ತಾವರಗೇರಾ: ಸರ್ಕಾರಿ ಜಾಗದಲ್ಲಿ ಅನಧಿಕೃತವಾಗಿ ನಿರ್ಮಿಸಿದ್ದ ಶೆಡ್ನ್ನು ಪ.ಪಂ ಆಡಳಿತ ಬುಧವಾರ ಪೊಲೀಸ್ ಬಂದೋಬಸ್ತ್ ಮೂಲಕ ತೆರವು ಕಾರ್ಯ ನಡೆಸಿತು.
ಮುದೇನೂರು ರಸ್ತೆ ಪಕ್ಕದಲ್ಲಿ ಸರ್ಕಾರಿ ಜಾಗದಲ್ಲಿ ಹಲವು ದಿನಗಳಿಂದ ತಗಡಿನ ಶೆಡ್ ನಿರ್ಮಿಸಲಾಗಿತ್ತು. ಮತ್ತು ನಾಡ ಕಾರ್ಯಾಲಯ ಕಚೇರಿಗೆ ಅಡ್ಡಲಾಗಿ ಸಹ ಶೆಡ್ ನಿರ್ಮಿಸಲಾಗಿತ್ತು.
ಈ ಕುರಿತು ಪ.ಪಂ. ಮುಖ್ಯಾಧಿಕಾರಿ ಮಹೇಶ ಅಂಗಡಿ ಪ್ರತಿಕ್ರಿಯೆ ನೀಡಿ, ಸ್ಥಳೀಯರೊಬ್ಬರು ಪ.ಪಂ ಆಡಳಿತಕ್ಕೆ ಮತ್ತು ಜಿಲ್ಲಾ ಯೋಜನಾ ನಿರ್ದೇಶಕರಿಗೆ ನೀಡಿರುವ ದೂರಿನ ಮೇರೆಗೆ ಅನಧಿಕೃತ ಶೆಡ್ ತೆರವು ಮಾಡಲಾಗುತ್ತಿದೆ ಎಂದರು.
ಉಸ್ತುವಾರಿ ಸಚಿವರಿಗೆ, ಯೋಜನಾ ನಿರ್ದೇಶಕರಿಗೆ ದೂರು: ಸ್ಥಳೀಯ ವಕೀಲ ಸುರೇಶ ಗುಡದೂರು ಎಂಬುವವರು ಮುದೇನೂರು ರಸ್ತೆಯ ಸರ್ಕಾರಿ ಜಾಗದಲ್ಲಿ ಅನಧಿಕೃತವಾಗಿ ನಿರ್ಮಿಸಿರುವ ಶೆಡ್ಗಳನ್ನು ತೆರವು ಮಾಡುವಂತೆ ದೂರು ನೀಡಿರುವ ಪ್ರತಿ ‘ಪ್ರಜಾವಾಣಿ’ಗೆ ಲಭ್ಯವಾಗಿದೆ. ಈ ಬಗ್ಗೆ ಸುರೇಶ ಮಾತನಾಡಿ, ‘ಪಟ್ಟಣದ ನಾಡ ಕಾರ್ಯಾಲಯ, ರೈತ ಸಂಪರ್ಕ ಕೇಂದ್ರದ ಮುಂಭಾಗದ ದಾರಿಗೆ ಅಡ್ಡಲಾಗಿ ಅನಧಿಕೃತ ಶೆಡ್ ನಿರ್ಮಿಸಿದ್ದರಿಂದ ಕಚೇರಿಗೆ ಬರುವ ಸಾರ್ವಜನಿಕರು, ಅಧಿಕಾರಿಗಳಿಗೆ ಅನನುಕೂಲವಾಗಿತ್ತು. ಸರ್ಕಾರಿ ಜಾಗದಲ್ಲಿ ಇಂತಹ ಶೆಡ್ ನಿರ್ಮಾಣ ಮಾಡಿರುವದು ಖಂಡನೀಯ’ ಎಂದರು.
ಈ ಕುರಿತು ‘ಪ್ರಜಾವಾಣಿ’ಯಲ್ಲಿ ಕಳೆದ ವರ್ಷದ ನವೆಂಬರ್ 21ರಂದು ಸರ್ಕಾರಿ ಜಾಗದಲ್ಲಿ ಅಕ್ರಮ ಶೆಡ್ ಎಂಬ ಶೀರ್ಷಿಕೆಯಲ್ಲಿ ವರದಿ ಪ್ರಕಟಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.