ಕೊಪ್ಪಳ: ಕಡ್ಲಿಗಡಬ ಹುಣ್ಣಿಮೆಯೊಂದಿಗೆ ಬರುವ ಗುರುಪೂರ್ಣಿಮೆ ಯನ್ನು ಜಿಲ್ಲೆಯಾದ್ಯಂತ ಶನಿವಾರ ಸಂಭ್ರಮದಿಂದ ಆಚರಿಸಲಾಯಿತು.
ಭಾರತೀಯ ಸಂಪ್ರದಾಯದಲ್ಲಿ ಗುರುವಿಗೆ ವಿಶೇಷ ಸ್ಥಾನವಿದ್ದು, ಗುರುವಿನ ಸ್ಮರಣೆಗೆ ಮೀಸಲಾದ ಪವಿತ್ರ ದಿನವಾಗಿದೆ. ಗುರುಪೂರ್ಣಿಮೆಯಂದು ವಿಶೇಷವಾಗಿ ವೇದವ್ಯಾಸರು, ಶಿರಡಿ ಸಾಯಿಬಾಬಾ, ದತ್ತ ದೇವಸ್ಥಾನಗಳಲ್ಲಿ ಸಂಭ್ರಮದಿಂದ ನೆರೆವೇರಿತು.
ಭಾಗ್ಯನಗರದ ರಸ್ತೆಯಲ್ಲಿ ಇರುವ ಸಾಯಿ ಮಂದಿರಕ್ಕೆ ಸಾವಿರಾರು ಭಕ್ತರು ನೆರೆದು ದರ್ಶನ ಪಡೆದರು. ಬಂದ ಭಕ್ತರಿಗೆ ದಾಸೋಹದ ವ್ಯವಸ್ಥೆಯನ್ನು ಮಾಡಲಾಗಿತ್ತು. ಗುರು ಚರಿತ್ರೆ ಪಾರಾಯಣ, ವಿಶೇಷ ಪೂಜೆ, ಭಜನೆ, ಅಭಿಷೇಕ, ಮಹಾಮಂಗಳಾರತಿ ನಡೆಯಿತು. ಭಕ್ತರು ಸರದಿಯಲ್ಲಿ ನಿಂತು ದೇವರ ದರ್ಶನ ಪಡೆದರು.
ಗವಿಮಠಕ್ಕೆ ನೂರಾರು ಭಕ್ತರು ಭೇಟಿ ನೀಡಿ ಗವಿಸಿದ್ಧೇಶ್ವರನ ಗದ್ದುಗೆಗೆ ಪೂಜೆ ಸಲ್ಲಿಸಿದರು. ಗವಿಮಠದ ಹಿಂದಿನ ಶ್ರೀಗಳಾದ ಮರಿಶಾಂತವೀರ, ಶಿವಶಾಂತವೀರ ಸ್ವಾಮೀಜಿಗಳ ಗದ್ದುಗೆ ದರ್ಶನ ಪಡೆದರು. ಪೀಠಾಧಿಪತಿ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಭಕ್ತರಿಗೆ ಆಶೀರ್ವಾದ ನೀಡಿದರು.
ಶಂಕರಮಠ, ವಿವಿಧ ಮಠಗಳ ಹಿರಿಯ ಶ್ರೀಗಳಿಗೆ ವಿಶೇಷ ಸನ್ಮಾನ, ಶಿಕ್ಷಕರಿಗೆ ಗೌರವ ಸಮರ್ಪಣೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.