ADVERTISEMENT

ದ್ವಿತೀಯ ಪಿಯುಸಿ ಪರೀಕ್ಷೆ ರದ್ದು: ಹೆಚ್ಚಿನ ಅಂಕಕ್ಕೆ ಪರೀಕ್ಷೆ

ಕೆಲವರ ಅಸಮಾಧಾನ, ಸರ್ಕಾರದ ನಿರ್ಧಾರಕ್ಕೆ ಪಾಲಕರ ಸ್ವಾಗತ

ಸಿದ್ದನಗೌಡ ಪಾಟೀಲ
Published 12 ಜೂನ್ 2021, 3:45 IST
Last Updated 12 ಜೂನ್ 2021, 3:45 IST
ವೀರಯ್ಯ ನೀಲಂಮಠ
ವೀರಯ್ಯ ನೀಲಂಮಠ   

ಕೊಪ್ಪಳ: ಕೊರೊನಾ ಲಾಕ್‌ಡೌನ್ ಮತ್ತು ಇನ್ನಿತರ ಕಾರಣಗಳಿಂದ ಪಿಯುಸಿ ತರಗತಿಗಳು ಸಮರ್ಪಕವಾಗಿ ನಡೆಯದ ಕಾರಣ ಪಿಯುಸಿ ದ್ವಿತೀಯ ವರ್ಷದ ವಿದ್ಯಾರ್ಥಿಗಳಿಗೆ ಶೇ 35ರಷ್ಟು ಅಂಕ ನೀಡಿ ಉತ್ತೀರ್ಣ ಮಾಡಲು ಪದವಿಪೂರ್ವ ಶಿಕ್ಷಣ ಮಂಡಳಿ ನಿರ್ಧರಿಸಿದೆ. ಇದು ಪರ, ವಿರೋಧ ಚರ್ಚೆಗೆ ಕಾರಣವಾಗಿದೆ.

ಕಾಲೇಜು ಬಂದ್ ಆಗಿದ್ದರೂ ಆನ್‌ಲೈನ್‌ ತರಗತಿ ಮೂಲಕ ಪಾಠದ ಬೋಧನೆ ನಡೆಯುತ್ತಿಲ್ಲ. ಪ್ರಾಯೋಗಿಕ ಮತ್ತು ವರ್ಗ ತರಗತಿಗಳು ಸರಿಯಾಗಿ ಆಗುತ್ತಿಲ್ಲ. ಈ ಕಾರಣ ಶಿಕ್ಷಣ ಮಂಡಳಿಯು ಮಹತ್ವದ ನಿರ್ಣಯ ಕೈಗೊಂಡಿದೆ.

‘ಪರಿಣಾಮಕಾರಿ ಬೋಧನೆ ಇಲ್ಲದೆ ವಿದ್ಯಾರ್ಥಿಗಳಿಗೆ ಅಂಕ ನೀಡುವುದು ಸೇರಿದಂತೆ ಬೇರೆ ಬೇರೆ ಗೊಂದಲಕ್ಕೆ ಕಾರಣವಾಗುತ್ತದೆ. ವೃತ್ತಿ ಶಿಕ್ಷಣ, ಸಾಮಾನ್ಯ ಪ್ರವೇಶ ಪರೀಕ್ಷೆ ಸೇರಿದಂತೆ ರಾಷ್ಟ್ರಮಟ್ಟದ ಪರೀಕ್ಷೆಗಳನ್ನು ಹೇಗೆ ಎದುರಿಸಬೇಕು? ಎಲ್ಲರನ್ನೂ ಉತ್ತೀರ್ಣ ಮಾಡುವ ಮಾಡಿದ್ದಲ್ಲಿ, ಶ್ರಮ ವಹಿಸಿ ಅಭ್ಯಾಸ ಮಾಡಿದ ಪ್ರತಿಭಾವಂತ ಮಕ್ಕಳಿಗೆ ಅನ್ಯಾಯವಾಗುತ್ತದೆ’ ಎಂದು ತಜ್ಞರು ಮತ್ತು ಪಾಲಕರು ಬೇಸರ ವ್ಯಕ್ತಪಡಿಸಿದ್ದಾರೆ.

ADVERTISEMENT

ಪ್ರಥಮ ಪಿಯುಸಿ: ಪ್ರಥಮ ಪಿಯುಸಿಯಲ್ಲಿ ಇರುವ ಮಕ್ಕಳಿಗೆ ಎರಡು ಅಸೈನ್‌ಮೆಂಟ್‌ಗಳನ್ನು ಸಂಬಂಧಿಸಿದ ಶಾಲಾ, ಕಾಲೇಜುಗಳ ವಾಟ್ಸ್ ಆಪ್‌ ಗುಂಪಿನಲ್ಲಿ ಪ್ರಶ್ನೆ ಪತ್ರಿಕೆ ಕಳುಹಿಸಲಾಗಿದೆ. ಅದನ್ನು ಬಿಡಿಸಿ ಗುಂಪಿನಲ್ಲಿ ಅಥವಾ ಕಾಲೇಜಿಗೆ ಕಳುಹಿಸಿದರೆ ಸರ್ಕಾರ ನೀಡಿರುವ ಶೇ 35 ಮತ್ತು ಅಂಕದ ಆಧಾರದ ಮೇಲೆ ಅವರ ಫಲಿತಾಂಶ ಮತ್ತು ಗ್ರೇಡ್‌ಗಳನ್ನು ನೀಡಿ ದ್ವಿತೀಯ ಪಿಯುಸಿಗೆ ಅವಕಾಶ ನೀಡಲಾಗುತ್ತದೆ.

ಸಿಇಟಿ: ಎಲ್ಲ ವಿದ್ಯಾರ್ಥಿಗಳು ಉತ್ತೀರ್ಣರಾಗುವುದರಿಂದ ಸಿಇಟಿ ಪರೀಕ್ಷೆ ಬರೆಯುವುದು ಹೇಗೆ ಎಂಬ ಪ್ರಶ್ನೆ ಕಾಡುತ್ತಿದೆ. ಸಿಇಟಿ, ಜೆಇಟಿ ಸೇರಿ ರಾಷ್ಟ್ರಮಟ್ಟದ ಪ್ರವೇಶ ಪರೀಕ್ಷೆಗಳಲ್ಲಿ ಅವರಿಗೆ ಈ ಹಿಂದಿನ ಯಾವುದೇ ಅಂಕ ಲಾಭ ತರುವುದಿಲ್ಲ. ಸಿಇಟಿಯಲ್ಲಿ ಪಡೆದ ಅಂಕಗಳ ಫಲಿತಾಂಶದ ಮೇಲೆ ವೃತ್ತಿ ಶಿಕ್ಷಣ, ವೈದ್ಯಕೀಯ ಕೋರ್ಸ್‌ಗೆ ಅನುಕೂಲ ಮಾಡಿಕೊಡಲಾಗುತ್ತದೆ ಎಂದು ಇಲಾಖೆಯ ಅಧಿಕಾರಿಗಳು ಹೇಳುತ್ತಾರೆ.

ತಜ್ಞರ ವಾದವೇನು: ಜೂನ್‌ ಅಂತ್ಯಕ್ಕೆ ಪಿಯುಸಿ ಪರೀಕ್ಷೆ ನಿಗದಿಯಾಗಿದ್ದು, ಮೊದಲೇ ಅವುಗಳನ್ನು ರದ್ದು ಮಾಡಬಾರದು. ಕೊರೊನಾ ಸೋಂಕು ಮತ್ತು ಪರಿಸ್ಥಿತಿ ನೋಡಿಕೊಂಡು ಪರೀಕ್ಷೆ ನಡೆಸಬಹುದು ಎಂಬುವುದು ಕೆಲವರ ವಾದವಾಗಿದೆ.

ಸಾಮಾಜಿಕ ಜಾಲತಾಣಗಳ ಬಳಕೆಯ ಅರಿವಿನ ಕೊರತೆ, ಮೊಬೈಲ್‌ ಸೇರಿದಂತೆ ಇತರ ವಸ್ತುಗಳನ್ನು ಖರೀದಿಸುವ ಶಕ್ಯ ಇಲ್ಲದ ಮತ್ತು ನೆಟ್‌ವರ್ಕ್‌ ಸಮಸ್ಯೆಯಿಂದ ಪರಿಣಾಮಕಾರಿ ಬೋಧನೆಯಾಗಿಲ್ಲ. ಎಲ್ಲರ ಉತ್ತೀರ್ಣವೇ ಸರಿಯಾದ ಮಾರ್ಗ ಎಂದು ಕೆಲವರು ಹೇಳುತ್ತಾರೆ.

'ಗ್ರಾಮೀಣ ಮಕ್ಕಳು ಸೌಲಭ್ಯದಿಂದ ವಂಚಿತರಾಗಿದ್ದು, ಅವರ ಮುಂದಿನ ಶಿಕ್ಷಣಕ್ಕೆ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಇದು ಉತ್ತಮ ನಿರ್ಧಾರ' ಎನ್ನುತ್ತಾರೆ ಪಾಲಕ ಬಸವರಾಜ ಪಾಟೀಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.