ತಾವರಗೇರಾ: ರಾಯನಕೆರೆ ಮುಂಗಾರು ಹಂಗಾಮಿನ ಮಳೆಯಿಂದ ಭರ್ತಿಯಾಗಿದ್ದು, ಮಳೆಯು ಕೆರೆಗೆ ಕಳೆ ತಂದಿದೆ. ಆದರೆ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯತನದಿಂದ ಕೆರೆ ಗೇಟ್ ವಾಲ್ ಮತ್ತು ತಡೆಗೋಡೆ ಬಿರುಕು ಬಿಟ್ಟಿದ್ದು, 4 ದಿನಗಳಿಂದ ಕಾಲುವೆ ಮೂಲಕ ಹರಿಯಬೇಕಿದ್ದ ನೀರು ಬೇರೆ ಸ್ಥಳದಿಂದ ರಭಸವಾಗಿ ನೀರು ಹರಿಯುತ್ತಿದ್ದು, ಕೆಳ ಭಾಗದ ಜನರು ಆತಂಕದಲ್ಲಿ ದಿನ ಕಳೆಯಬೇಕಿದೆ ಎಂದು ಸ್ಥಳಿಯರು ದೂರಿದ್ದಾರೆ
ಸದ್ಯ ವೈಜನಾಥ ದೇವಸ್ಥಾನ ಪಕ್ಕದ ಒಂದು ಮನೆಯು ಜಲಾವೃತವಾಗಿದೆ. ಕೆರೆ ಮುಂದಿನ ಬೃಹತ್ ಬದುವಿಗೆ ತಾಂತ್ರಿಕವಾಗಿ ಅಳವಡಿಸಿದ್ದ ಗೇಟ್ವಾಲ್ ಕಳೆದ 2 ವರ್ಷದ ಹಿಂದೆ ಇದೇ ರೀತಿ ಸಡೀಲವಾಗಿ ನೀರು ಹರಿದು ಹೋಗಿತ್ತು. ಆದರೆ ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ, ಸ್ಥಳಿಯರ ಸಹಕಾರದಿಂದ ಮರಳು ಚೀಲಗಳನ್ನು ಹಾಕಿ ಮುಚ್ಚಲಾಗಿತ್ತು. ಆದರೆ ಇಲಾಖೆ ಮಾತ್ರ ಗೇಟ್ ದುರಸ್ಥಿ ಮಾಡಲು ಮುಂದಾಗಿಲ್ಲ.
‘ಸಣ್ಣ ನೀರಾವರಿ ಇಲಾಖೆಯಿಂದ ₹1 ಕೋಟಿ ಅನುದಾನದಲ್ಲಿ ಕೆರೆ ಅಭಿವೃದ್ಧಿ ಮತ್ತು ತಡೆಗೋಡೆ ಕಲ್ಲು ಜೋಡಣೆ ಕಾಮಗಾರಿ ನಡೆದಿದ್ದು, ಇನ್ನೂ ಪೂರ್ಣಗೊಂಡಿಲ್ಲ. ಸಮರ್ಪಕವಾಗಿ ಕೆಲಸ ಮಾಡದ ಕಾರಣ ನೀರು ಪೋಲಾಗುತ್ತಿದೆ. ನೀರು ಹರಿದರೂ ಕಾಲುವೆ ಮೂಲಕ ಹೋಗಬೇಕಿತ್ತು. ಆದರೆ ಕೆಳ ಭಾಗದಲ್ಲಿ ಕೆಲವರು ಕಾಲುವೆ ನೆಲಸಮ ಮಾಡಿದ್ದಾರೆ. ಕೆರೆ ಅಭಿವೃದ್ಧಿ ಕಾಮಗಾರಿ ಸಮರ್ಪಕ ಇಲ್ಲದೇ ಕಳಪೆ ಮಟ್ಟದಲ್ಲಿ ಮಾಡಿದ್ದಾರೆ’ ಎಂದು ಸ್ಥಳೀಯ ಪ್ರಗತಿಪರ ರೈತ ಸಂತೋಷ ಸರನಾಡಗೌಡರ ಆರೋಪಿಸಿದರು.
ವಿಷಯ ತಿಳಿದು ಶನಿವಾರ ಬೆಳಿಗ್ಗೆ ಪಟ್ಟಣ ಪಂಚಾಯಿತಿ ಅಧ್ಯಕ್ಷ ನಾರಾಯಣಗೌಡ ಮೆದಿಕೇರಿ ಭೇಟಿ ನೀಡಿ ಸಂಬಂಧಪಟ್ಟ ಅಧಿಕಾರಿಗಳಿಗೆ ಸಂಪರ್ಕಿಸಿ, ತುರ್ತು ಕ್ರಮಕ್ಕೆ ಮುಂದಾಗುವಂತೆ ತಿಳಿಸಿದರು. ನಂತರ ಆಗಮಿಸಿದ ಸಣ್ಣ ನೀರಾವರಿ ಇಲಾಖೆ ಸಹಾಯಕ ಕಾರ್ಯಪಾಲಕ ದೇವೇಂದ್ರಪ್ಪ ಭೇಟಿ ನೀಡಿ ಪರಿಶೀಲಿಸಿದರು. ನಂತರ ಸ್ಥಳಿಯರ ಸಹಕಾರದಿಂದ ಎರಡು ದಿನದಲ್ಲಿ ನೀರು ಪೋಲಾಗದಂತೆ ಕ್ರಮ ಕೈಗೊಳ್ಳಲಾಗುವುದು’ ಎಂದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.