ADVERTISEMENT

ಉತ್ತಮ ಹಿಪ್ಪುನೇರಳೆಯಿಂದ ಗುಣಮಟ್ಟದ ರೇಷ್ಮೆ: ಡಾ.ಉಮೇಶ

ಹಿಪ್ಪುನೇರಳೆ ತಾಕುಗಳ ನಿರ್ವಹಣೆ ಪ್ರಾತ್ಯಕ್ಷಿಕೆಯಲ್ಲಿ ರೈತರಿಗೆ ವಿಜ್ಞಾನಿಗಳ ಸಲಹೆ

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2024, 14:07 IST
Last Updated 24 ಆಗಸ್ಟ್ 2024, 14:07 IST
ಕುಷ್ಟಗಿ ತಾಲ್ಲೂಕು ಯಲಬುಣಚಿಯಲ್ಲಿ ಹಿಪ್ಪುನೇರಳೆ ತಾಕು ನಿರ್ವಹಣೆ ಕುರಿತ ಪ್ರಾತ್ಯಕ್ಷಿಕೆಯಲ್ಲಿ ಅಧಿಕಾರಿಗಳು, ರೈತರು ಪಾಲ್ಗೊಂಡಿದ್ದರು
ಕುಷ್ಟಗಿ ತಾಲ್ಲೂಕು ಯಲಬುಣಚಿಯಲ್ಲಿ ಹಿಪ್ಪುನೇರಳೆ ತಾಕು ನಿರ್ವಹಣೆ ಕುರಿತ ಪ್ರಾತ್ಯಕ್ಷಿಕೆಯಲ್ಲಿ ಅಧಿಕಾರಿಗಳು, ರೈತರು ಪಾಲ್ಗೊಂಡಿದ್ದರು    

ಕುಷ್ಟಗಿ: ಹಿಪ್ಪುನೇರಳೆ ತಾಕುಗಳನ್ನು ವೈಜ್ಞಾನಿಕವಾಗಿ ನಿರ್ವಹಿಸಿದರೆ ಗುಣಮಟ್ಟದ ಸೊಪ್ಪು ಮತ್ತು ರೇಷ್ಮೆ ಗೂಡುಗಳನ್ನು ಪಡೆಯಲು ಸಾಧ್ಯ’ ಎಂದು ರೇಷ್ಮೆ ಇಲಾಖೆ ವಿಜ್ಞಾನಿ ಡಾ.ಉಮೇಶ ಹೇಳಿದರು.

ಹಿಪ್ಪುನೇರಳೆ ಬೇಸಾಯ ಕ್ರಮಗಳ ಕುರಿತು ತಾಲ್ಲೂಕಿನ ಯಲಬುಣಚಿ ಗ್ರಾಮದ ರೈತ ಯಲ್ಲಪ್ಪ ಮಸನಪ್ಪನವರ ತೋಟದಲ್ಲಿ ಶುಕ್ರವಾರ ಏರ್ಪಡಿಸಿದ್ದ ಹಿಪ್ಪುನೇರಳೆ ಬೇಸಾಯದಲ್ಲಿ ಕೀಟ, ರೋಗಗಳ ನಿರ್ವಹಣೆ ಕುರಿತ ಪ್ರಾತ್ಯಕ್ಷಿಕೆ ಕಾರ್ಯಾಗಾರದಲ್ಲಿ ರೇಷ್ಮೆ ಬೆಳೆಗಾರರನ್ನು ಉದ್ದೇಶಿಸಿ ಅವರು ಮಾತನಾಡಿದರು.

‘ಪ್ರಮುಖವಾಗಿ ಹಿಪ್ಪುನೇರಳೆಗೆ ಮೈಟ್ಸ್, ರಸಹೀರುವ ಕೀಟ (ಥ್ರಿಪ್ಸ್) ಮತ್ತು ಎಲೆ ಸುರುಳಿ ಕೀಟಗಳ ಬಾಧೆ ಇರುತ್ತದೆ. ಸಮಗ್ರ ಕೀಟ ನಿರ್ವಹಣೆ ಕೈಗೊಂಡರೆ ಹಿಪ್ಪುನೇರಳೆ ಉತ್ತಮವಾಗಿ ಬೆಳೆಯುತ್ತದೆ. ಕೀಟ ಮತ್ತು ರೋಗ ನಿಯಂತ್ರಣದ ವಿಷಯದಲ್ಲಿ ರೈತರು ರೇಷ್ಮೆ ಇಲಾಖೆ ತಜ್ಞರ ಸಲಹೆ ಪಡೆಯಬೇಕು. ರೇಷ್ಮೆ ಬೇಸಾಯ ಇತರೆ ಬೆಳೆಗಳಿಗಿಂತಲೂ ರೈತರಿಗೆ ಉತ್ತಮ ಮತ್ತು ನಿರೀಕ್ಷಿತ ಆದಾಯ ತಂದುಕೊಡುವ ಬೆಳೆಯಾಗಿದೆ’ ಎಂದರು.

ADVERTISEMENT

ರೇಷ್ಮೆ ಇಲಾಖೆ ಕೊಪ್ಪಳ ಉಪನಿರ್ದೇಶಕ ಡಾ.ಎಸ್‌.ಸುಂದರರಾಜು ರೇಷ್ಮೆ ಬೆಳೆಗಾರರಿಗೆ ಇಲಾಖೆಯಿಂದ ದೊರೆಯುವ ಸೌಲಭ್ಯ ಹಾಗೂ ಪ್ರೋತ್ಸಾಹ ಕುರಿತು ವಿವರಿಸಿದರು. ಇಲಾಖೆ ಸಿಬ್ಬಂದಿ ಎಂ.ವಿ.ರವಿ ಮಾತನಾಡಿದರು.

ಧಾರವಾಡ ಬಳಿಯ ರಾಯಾಪುರ ರೇಷ್ಮೆ ತರಬೇತಿ ಸಂಸ್ಥೆಯ ಎಂ.ಎಂ.ಗದುಗಿನ, ಇಲಾಖೆಯ ನಿವೃತ್ತ ಅಧಿಕಾರಿ ಎಸ್‌.ಜಿ.ಗಣಾಚಾರಿ ರೇಷ್ಮೆ ಬೇಸಾಯ, ಹಿಪ್ಪುನೇರಳೆ ತಾಕುಗಳ ಮತ್ತು ರೇಷ್ಮೆ ಹುಳು ಸಾಕಾಣಿಕೆಯಲ್ಲಿನ ತಂತ್ರಜ್ಞಾನದ ಕುರಿತು ರೈತರಿಗೆ ಸಲಹೆ ನೀಡಿದರು.

ರೇಷ್ಮೆ ಇಲಾಖೆ, ರಾಯಪುರ ರೇಷ್ಮೆ ತರಬೇತಿ ಸಂಸ್ಥೆ, ರೇಷ್ಮೆ ಸಂಶೋಧನೆ ಮತ್ತು ವಿಸ್ತರಣೆ ಕೇಂದ್ರದ ವತಿಯಿಂದ ನಡೆದ ಕಾರ್ಯಾಗಾರದಲ್ಲಿ ಅನೇಕ ರೇಷ್ಮೆ ಬೆಳೆಗಾರರು, ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಭಾಗವಹಿಸಿದ್ದರು. ರೇಷ್ಮೆ ನಿರೀಕ್ಷಕ ಉಮೇಶ ಪಾಟೀಲ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.