ಯಲಬುರ್ಗಾ: ತ್ರಿಪುರದಲ್ಲಿ ಮುಸ್ಲಿಂ ಸಮುದಾಯದ ಮೇಲೆ ನಡೆಯುತ್ತಿರುವ ಹಲ್ಲೆಯನ್ನು ಖಂಡಿಸಿ ತಾಲ್ಲೂಕು ಮುಸ್ಲಿಂ ಜಮಾ-ಅತ್ ಕಮಿಟಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಸೋಮವಾರ ಸಾಕಷ್ಟು ಸಂಖ್ಯೆಯಲ್ಲಿ ಸೇರಿದ್ದ ಮುಸ್ಲಿಮರು ಸರ್ಕಾರದ ವಿರುದ್ಧ ವಿವಿಧ ಘೋಷಣೆಗಳನ್ನು ಕೂಗುತ್ತ ಪಟ್ಟಣದ ವಿವಿಧ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಹಲ್ಲೆ ಪ್ರಕರಣವನ್ನು ತೀವ್ರವಾಗಿಖಂಡಿಸಿದರು.
ಮುಖಂಡ ಎಂ.ಎಫ್.ನದಾಫ್ ಮಾತನಾಡಿ,‘ಪ್ರಜಾಪ್ರ ಭುತ್ವ ವ್ಯವಸ್ಥೆಯಲ್ಲಿ ಕೋಮು ತಾರತಮ್ಯ ನೀತಿಯನ್ನು ಅನುಸರಿಸುವುದು ಸರಿಯಾದ ಧೋರಣೆಯಲ್ಲ. ತ್ರಿಪುರಾದ ಪ್ರಾರ್ಥನಾ ಮಂದಿರಗಳ ಮೇಲೆ ದಾಳಿ ನಡೆಸಿ ಹಲ್ಲೆಗೆ ಮುಂದಾಗಿದ್ದು ಅಮಾನವೀಯ ಘಟನೆಯಾಗಿದೆ. ಇಂಥ ಕೃತ್ಯಕ್ಕೆ ಮುಂದಾದ ದುಷ್ಕರ್ಮಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ನಿರಂತರವಾಗಿ ಇಂಥ ದಾಳಿಗಳು ನಡೆಯುತ್ತಿರುವ ಕಾರಣ ಪ್ರಧಾನಿಯವರು ಮಧ್ಯ ಪ್ರವೇಶಿಸಿ ಶಾಂತಿ ಸುವ್ಯವಸ್ಥೆ ಮತ್ತು ಸೌಹಾರ್ದ ವಾತಾವರಣ ನಿರ್ಮಾಣಕ್ಕೆ ಮುಂದಾಗಬೇಕು’ ಎಂದು ಆಗ್ರಹಿಸಿದ್ದಾರೆ.
ತಹಶೀಲ್ ಕಚೇರಿಗೆ ಭೇಟಿ ನೀಡಿ ತಹಶೀಲ್ದಾರ್ ಶ್ರೀಶೈಲ ತಳವಾರ ಅವರಿಗೆ ಮನವಿ ಸಲ್ಲಿಸಿ ತ್ರಿಪುರಾ ಸರ್ಕಾರವನ್ನು ವಜಾಗೊಳಿಸಿ ರಾಷ್ಟ್ರಪತಿ ಆಡಳಿತ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.
ಸಮಾಜದ ಮುಖಂಡ ಅಕ್ತರಸಾಬ ಖಾಜಿ, ಇಕ್ಬಾಲಸಾಬ ವಣಗೇರಿ, ಮೈಬುಸಾಬ ಮಕಾಂದಾರ, ಎಚ್.ಎಚ್.ಹಿರೇಮನಿ, ಎಂ.ಎಫ್.ನಧಾಪ್, ಗೌಸುಸಾಬ ಮಕಾಂದಾರ, ಹುಸೇನ ನೀಲಗಾರ, ಶಬ್ಬೀರ ಗುಡಿಹಿಂದಲ್, ಶ್ಯಾಮೀದ ಆನೆಗುಂದಿ, ಖಾಜಾಸಾಬ ಅಮರಾವತಿ, ಶ್ಯಾಮಿದಸಾಬ, ರಶೀದಸಾಬ, ಮರ್ದಾನಸಾಬ ಕರಮುಡಿ ಸೇರಿದಂತೆ ಅನೇಕ ಮುಖಂಡರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.