ADVERTISEMENT

ಕಾರಟಗಿ: ಬಾಕಿ ವೇತನ ಬಿಡುಗಡೆಗೆ ಆಗ್ರಹಿಸಿ ಪ್ರತಿಭಟನೆ

ಬಿಸಿಯೂಟ ತಯಾರಕರಿಂದ ಗ್ರೇಡ್‌ 2 ತಹಶೀಲ್ದಾರ್‌ ವಿಶ್ವನಾಥ ಮುರಡಿಗೆ ಮನವಿ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2021, 11:10 IST
Last Updated 6 ಆಗಸ್ಟ್ 2021, 11:10 IST
ಕಾರಟಗಿಯಲ್ಲಿ ಬಿಸಿಯೂಟ ತಯಾರಕರ ತಾಲ್ಲೂಕು ಒಕ್ಕೂಟದ ಪದಾಧಿಕಾರಿಗಳು ಗುರುವಾರ ಗ್ರೇಡ್‌ 2 ತಹಶೀಲ್ದಾರ್‌ ವಿಶ್ವನಾಥ ಮುರಡಿ ಅವರಿಗೆ ಮನವಿ ಸಲ್ಲಿಸಿದರು
ಕಾರಟಗಿಯಲ್ಲಿ ಬಿಸಿಯೂಟ ತಯಾರಕರ ತಾಲ್ಲೂಕು ಒಕ್ಕೂಟದ ಪದಾಧಿಕಾರಿಗಳು ಗುರುವಾರ ಗ್ರೇಡ್‌ 2 ತಹಶೀಲ್ದಾರ್‌ ವಿಶ್ವನಾಥ ಮುರಡಿ ಅವರಿಗೆ ಮನವಿ ಸಲ್ಲಿಸಿದರು   

ಕಾರಟಗಿ: ‘ಬಾಕಿ ವೇತನ ಬಿಡುಗಡೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ತಾಲ್ಲೂಕು ಒಕ್ಕೂಟದ ಪದಾಧಿಕಾರಿಗಳು ಗುರುವಾರ ಪ್ರತಿಭಟನಾ ಮೆರವಣಿಗೆ ನಡೆಸಿ, ಗ್ರೇಡ್‌ 2 ತಹಶೀಲ್ದಾರ್‌ ವಿಶ್ವನಾಥ ಮುರಡಿ ಅವರಿಗೆ ಮನವಿ ಸಲ್ಲಿಸಿದರು.

ನೂರಾರು ಬಿಸಿಯೂಟ ತಯಾರಕರು ಸಿಐಟಿಯು ನೇತೃತ್ವದಲ್ಲಿ ಪಟ್ಟಣದ ಪುರಸಭೆಯಿಂದ ಪ್ರತಿಭಟನಾ ಮೆರವಣಿಗೆ ಆರಂಭಿಸಿ, ತಮ್ಮ ಹಕ್ಕುಗಳ ಈಡೇರಿಕೆಗೆ ಆಗ್ರಹಿಸುವ ಘೋಷಣೆಗಳನ್ನು ಕೂಗಿದರು.

ಅನುದಾನಿತ ಮತ್ತು ಸರ್ಕಾರಿ ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿ ಬಿಸಿಯೂಟ ತಯಾರಕರಿಗೆ ಮಾಸಿಕ ₹ 2700 ಹಾಗೂ ಅಡುಗೆ ಸಹಾಯಕರಿಗೆ ₹ 2600 ವೇತನ ನೀಡುತ್ತಿದ್ದು, ಇದರಿಂದ ಅವರ ಕುಟುಂಬದ ಜೀವನ ನಿರ್ವಹಣೆ ಮಾಡುವುದು ತುಂಬಾ ಕಷ್ಟಕರವಾಗಿದ್ದು, ತಕ್ಷಣವೇ ವೇತನ ಹೆಚ್ಚಿಸಬೇಕು. ಬಾಕಿ ವೇತನ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ADVERTISEMENT

ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಒಕ್ಕೂಟದ ತಾಲ್ಲೂಕು ಸಮಿತಿ ಅಧ್ಯಕ್ಷೆ ನೀಲಮ್ಮ, ಪ್ರಧಾನ ಕಾರ್ಯದರ್ಶಿ ಬಿ. ಸುನಿತಾ ಅವರು ಮಾತನಾಡಿ, ಬಾಕಿ ವೇತನ ಬಿಡುಗಡೆಯ ಜೊತೆಗೆ ಅಲಹಾಬಾದ್ ಹೈಕೋರ್ಟ್ ತೀರ್ಪಿನಂತೆ ಕನಿಷ್ಠ ವೇತನವನ್ನು ರಾಜ್ಯ ಸರ್ಕಾರ ಘೋಷಿಸಬೇಕು. ಕೋವಿಡ್ ಲಾಕ್‌ಡೌನ್ ಪರಿಹಾರವಾಗಿ ₹ 5‌ ಸಾವಿರ ನೀಡಬೇಕು ಎಂದು
ಒತ್ತಾಯಿಸಿದರು.

ಕಟ್ಟಡ ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ಹುಲಗಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ತಿಮ್ಮಣ್ಣ, ಅಂಗನವಾಡಿ ಕಾರ್ಯಕರ್ತೆಯರ ಸಂಘದ ಜಿಲ್ಲಾಧ್ಯಕ್ಷೆ ಶಿವಮ್ಮ ಹುಡೇದ, ಉಪಾಧ್ಯಕ್ಷೆ ಗೌರಿ ಬೇವಿನಾಳ, ಖಜಾಂಚಿ ರೇಣುಕಾ ಬೂದಗುಂಪಾ, ಸಹಕಾರ್ಯದರ್ಶಿ ಪ್ರೇಮ ಪ್ರಮುಖರಾದ ಶೋಭಾ, ಗೀತಾ, ಮಹಾದೇವಿ, ರತ್ನಮ್ಮ, ಹುಲಿಗೆಮ್ಮ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.