ADVERTISEMENT

ಕೊಪ್ಪಳ: ಜಲಾಶಯದಿಂದ ನದಿಗೆ ಶೀಘ್ರ ನೀರು

ತುಂಗಭದ್ರಾ: ಹೆಚ್ಚಿದ ಒಳ ಹರಿವು ನದಿಪಾತ್ರದ ಜನರಿಗೆ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 25 ಜುಲೈ 2021, 4:25 IST
Last Updated 25 ಜುಲೈ 2021, 4:25 IST
ಕೊಪ್ಪಳ ತಾಲ್ಲೂಕಿನ ಮುನಿರಾಬಾದಿನ ತುಂಗಭದ್ರಾ ಜಲಾಶಯದಲ್ಲಿ ಸಂಗ್ರಹವಾಗಿರುವ ನೀರು ಪ್ರಜಾವಾಣಿ ಚಿತ್ರ
ಕೊಪ್ಪಳ ತಾಲ್ಲೂಕಿನ ಮುನಿರಾಬಾದಿನ ತುಂಗಭದ್ರಾ ಜಲಾಶಯದಲ್ಲಿ ಸಂಗ್ರಹವಾಗಿರುವ ನೀರು ಪ್ರಜಾವಾಣಿ ಚಿತ್ರ   

ಕೊಪ್ಪಳ: ತಾಲ್ಲೂಕಿನ ಮುನಿರಾಬಾದಿನ ತುಂಗಭದ್ರಾ ಜಲಾಶಯದಿಂದ ನದಿಗೆ ಕ್ರೆಸ್ಟ್‌ಗೇಟ್‌ ತೆಗೆದು ನೀರನ್ನು ಯಾವುದೇ ಕ್ಷಣದಲ್ಲಿ ಬಿಡಲಿದ್ದು, ನದಿ ಪಾತ್ರದ ಜನತೆ ಎಚ್ಚರಿಕೆ ವಹಿಸುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ.

ಶಿವಮೊಗ್ಗ ಮತ್ತು ಮಲೆನಾಡಿನ ಭಾಗದಲ್ಲಿ ವ್ಯಾಪಕ ಮಳೆ ಆಗುತ್ತಿರುವುದರಿಂದ ತುಂಗಾ ಮತ್ತು ಭದ್ರಾ ನದಿಗಳು ತುಂಬಿ ಹರಿಯುತ್ತಿದ್ದು, ಭದ್ರಾ ಜಲಾಶಯಕ್ಕೆ ಲಕ್ಷಾಂತರ ಕ್ಯುಸೆಕ್‌ ನೀರುಹರಿದು ಬರುತ್ತಿದೆ. ಜಲಾಶಯದಲ್ಲಿ 73 ಟಿಎಂಸಿ ನೀರು ಸಂಗ್ರಹವಾಗಿದೆ. 1.20 ಲಕ್ಷ ಕ್ಯುಸೆಕ್‌ ನೀರು ನಿತ್ಯ ಹರಿದು ಬರುತ್ತಿದೆ.

200 ಟಿಎಂಸಿ ನೀರು ಸಂಗ್ರಹದ ಸಾಮರ್ಥ್ಯದ ಜಲಾಶಯದಲ್ಲಿ 40 ಅಡಿ ಟಿಎಂಸಿ ಹೂಳು ತುಂಬಿದೆ. ಹೀಗಾಗಿ 100 ಟಿಎಂಸಿ ನೀರು ಸಂಗ್ರಹಕ್ಕೆ ಕೆಲವೇ ದಿನಗಳು ಇದ್ದು, ಯಾವುದೇ ಸಂದರ್ಭದಲ್ಲಿ ನದಿಗೆ ನೀರು ಬಿಡಲಾಗುತ್ತಿದೆ ಎಂದು ಜಲಾಶಯದ ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಈ ಹಿನ್ನೆಲೆಯಲ್ಲಿ ನದಿ ಪಾತ್ರ ಜನರು ಎಚ್ಚರಿಕೆಯಿಂದ ಇರಬೇಕು. ಅನವಶ್ಯಕ ನದಿಗೆ ಇಳಿವುದು, ಜಾನುವಾರುಗಳನ್ನು ತೊಳೆಯುವುದು ಸೇರಿದಂತೆ ಅಪಾಯಕಾರಿ ಸ್ಥಳಗಳಲ್ಲಿ ಹೋಗಬಾರದು ಎಂದು ಜಿಲ್ಲಾಧಿಕಾರಿ ವಿಕಾಸ್‌ ಕಿಶೋರ್‌ ಸುರಳ್ಕರ್‌ ತಿಳಿಸಿದ್ದಾರೆ.

ಸಹಾಯವಾಣಿ ಆರಂಭ
ಮುಂಜಾಗ್ರತಾ ಕ್ರಮವಾಗಿ ನದಿಪಾತ್ರದ ಜನರು ಪ್ರವಾಹ, ಮಳೆ, ಹಾನಿ ಮುಂತಾದ ಸಮಸ್ಯೆಗಳಿಗೆ 24x7 ಸಹಾಯವಾಣಿ ಆರಂಭಿಸಿದೆ. ಕೊಪ್ಪಳ ಜಿಲ್ಲೆ- 08539-225001, ಕೊಪ್ಪಳ ತಾಲ್ಲೂಕು- 267031, ಕುಷ್ಟಗಿ- 267031, ಗಂಗಾವತಿ- 230929, ಕನಕಗಿರಿ ಮೊ-7406563856, ಕಾರಟಗಿ-275106, ಯಲಬುರ್ಗಾ- 220130, ಕುಕನೂರ ಮೊ- 805030345 ಗೆ ಸಂಪರ್ಕಿಸಿಬಹುದು ಎಂದು ಜಿಲ್ಲಾ ಆಡಳಿತ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.