ಯಲಬುರ್ಗಾ (ಕೊಪ್ಪಳ ಜಿಲ್ಲೆ): ‘ಆರ್ಥಿಕವಾಗಿ ಹಿಂದುಳಿದ ಸಮುದಾಯಕ್ಕೆ ಶೇ 10ರಷ್ಟು ಮೀಸಲಾತಿ ನೀಡುವ ಪಟ್ಟಿಯಲ್ಲಿ 3ಬಿ ವರ್ಗವನ್ನೂ ಸೇರಿಸುವಂತೆ ಒತ್ತಾಯಿಸಲಾಗುತ್ತಿದೆ. ಕೂಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿ, ನಾನು ಮತ್ತು ವಿಜಯಾನಂದ ಕಾಶಪ್ಪನವರ ಬಿಟ್ಟರೆ ಬೇರೆ ಯಾರೂ ಇದಕ್ಕೆ ಧ್ವನಿಗೂಡಿಸಿಲ್ಲ. ಶಾಮನೂರು, ಖಂಡ್ರೆ ಇವರೆಲ್ಲ ಲಿಂಗಾಯತರು ಎಂದು ಹೇಳಿಕೊಂಡು ಲಾಭ ಹೊಡೆಯುವ ಗಿರಾಕಿಗಳು’ ಎಂದು ಶಾಸಕ ಬಸವನಗೌಡ ಪಾಟೀಲ ಯತ್ನಾಳ ಹರಿಹಾಯ್ದರು.
ಇಲ್ಲಿ ಮಂಗಳವಾರ ನಡೆದ ಪಂಚಮಸಾಲಿ ಸಮುದಾಯದ ಸಮಾವೇಶದಲ್ಲಿ ಮಾತನಾಡಿದರು.
'ಪಂಚಮಸಾಲಿ ಸಮಾಜದವರು ಕಡಿಮೆ ಸಂಖ್ಯೆಯಲ್ಲಿರುವ ಪ್ರದೇಶದಲ್ಲಿ ವಿಜಯಾನಂದ ಕಾಶಪ್ಪನವರ ಮತ್ತು ನನ್ನ ಭಾವಚಿತ್ರ ಸುಡುವವರು ತಾಕತ್ತಿದ್ದರೆ, ಗಂಡಸಾಗಿದ್ದರೆ ಹುಬ್ಬಳ್ಳಿಯಲ್ಲಿ ಶಾಸಕ ಜಗದೀಶ ಶೆಟ್ಟರ್ ಕ್ಷೇತ್ರದಲ್ಲಿ ಸುಡಲಿ ನೋಡೋಣ’ ಎಂದು ಸವಾಲು ಹಾಕಿದರು.
‘ಕೊಪ್ಪಳದಲ್ಲಿಯೂ ನನ್ನ ಫೋಟೊ ಸುಟ್ಟು ವಿಜಯಪುರಕ್ಕೆ ಹೋಗಿ ಮುಸ್ಲಿಮರಿಗೆ ಕಾಲು ಬಿದ್ದು ಯತ್ನಾಳರನ್ನು ಸೋಲಿಸಿಯೇ ತಿರುತ್ತೇವೆ ಎಂದು ಜಿಲ್ಲೆಯ ಅನೇಕರು ಮಾತನಾಡಿದ್ದಾರೆ. ನನಗೆ ಮುಸ್ಲಿಮರ ಮತಗಳು ಬೇಕಾಗಿಲ್ಲ ಎನ್ನುವುದು ನನ್ನ ಭಾವಚಿತ್ರ ಸುಟ್ಟವರಿಗೆ ಗೊತ್ತಿಲ್ಲ’ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.