ಗಂಗಾವತಿ: ಪದವಿ ಶಿಕ್ಷಣ ಪ್ರವೇಶಕ್ಕೆ ಪ್ರವೇಶ ಪರೀಕ್ಷೆ ನಡೆಸಲು ನಿರ್ಧರಿಸಿದ ರಾಜ್ಯ ಸರ್ಕಾರದ ನಿಲುವನ್ನು
ಖಂಡಿಸಿ, ಎಸ್ಎಫ್ಐ ಸಂಘಟನೆ ಕಾರ್ಯಕರ್ತರು ನಗರದ ಶ್ರೀ ಕೃಷ್ಣದೇವರಾಯ ವೃತ್ತದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.
ಎಸ್ಎಫ್ಐ ಸಂಘಟನೆಯ ತಾಲ್ಲೂಕು ಅಧ್ಯಕ್ಷ ಗ್ಯಾನೇಶ್ ಕಡಗದ ಮಾತನಾಡಿ, ಪಿಯುಸಿ ಪಾಸಾದ ಪ್ರತಿಯೊಬ್ಬ ವಿದ್ಯಾರ್ಥಿ ಪದವಿ ಶಿಕ್ಷಣ ಪಡೆಯಲು ಆರ್ಹನಾಗಿರುತ್ತಾನೆ.
ಇದೀಗ ರಾಷ್ಟ್ರೀಯ ಶಿಕ್ಷಣ ನೀತಿ ಅನುಸಾರದ ಪ್ರಕಾರ ಪದವಿ ಶಿಕ್ಷಣಕ್ಕೆ ಪ್ರವೇಶ ಪರೀಕ್ಷೆ ನಡೆಸಲು ಹೊರಟಿರುವುದು ಸರಿಯಲ್ಲ ಎಂದು ಟೀಕಿಸಿದರು.
ಸರ್ಕಾರ ಇಂತಹ ಪ್ರವೇಶ ಪರೀಕ್ಷೆಗಳು ನಡೆಸಲು ಮುಂದಾ ದರೆ ಸಾಕಷ್ಟು ಸಂಖ್ಯೆಯ ವಿದ್ಯಾರ್ಥಿಗಳು ಪದವಿ ಶಿಕ್ಷಣ ದಿಂದ ವಂಚಿತರಾಗಿದ್ದಾರೆ. ಇದು ಒಂದು ವಿದ್ಯಾರ್ಥಿಗಳ ವಿರೋಧಿ ನೀತಿಯಾಗಿದೆ ಎಂದರು.
ಉನ್ನತ ಶಿಕ್ಷಣಕ್ಕೆ ತಳಹದಿ ಆಗಿದ್ದ ಪಿಯುಸಿ ವ್ಯಾಸಂಗ ತನ್ನ ಮಹತ್ವವನ್ನು ಕಳೆದುಕೊಳ್ಳಲಿದೆ. ಕೇಂದ್ರ ಸರ್ಕಾರ ಜನರ ಪರವಾದ ನೀತಿಗಳು ಜಾರಿ ತರದೆ ಎನ್ಇಪಿ ಹೆಸರಿನಲ್ಲಿ ಶಿಕ್ಷಣ ವ್ಯವಸ್ಥೆ ಹದಗೆಡಿಸಲಾಗುತ್ತಿದೆ. ಸರ್ಕಾರ ಎಚ್ಚೆತ್ತುಕೊಂಡು ಪದವಿ ಶಿಕ್ಷಣದ ಪ್ರವೇಶ ಪರೀಕ್ಷೆ ರದ್ದುಗೊಳಿಸಬೇಕು ಎಂದರು. ಸಂಘಟನೆ ಕಾರ್ಯಕರ್ತರಾದ ಶಿವುಕುಮಾರ, ಭೀಮೇಶ್, ಶರೀಫ್, ನಾಗರಾಜ, ಅಮರೇಶ್, ಶ್ರೀಧರ, ರುದ್ರಗೌಡ, ಶರಣ, ಬಾಳಪ್ಪ ಹುಲಿಹೈದರ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.