ಕೊಪ್ಪಳ: ಇಲ್ಲಿನ ಗವಿಮಠದಲ್ಲಿ ಜು. 29ರಂದು ನಡೆಯಲಿರುವ ‘ಗವಿಮಠದ ಬೆಳಕಿನೆಡೆಗೆ’ ಕಾರ್ಯಕ್ರಮದ ಅಂಗವಾಗಿ ವಿಶೇಷ ಅಂಚೆ ಲಕೋಟೆ ಬಿಡುಗಡೆ ಮಾಡಲು ಅಂಚೆ ಇಲಾಖೆ ಮುಂದಾಗಿದೆ.
ಗದಗ ವಿಭಾಗದ ಅಂಚೆ ಅಧೀಕ್ಷಕರ ಕಾರ್ಯಾಲಯ ಮತ್ತು ಗವಿಸಿದ್ದೇಶ್ವರ ಸಂಸ್ಥಾನ ಮಠದ ಸಹಯೋಗದಲ್ಲಿ ಅಂದು ಸಂಜೆ 6.20ಕ್ಕೆ ಕಾರ್ಯಕ್ರಮ ನಡೆಯಲಿದೆ ಎಂದು ಗದಗ ಅಂಚೆ ವಿಭಾಗದ ಅಧೀಕ್ಷಕ ಚಿದಾನಂದ ಪದ್ಮಶಾಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಲಿದ್ದು, ಉತ್ತರ ಕರ್ನಾಟಕ ವಲಯದ ಪೋಸ್ಟ್ ಮಾಸ್ಟರ್ ಜನರಲ್ ಡಾ. ಎನ್. ವಿನೋದ ಕುಮಾರ ಅಂಚೆ ಲಕೋಟೆ ಬಿಡುಗಡೆ ಮಾಡಲಿದ್ದಾರೆ. ಕೊಪ್ಪಳ ಪ್ರಧಾನ ಅಂಚೆ ಪಾಲಕ ಎ.ಜೆ. ಭೀಮಸೇನ ಭಾಗವಹಿಸುವರು.
’ಲಕೋಟೆ ಮೇಲೆ ಮಠದ ಹಾಗೂ ಜಾತ್ರೆಯ ಸಮಯದಲ್ಲಿ ತೆಗೆದು ಚಿತ್ರದ 2000 ಪ್ರತಿಗಳನ್ನು ಮುದ್ರಿಸಲಾಗಿದೆ. ಭವಿಷ್ಯದಲ್ಲಿ ಸ್ಟಾಂಪ್ ಮುದ್ರಿಸಲು ಮೊದಲು ಲಕೋಟೆ ಮುದ್ರಣ ಆಗಲೇಬೇಕು ಎನ್ನುವುದು ಅಂಚೆ ಇಲಾಖೆಯ ನಿಯಮವಾಗಿದೆ. ಈ ರೀತಿಯ ಲಕೋಟೆಗಳನ್ನು ಬಹಳಷ್ಟು ಜನ ಬಳಕೆಗಿಂತ ಹೆಚ್ಚಾಗಿ ಸಂಗ್ರಹಕ್ಕಾಗಿ ಪಡೆದುಕೊಳ್ಳುತ್ತಾರೆ‘ ಎಂದು ಹೇಳಿದರು.
ಈ ಮೊದಲು ಕಿನ್ನಾಳ ಕಲೆ, ಮುಂಡರಗಿ ಭೀಮರಾಯರು ಮತ್ತು ನರಗುಂದ ಬಾಬಾಸಾಹೇಬರ ಲಕೋಟೆಗಳನ್ನು ಮುದ್ರಿಸಲಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.