ADVERTISEMENT

ಭಾಗ್ಯನಗರ ಮೇಲ್ಸೇತುವೆ: ಮುಗಿಯದ ಗೋಳು

ಕಳಪೆ ಕಾಮಗಾರಿ: ಅವಳಿ ನಗರದ ನಿವಾಸಿಗಳಲ್ಲಿ ಆತಂಕ

ಸಿದ್ದನಗೌಡ ಪಾಟೀಲ
Published 27 ಡಿಸೆಂಬರ್ 2018, 14:45 IST
Last Updated 27 ಡಿಸೆಂಬರ್ 2018, 14:45 IST
ಕೊಪ್ಪಳ-ಭಾಗ್ಯನಗರ ರೈಲ್ವೆ ಮೇಲ್ಸೆತುವೆ ಕಾಮಗಾರಿ ನಡೆಯುತ್ತಿರುವುದು
ಕೊಪ್ಪಳ-ಭಾಗ್ಯನಗರ ರೈಲ್ವೆ ಮೇಲ್ಸೆತುವೆ ಕಾಮಗಾರಿ ನಡೆಯುತ್ತಿರುವುದು   

ಕೊಪ್ಪಳ: ಕೊಪ್ಪಳ ಮತ್ತು ಭಾಗ್ಯನಗರಕ್ಕೆ ಸಂಪರ್ಕ ಕಲ್ಪಿಸುವ ರೈಲ್ವೆ ಮೇಲ್ಸೇತುವೆ ಕಾಮಗಾರಿ ಕುಂಟುತ್ತಾ ಸಾಗಿದ್ದು, ಜನವರಿ ಅಂತ್ಯಕ್ಕೆ ಕಾಮಗಾರಿ ಮುಗಿಯುವುದು ಅನುಮಾನ ಮೂಡಿಸಿದೆ.

ಮಾನಸಿಕವಾಗಿ ನಗರಕ್ಕೆ ಹತ್ತಿರದಲ್ಲಿದ್ದರೂ ಸಂಪರ್ಕವಿಲ್ಲದೆ. ನಗರದ ಜನತೆಗೆ ದೂರವಾಗಿರುವ ಸಮೀಪದ ಭಾಗ್ಯನಗರಕ್ಕೆ ಪ್ರತಿದಿನ ಸಂಚರಿಸಲು ಪರದಾಡಬೇಕಾದ ಸ್ಥಿತಿ ಇದೆ. ಕೇಂದ್ರ ಸರ್ಕಾರದ ಈ ಯೋಜನೆಗೆ ರಾಜ್ಯ ಸರ್ಕಾರ ಭೂಮಿ ಮತ್ತು ಶೇ 25ರಷ್ಟು ಹಣ ನೀಡಿದೆ. ಸಮನ್ವಯದ ಕೊರತೆಯಿಂದ ಈ ಯೋಜನೆ ಅನುಷ್ಠಾನಮತ್ತುಕಾಮಗಾರಿ ಮುಗಿಯಲು ಇನ್ನೂ ಸಮಯ ಹಿಡಿಯುತ್ತಿರುವುದರಿಂದ ನಗರಗಳ ನಿವಾಸಿಗಳ ಗೋಳು ಹೇಳತೀರದಾಗಿದೆ.

ಕೊಪ್ಪಳ ಬಸ್ ನಿಲ್ದಾಣದಿಂದ100 ಮೀಟರ್ ಅಂತರದಲ್ಲಿರುವ ಭಾಗ್ಯನಗರಕ್ಕೆ 4 ಕಿ.ಮೀ ಸುತ್ತಿ ಬಳಸಿ ಹೋಗಬೇಕಾದ ಪರಿಸ್ಥಿತಿ ಇದೆ. ಇದು ದಶಕದ ಕಾಲದ ಸಮಸ್ಯೆಯಾಗಿದ್ದು, ಮೇಲು ಸೇತುವೆ ಕಾಮಗಾರಿ ದಿನದಿಂದ ದಿನಕ್ಕೆ ವಿಳಂಬವಾಗುತ್ತಿದೆ.

ADVERTISEMENT

ಅಲ್ಲದೆ ಈಗ ಸೇತುವೆ ಕಾಮಗಾರಿ ಶೇ 50ರಷ್ಟು ಮುಗಿದಿದ್ದು, ಎರಡು ಕಡೆ ರಸ್ತೆ ನಿರ್ಮಿಸಬೇಕಾಗಿದೆ. ಆದರೆ ನಿರ್ಮಿಸಿದ ಸೇತುವೆಗೆ ಪಿಲ್ಲರ್ ಅಳವಡಿಸುವ ಕಾಮಗಾರಿ ನಡೆಯುತ್ತಿದ್ದು,ಸೇತುವೆ ಪಕ್ಕದಲ್ಲಿ ಆಳವಾಗಿ ತೆಗ್ಗು ತೋಡಿ ಪ್ಯಾನಲ್ ಅಳವಡಿಸಬೇಕಾಗಿದೆ. ಕೆಲವು ಪ್ಯಾನಲ್‌ಗಳು ಕುಸಿದು ಮತ್ತೆ ಮರು ಜೋಡಣೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.

ಈ ಮೊದಲು ಸೇತುವೆ ನಿರ್ಮಾಣಕ್ಕೆ ಭೂಸ್ವಾಧೀನ ಪ್ರಕ್ರಿಯೆ ಸೇರಿದಂತೆ ಅನೇಕ ಅಡೆತಡೆಗಳು ಇದ್ದವು. ಅವುಗಳನ್ನು ನಿವಾರಿಸಲು ವಿಳಂಬವಾಗಿದೆಯಲ್ಲದೆ. ಕೆಲವು ಪ್ರಭಾವಿಗಳ ಕೈವಾಡದಿಂದ ಸೇತುವೆ ನಿರ್ಮಾಣ ಕಾರ್ಯಕ್ಕೆ ವೇಗ ದೊರೆಯದೇ ಕುಟುಂತ್ತಾ ಸಾಗಿತ್ತು. ಅಲ್ಲದೆ ಈಗ ನಡೆಯುತ್ತಿರುವ ಕಾಮಗಾರಿಯಲ್ಲಿ ಕೆಲವು ಕಳಪೆ ಮಟ್ಟದಿಂದ ಕೂಡಿದ್ದು, ಜನರ ಜೀವನಕ್ಕೆ ಅಪಾಯ ತರುವ ಸಂಭವವಿದೆ ಕೆಲವು ಸಂಘಟನೆಗಳ ಮುಖಂಡರು ಆರೋಪಿಸಿದ್ದಾರೆ.

ರೈಲ್ವೆ ಇಲಾಖೆಮತ್ತು ಜಿಲ್ಲಾಡಳಿತದ ಸಹಯೋಗದಲ್ಲಿ ಕಾಮಗಾರಿ ನಡೆಯುತ್ತಿದೆ. ಬಸ್‌ ನಿಲ್ದಾಣದ ಸಮೀಪದ ಲೇಬರ್ ಕ್ರಾಸ್‌ನಿಂದ ಸೇತುವೆ ಮೇಲೆ ಸಂಚರಿಸಿ ರೈಲ್ವೆ ಹಳಿಯನ್ನು ಹಾಯ್ದು ಭಾಗ್ಯನಗರಕ್ಕೆ ಹೋಗಬಹುದಾದ ಸೇತುವೆ ಇದಾಗಿದೆ. ಈ ಸೇತುವೆಯಿಂದ ಕಣ್ಣಳತೆ ದೂರದಲ್ಲಿರುವ ಭಾಗ್ಯನಗರ ತಲುಪಬಹುದು. ಆದರೆ ನಿರ್ಮಾಣದ ಹಿಂದಿನ ಹಗ್ಗಜಗ್ಗಾಟದಿಂದ ಜನತೆ ಮಾತ್ರ ತೊಂದರೆ ಅನುಭವಿಸುವುದು ತಪ್ಪುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ.

ನಿತ್ಯವೂ ಸಂಕಟ: ಕೊಪ್ಪಳ ಮಾರ್ಗವಾಗಿ ಪ್ಯಾಸೆಂಜರ್‌ಗಿಂತ ಹೆಚ್ಚು ಗೂಡ್ಸ್ ರೈಲುಗಳು ಸಂಚರಿಸುತ್ತಿವೆ. ಪ್ರತಿ ಅರ್ಧ ಗಂಟೆಗೊಮ್ಮೆ ರೈಲು ಬಂದು ನಿಲ್ಲುತ್ತವೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರುರೈಲುಗಳ ಕೆಳಗಿನಿಂದ ಹಾಯ್ದು ಬರುವುದು ನಿತ್ಯದ ದೃಶ್ಯವಾಗಿದೆ. ಇದು ಅಪಾಯಕಾರಿಯಾದ ಸಂಚಾರವಾಗಿದ್ದು, ಜನರ ಜೀವಕ್ಕೆ ಕುತ್ತು ಬರುವ ಆತಂಕವಿದೆ. ಈ ಹಿನ್ನಲೆಯಲ್ಲಿ ಆದಷ್ಟು ಶೀಘ್ರ ಗುಣಮಟ್ಟದ ಕಾಮಗಾರಿಯೊಂದಿಗೆ ಸೇತುವೆ ಕಾರ್ಯವನ್ನು ಪೂರ್ಣಗೊಳಿಸಬೇಕು ಎಂದು ಭಾಗ್ಯನಗರ ಮೇಲ್ಸೇತುವೆ ಹೋರಾಟ ಸಮಿತಿ ಮುಖಂಡ ರಾಘವೇಂದ್ರ ಪಾನಘಂಟಿ ಹೇಳುತ್ತಾರೆ.

ಸಂಸದ ಸಂಗಣ್ಣ ಕರಡಿ ಅವರುಜನವರಿ ಅಂತ್ಯಕ್ಕೆ ಸೇತುವೆ ಕಾಮಗಾರಿ ಮುಕ್ತಾಯವಾಗಲಿದೆ ಎಂಬ ಭರವಸೆಯನ್ನು ವ್ಯಕ್ತಪಡಿಸಿದ್ದಾರೆ. ಆದರೆ ನಿಗದಿತ ಸಮಯದಲ್ಲಿ ಕಾಮಗಾರಿಮುಗಿಯಲಿದೆ ಎಂಬ ಅನುಮಾನ ಮೂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.