ADVERTISEMENT

ಗಂಗಾವತಿ: ಅಕ್ರಮ ಗಣಿಗಾರಿಕೆ ತಡೆಗೆ ಕಠಿಣ ಕ್ರಮ -ನಾರಾಯಣ ರೆಡ್ಡಿ

​ಪ್ರಜಾವಾಣಿ ವಾರ್ತೆ
Published 29 ಜುಲೈ 2021, 6:25 IST
Last Updated 29 ಜುಲೈ 2021, 6:25 IST
ಗಂಗಾವತಿ ತಾ.ಪಂ ಸಭಾಂಗಣದಲ್ಲಿ ಮರಳು ಟಾಸ್ಕ್ ಫೋರ್ಸ್ ಸಮಿತಿ ಸಭೆ ನಡೆಯಿತು
ಗಂಗಾವತಿ ತಾ.ಪಂ ಸಭಾಂಗಣದಲ್ಲಿ ಮರಳು ಟಾಸ್ಕ್ ಫೋರ್ಸ್ ಸಮಿತಿ ಸಭೆ ನಡೆಯಿತು   

ಗಂಗಾವತಿ: ಜಿಲ್ಲೆಯ ಗಂಗಾವತಿ, ಕಾರಟಗಿ, ಕನಕಗಿರಿ ತಾಲ್ಲೂಕಿನ ಹಲವು ಪ್ರದೇಶಗಳಲ್ಲಿ ಅಕ್ರಮ ಮರಳು ಮತ್ತು ಕಲ್ಲು ಗಣಿಗಾರಿಕೆ ನಡೆಸಿ, ಪುನರಾವರ್ತಿತ ಗಣಿಗಾರಿಕೆ ಪ್ರಕರಣ ಹೊಂದಿರುವವರನ್ನು ಗಡಿಪಾರು ಮಾಡಲು ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ ಎಂದು ಉಪವಿಭಾಗಾಧಿಕಾರಿ ನಾರಾಯಣ ರೆಡ್ಡಿ ಕನಕರೆಡ್ಡಿ ಹೇಳಿದರು.

ನಗರದ ತಾಲ್ಲೂಕು ಪಂಚಾಯಿತಿ ಮಂಥನ ಸಭಾಂಗಣದಲ್ಲಿ ಬುಧವಾರ ನಡೆದ ಅಕ್ರಮ ಮರಳು ಮತ್ತು ಕಲ್ಲು ಗಣಿಗಾರಿಕೆ ತಡೆಗಟ್ಟುವ ತಾಲ್ಲೂಕು ಟಾಸ್ಕ್ ಫೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ತಾಲ್ಲೂಕಿನ ಆನೆಗೊಂದಿ ಸುತ್ತಮುತ್ತಲಿನ ಮಲ್ಲಾಪೂರ, ರಾಂಪುರ, ಬಸವನದುರ್ಗ, ಸಂಗಾಪುರ ಹಾಗೂ ಕಾರಟಗಿ, ಕನಕಗಿರಿ ತಾಲ್ಲೂಕಿನ ಪ್ರದೇಶಗಳಲ್ಲಿ ಪರವಾನಗಿ ಇಲ್ಲದೆ ನಿರಂತರ ಅಕ್ರಮ ಮರಳು ಮತ್ತು ಕಲ್ಲು ಗಣಿಗಾರಿಕೆ ನಡೆಯುತ್ತಿರುವ ವಿಷಯ ಬೆಳಕಿಗೆ ಬಂದಿದೆ. ಆದ್ದರಿಂದ ಈ ಭಾಗದಲ್ಲಿ ರಾತ್ರಿ ವೇಳೆ ಗಸ್ತು ನಡೆಸಲು ವಿಶೇಷ ತಂಡಗಳನ್ನು ರಚಿಸಿ ಆದೇಶ ನೀಡಲಾಗಿದೆ ಎಂದರು.

ADVERTISEMENT

ಗಂಗಾವತಿ ತಾಲ್ಲೂಕಿನಲ್ಲಿ ಅಕ್ರಮ ಗಣಿಗಾರಿಕೆ ಹೆಚ್ಚಿರುವುದರಿಂದ ತಹಶೀಲ್ದಾರ್ ಕಚೇರಿ ಆವರಣ ಮುಂಭಾಗದಲ್ಲಿ ಸಿ.ಸಿ ಕ್ಯಾಮೆರಾ ಅಳವಡಿಸಿ, ರಸ್ತೆ ಮೇಲೆ ಆಕ್ರಮ ಮರಳು ಮತ್ತು ಕಲ್ಲು ಸಾಗಾಟ ಮಾಡುವ ಟ್ರಾಕ್ಟರ್‌ಗಳ ಮೇಲೆ ನಿಗಾ ವಹಿಸಲಾಗುತ್ತದೆ ಎಂದು ತಿಳಿಸಿದರು.

ನೋಂದಣಿ ನಂಬರ್ ಪರಿಶೀಲನೆ: ತಾಲ್ಲೂಕಿನಲ್ಲಿ ನೋಂದಣಿ ಇಲ್ಲದೆ ಅಕ್ರಮ ಮರಳು, ಕಲ್ಲು ಸಾಗಾಟ ಮಾಡುವ ಲಾರಿ, ಟ್ರಾಕ್ಟರ್ ಗಳನ್ನು ಜಪ್ತಿ ಮಾಡಿ ನಗರ ಠಾಣೆಗೆ ಒಪ್ಪಿಸಬೇಕು. ನಂತರ ಮಾಲೀಕರನ್ನು ಕರೆದು ತನಿಖೆ ನಡೆಸಿ, ಟ್ರಾಕ್ಟರ್‌ಗಳಿಗೆ ನೋಂದಣಿ ನಂಬರ್, ಲಾರಿಗಳಿಗೆ ಜಿ.ಪಿ.ಎಸ್ ಅವಳಡಿಸಿ, ಅವುಗಳನ್ನು ಬಿಡುಗಡೆ ಮಾಡುವಂತೆ ಸೂಚಿಸಿದರು.

ಕಾರಟಗಿಯ ಹಗೆದಾಳ, ಚಳ್ಳೂರು, ತೊಂಡಿಹಾಳ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಮರಳು ಪಾಯಿಂಟ್‌ ಅನ್ನುನ್ನು ಗುರುತಿಸಿ, ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳಿಂದ ಜನರಿಗೆ ನೆರವಾಗಲೆಂದು ಅಧಿಕೃತವಾಗಿ ಮರಳು ಸಾಗಟಕ್ಕೆ ಅನುಮತಿ ನೀಡಲಾಗಿದೆ. ಹುಳ್ಕಿಹಾಳ ಗ್ರಾಮದ ಸರ್ವೆ ನಂ 7, ಖಾಸಗಿ ವ್ಯಕ್ತಿಯ 6 ಎಕರೆ ಭೂಮಿಯಲ್ಲಿ ಅಧಿಕೃತವಾಗಿ ಮರಳು ಮಾರಾಟ ಮಾಡಲು ಅವಕಾಶ ನೀಡ ಲಾಗಿದ್ದು, ಮರಳು ಅವಶ್ಯಕತೆ ಇರುವ ಸಾರ್ವಜನಿಕರು ಈ ವ್ಯವಸ್ಥೆ ಬಳಸಿಕೊಳ್ಳಬಹುದು ಎಂದರು.

ತಹಶೀಲ್ದಾರ್ ಯು.ನಾಗರಾಜ, ರವಿ ಅಂಗಡಿ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಡಾ.ಮೋಹನ್ ಸೇರಿದಂತೆ ಕಂದಾಯ ಇಲಾಖೆ, ತಾಲ್ಲೂಕು ಪಂಚಾಯಿತಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.