ಗಂಗಾವತಿ: ಕೋಲ್ಕತ್ತ ವೈದ್ಯ ವಿದ್ಯಾರ್ಥಿನಿ ಹಾಗೂ ಬಿಹಾರದಲ್ಲಿ ಬಾಲಕಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಖಂಡಿಸಿ ಸೋಮವಾರ ಎಸ್ಎಫ್ಐ ಸಂಘಟನೆ ನೇತೃತ್ವದಲ್ಲಿ ವಿದ್ಯಾರ್ಥಿಗಳು ನಗರದ ಕೃಷ್ಣ ದೇವರಾಯ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. ಬಳಿಕ ಸಂಘಟನೆ ಸದಸ್ಯರು ಗ್ರೇಡ್-2 ತಹಶೀಲ್ದಾರ್ಗೆ ಮನವಿ ಸಲ್ಲಿಸಿದರು.
ಎಸ್ಎಫ್ಐ ರಾಜ್ಯಾಧ್ಯಕ್ಷ ಅಮರೇಶ ಕಡಗದ ಮಾತನಾಡಿ, ‘ಹತ್ಯೆ ಮತ್ತು ಅತ್ಯಾಚಾರ ಪ್ರಕರಣಗಳು ನಿಜಕ್ಕೂ ನಾಚಿಕೆಗೇಡು. ದೇಶದಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲದಂತಹ ಪರಿಸ್ಥಿತಿಯಿದೆ. ದೇಶದ್ಯಾಂತ ಮಹಿಳೆ ಮತ್ತು ಯುವತಿಯರ ಮೇಲೆ ನಿರಂತರ ಅತ್ಯಾಚಾರಗಳು ನಡೆಯುತ್ತಿವೆ. ಆರೋಪಿಗಳಿಗೆ ಈವರೆಗೂ ಸೂಕ್ತ ಶಿಕ್ಷೆಗೆ ಗುರಿಪಡಿಸಲು ಸರ್ಕಾರಗಳಿಗೆ ಆಗುತ್ತಿಲ್ಲ. ಹೀಗಾದರೆ ಮಹಿಳೆಯರ ಬದುಕಿನ ಪರಿಸ್ಥಿತಿ ಏನು ಎಂದು ಪ್ರಶ್ನಿಸಿದರು.
ಸಂಘಟನೆ ತಾಲ್ಲೂಕು ಅಧ್ಯಕ್ಷ ಗ್ಯಾನೇಶ ಕಡಗದ ಮಾತನಾಡಿ, ‘ಮಹಿಳೆಯರ ವಿರುದ್ಧ ನಡೆಯುತ್ತಿರುವ ಅತ್ಯಾಚಾರ ಮತ್ತು ಹಲ್ಲೆಗಳಿಗೆ ಸಂಬಂಧಪಟ್ಟಂತೆ ರಾಜ್ಯ ಸರ್ಕಾರ ಕಠಿಣ ಕಾನೂನು ರಚಿಸಿ, ತಪ್ಪಿತಸ್ಥರ ಮೇಲೆ ಪ್ರಯೋಗ ಮಾಡಬಾರದು. ಅತ್ಯಾಚಾರ ಪ್ರಕರಣಗಳನ್ನು ಹೆಚ್ಚಿನ ಸಮಯದವರೆಗೆ ವಿಚಾರಣೆ ಅವಕಾಶ ನೀಡದೇ, ತುರ್ತಾಗಿ ವಿಚಾರಿಸಿ ಕ್ರಮಕೈಗೊಳ್ಳಬೇಕು’ ಎಂದರು.
ರಾಷ್ಟ್ರೀಯ ಜಂಟಿ ಕಾರ್ಯದರ್ಶಿ ನಿತೀಶ್ ನಾರಾಯಣ, ಜಂಟಿ ಕಾರ್ಯದರ್ಶಿ ಗಣೇಶ, ಕಾರ್ಯದರ್ಶಿ ಶಿವುಕುಮಾರ, ನಾಗರಾಜ, ಬಾಲಾಜಿ, ಷರೀಫ, ಮಾರುತಿ, ರಮೇಶ, ರಾಜಭಕ್ಷಿ, ಸಂಗೀತಾ, ರೋಜಾ, ಪಲ್ಲವಿ, ಸವಿತಾ, ದುರ್ಗಾ, ಶಾಂತಾ, ಹುಸೇನಪ್ಪ, ಮರೀನಾಗ, ಉಮೇಶ, ಶಿವಕುಮಾರ ಸೇರಿ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ಧರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.