ ಮೇಲೆದ್ದ ಜಲ್ಲಿಕಲ್ಲು ನುಗ್ಗಿ ಬಸ್‌ ನಿಂತು ಜನರಿಗೆ ತೊಂದರೆಯಾಗಿತ್ತು. ದ್ವಿಚಕ್ರ ವಾಹನ ಸವಾರನೊಬ್ಬ ಅಪಘಾತಕ್ಕೀಡಾಗಿ ಪ್ರಾಣಾಪಾಯದಿಂದ ಉಳಿದಿದ್ದಾನೆ. ನಿರಂತರವಾಗಿ ಅಪಘಾತ, ಅವಘಡಗಳು ಸಂಭವಿಸುತ್ತಿದ್ದರೂ ಪರಿಹಾರ ದೊರೆತಿಲ್ಲ. 8
ವರ್ಷಗಳಿಂದ ಸಂಸದರು ಗ್ರಾಮದತ್ತ ಮುಖ ತೋರಿಸಿಲ್ಲ. ಕೊನೆಗೆ ಬೇಸತ್ತು 2 ಸರ್ಕಾರಿ ಬಸ್‌ ತಡೆಹಿಡಿದು ಪ್ರತಿಭಟನೆಗಿಳಿದಿದ್ದೇವೆ. ಬೇಡಿಕೆ ಈಡೇರುವವರೆಗೂ ಸ್ಥಳಬಿಟ್ಟು ಕದಲುವುದಿಲ್ಲ ಎಂದರು.

ADVERTISEMENT

ಈ ಹಿಂದೆ ಧರಣಿ ಸ್ಥಳದಲ್ಲಿ ಗ್ರೇಡ್ -2 ತಹಶೀಲ್ದಾರ್, ಪೊಲೀಸ್ ಮತ್ತು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ನೀಡಿದ್ದ ಭರವಸೆ ಸಾಕು, ಈಗ ಕಾಮಗಾರಿ ಪ್ರಾರಂಭಿಸಲೇಬೇಕು. ಜಿಲ್ಲಾಧಿಕಾರಿ ಸುಂದರೇಶ ಬಾಬು, ಶಾಸಕ ಬಸವರಾಜ ದಢೇಸುಗೂರು ಪ್ರತಿಭಟನಾ ಸ್ಥಳಕ್ಕೆ ಬರಬೇಕು ಎಂದು ಗ್ರಾಮಸ್ಥರು ಪಟ್ಟು ಹಿಡಿದಿದ್ದು, ಸ್ಥಳಕ್ಕೆ ಬಂದ ತಹಶೀಲ್ದಾರ್ ಎಂ. ಬಸವರಾಜ ಪ್ರತಿಭಟನಾನಿರತರ ಮನವೊಲಿಸಲು ನಡೆಸಿದ ಯತ್ನ ವಿಫಲವಾಯಿತು.

ಶಾಸಕ ದಢೇಸುಗೂರ ವಿರುದ್ದ ತೀವ್ರ ಅಸಮಧಾನ ವ್ಯಕ್ತಪಡಿಸಿದ ಪ್ರತಿಭಟನಾನಿರತರು, ಅವ್ಯವಸ್ಥೆಯನ್ನು ಜಾಲತಾಣದಲ್ಲಿ ಹರಿಬಿಟ್ಟವರ ವಿರುದ್ದ ಪೊಲೀಸರನ್ನು ಬಿಟ್ಟು, ಅಪಹಾಸ್ಯದಮಾತನ್ನಾಡುವ ಬದಲು ತಕ್ಷಣ ರಸ್ತೆ ದುರಸ್ತಿಗೆ ಶಾಸಕರು ಮುಂದಾಗಬೇಕು ಎಂದು ಆಗ್ರಹಿಸಿದರು.

ಮುಂದಿನ ಚುನಾವಣೆಗಳಲ್ಲಿ ಮತ ದಾನ ಬಹಿಷ್ಕರಿಸುವ ಎಚ್ಚರಿಕೆಯನ್ನೂ ನೀಡಿದರು.

ಗ್ರಾಮದ ಪ್ರಮುಖರಾದ ಹನು ಮೇಶ, ಯಮನೂರು, ದೇವರಾಜ, ಮಂಜುನಾಥ, ಮುತ್ತು, ಹೊನ್ನೂರಪ್ಪ, ಕನಕರಾಯ, ನಾಗರಾಜ, ಮಲ್ಲಿ ಕಾರ್ಜುನ, ರಾಮಣ್ಣ, ಹುಲಿಗೆಪ್ಪ, ನಾಗೇಶಪ್ಪ, ಈರಪ್ಪ, ಸಿದ್ಧಲಿಂಗ, ಲಿಂಗರಾಜ, ಧರ್ಮರಾಜ, ಶರಣಬಸವ, ಸುನೀಲ್, ಚನ್ನಬಸವ ಸೇರಿ ವಿವಿಧ ಶಾಲಾ, ಕಾಲೇಜುಗಳ ವಿದ್ಯಾರ್ಥಿಗಳಿದ್ದರು.

ಇನ್‌ಸ್ಪೆಕ್ಟರ್‌ ವೀರಭದ್ರಯ್ಯ ಹಿರೇಮಠ, ಸಹಾಯಕ ಇನ್‌ಸ್ಪೆಕ್ಟರ್‌ ನಾಗಪ್ಪ, ಗಂಗಪ್ಪ, ಬಸವರಾಜ, ಸಿಬ್ಬಂದಿ, ಜಿಲ್ಲಾ ಮೀಸಲು ಪಡೆಯ ತುಕಡಿ ಸ್ಥಳದಲ್ಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.