ADVERTISEMENT

‘ಬಸವ ತತ್ವ ಪ್ರತಿಪಾದಕ ಬಸವಯ್ಯ’-ಬಸವಾನುಯಿಗಳಿಂದ ನುಡಿನಮನ

ಬಸವಯ್ಯ ಸಸಿಮಠ ನಿಧನ: ಬಸವಾನುಯಿಗಳಿಂದ ನುಡಿನಮನ

​ಪ್ರಜಾವಾಣಿ ವಾರ್ತೆ
Published 14 ಜನವರಿ 2022, 5:48 IST
Last Updated 14 ಜನವರಿ 2022, 5:48 IST
ಕೊಪ್ಪಳದಲ್ಲಿ ಗುರುಬಸವ ಮಹಾಮನೆ ರೂವಾರಿ ಬಸವಯ್ಯ ಸಸಿಮಠ ಶ್ರದ್ಧಾಂಜಲಿ ಸಭೆಯಲ್ಲಿ ಮುಂಡರಗಿ ತೋಂಟದಾರ್ಯಮಠದ ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ ಮಾತನಾಡಿದರು. ಚನ್ನಬಸವಾನಂದ ಸ್ವಾಮೀಜಿ, ಮನಗುಂಡಿ ಬಸವಾನಂದ ಸ್ವಾಮೀಜಿ, ಮಹಾಂತದೇವರು ಇದ್ದರು
ಕೊಪ್ಪಳದಲ್ಲಿ ಗುರುಬಸವ ಮಹಾಮನೆ ರೂವಾರಿ ಬಸವಯ್ಯ ಸಸಿಮಠ ಶ್ರದ್ಧಾಂಜಲಿ ಸಭೆಯಲ್ಲಿ ಮುಂಡರಗಿ ತೋಂಟದಾರ್ಯಮಠದ ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ ಮಾತನಾಡಿದರು. ಚನ್ನಬಸವಾನಂದ ಸ್ವಾಮೀಜಿ, ಮನಗುಂಡಿ ಬಸವಾನಂದ ಸ್ವಾಮೀಜಿ, ಮಹಾಂತದೇವರು ಇದ್ದರು   

ಕೊಪ್ಪಳ: ಬಸವ ತತ್ವವನ್ನೇ ತಮ್ಮ ಜೀವನದ ಉಸಿರಾಗಿಸಿಕೊಂಡು ಶರಣಧರ್ಮ ಪ್ರಚಾರದಲ್ಲಿ ಕೊನೆಯವರೆಗೂ ಶ್ರಮಿಸಿದ ಬಸವಯ್ಯ ಸಸಿಮಠರ ಕಾರ್ಯ ಸದಾ ಸ್ಮರಣೀಯ ಎಂದು ಬೈಲೂರು-ಮುಂಡರಗಿ ತೋಂಟದಾರ್ಯಮಠದ ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ ಹೇಳಿದರು.

ಅವರು ಗುರುಬಸವ ಮಹಾಮನೆ ಸಂಸ್ಥಾಪಕರಾದ ರಾಷ್ಟ್ರೀಯ ಬಸವದಳದ ರೂವಾರಿ ಬಸವಯ್ಯ ಸಸಿಮಠ ಅವರ ನಿಧನಕ್ಕೆ ಶ್ರದ್ಧಾಂಜಲಿ ಸಲ್ಲಿಸಿ ನಂತರನುಡಿನಮನ ಸಲ್ಲಿಸಿ ಮಾತನಾಡಿದರು.

ಅಲ್ಲಿರುವುದು ನಮ್ಮನೆ, ಇಲ್ಲಿರುವುದು ಸುಮ್ಮನೆ, ಹುಟ್ಟಿದ ದೇವರು ಹುಲ್ಲು ಮೇಯಿಸುವುದಿಲ್ಲ ಎಂಬ ಸುಳ್ಳು ಗಾದೆಯನ್ನು ನಂಬಿ ಆಲಸ್ಯಗಳಾಗುವ ಬದಲು ಕಾಯಕ ಮಾಡಿ ಹೊಟ್ಟೆ ಹೊರೆಯಬೇಕು ಎಂಬ ಶರಣರ ಸಂದೇಶವನ್ನು ಅಕ್ಷರಶಃ ಪಾಲಿಸಿದವರು ಸಸಿಮಠ, ಇಲ್ಲಿ ನಾವು ಸುಮ್ಮನೆ ಇರಲು ಬಂದಿಲ್ಲ. ವ್ಯಕ್ತಿ, ವ್ಯಕ್ತಿತ್ವವನ್ನು ರೂಪಿಸಿಕೊಂಡು ಅಣ್ಣನ ವಚನದಂತೆ ಇದು ಕರ್ತಾರನ ಕಮ್ಮಟ, ಇಲ್ಲಿ ಸಲ್ಲುವವರು ಅಲ್ಲಿ ಸಲ್ಲುವವರು ಎಂಬ ವಾಸ್ತವ ಇಟ್ಟುಕೊಂಡು ಜೀವನ ನಡೆಸಿದಾಗ ಮಾತ್ರ ಅದರ ಸಾರ್ಥಕತೆ ಬರುತ್ತದೆ ಎಂದರು.

ADVERTISEMENT

ಸಮಾಜಮುಖಿ ಕಾರ್ಯ, ಪ್ರಗತಿಪರ ಚಿಂತನೆಗಳೇ ಲಿಂಗಾಯತ ಧರ್ಮದ ಆಶಯ. ಅವುಗಳನ್ನು ಸದಾ ಪಾಲಿಸಿಕೊಂಡು ಬಂದ ಬಸವಯ್ಯನವರ ಆದರ್ಶವನ್ನು ನಾವು ಪಾಲಿಸಬೇಕು ಎಂದು ಹೇಳಿದರು.

ಮನಗುಂಡಿ ಮಠದ ಬಸವಾನಂದ ಸ್ವಾಮೀಜಿ ಮಾತನಾಡಿ, ಶರಣರಿಗೆ ಮರಣವಿಲ್ಲ. ಶರಣರ ಸಾವನ್ನು ಮರಣದಲ್ಲಿ ನೋಡು ಎಂಬಂತೆ, ಅವರ ಚಿಂತನೆಗಳನ್ನು ನಾವು ಅನುಸರಿಸಿಕೊಂಡು ಹೋಗಬೇಕು. ದೇಹಕ್ಕೆ ಮೈಲಿಗೆ ಸೂತಕ, ಜಾತಕ ಎಂಬುವುದಿಲ್ಲ. ಮಂತ್ರಮಯ ಶರೀರವಾದ ಇದು ಶಾಶ್ವತವಾದದು ಎಂದು ಹೇಳಿದರು.

ತೋಂಟದಾರ್ಯಮಠದ ಮಹಾಂತದೇವರು, ಕೂಡಲಸಂಗಮದ ಚನ್ನಬಸವಾನಂದ ಸ್ವಾಮೀಜಿ, ಸಂಗಮೇಶ್ವರದೇವರು, ಬಸವರಾಜ ಬಳ್ಳೊಳ್ಳಿ, ರಾಜೇಶ ಶಶಿಮಠ, ಶಿವಕುಮಾರ ಕುಕನೂರ, ಗವಿ ಜಂತಕಲ್, ಗವಿಸಿದ್ಧಪ್ಪ ಕೊಪ್ಪಳ ಮುಂತಾದವರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.