ADVERTISEMENT

ಗಂಗಾವತಿಯಲ್ಲಿ ದಾಖಲೆಯಿಲ್ಲದ ಹಣ ಸಾಗಾಟ; ₹60 ಲಕ್ಷ ವಶ

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2023, 7:48 IST
Last Updated 25 ಮಾರ್ಚ್ 2023, 7:48 IST
ಪೊಲೀಸರು ವಶಪಡಿಸಿಕೊಂಡ ಹಣವನ್ನು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ ಶನಿವಾರ ಪರಿಶೀಲಿಸಿದರು
ಪೊಲೀಸರು ವಶಪಡಿಸಿಕೊಂಡ ಹಣವನ್ನು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ ಶನಿವಾರ ಪರಿಶೀಲಿಸಿದರು   

ಗಂಗಾವತಿ (ಕೊಪ್ಪಳ ಜಿಲ್ಲೆ): ಗಂಗಾವತಿ ತಾಲ್ಲೂಕಿನ ಬಸವಪಟ್ಟಣದ ಬಳಿ ದಾಖಲೆಗಳಿಲ್ಲದೆ ಶುಕ್ರವಾರ ರಾತ್ರಿ ಕಾರಿನಲ್ಲಿ ತೆಗೆದುಕೊಂಡು ಹೋಗುತ್ತಿದ್ದ ₹60 ಲಕ್ಷವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯ ಪ್ರಮುಖ ಸ್ಥಳಗಳಲ್ಲಿ ಚೆಕ್‌ ಪೋಸ್ಟ್‌ಗಳನ್ನು ಹಾಕಲಾಗಿದೆ. ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು ಹಣ ವಶಪಡಿಸಿಕೊಂಡರು. ಕಾರು ಕೊಪ್ಪಳದಿಂದ ಗಂಗಾವತಿ ಮಾರ್ಗದಲ್ಲಿ ಹೊರಟಿತ್ತು.

‘ಕಾರಿನಲ್ಲಿ ಗಂಗಾವತಿಯ ವೆಂಕಟೇಶ ಸಿಂಗನಾಳ, ವೀರಭದ್ರಪ್ಪ ಪಲ್ಲೇದ, ವಿರೂಪಾಕ್ಷಗೌಡ ಪಾಟೀಲ ಮತ್ತು ಕಾರು ಚಾಲಕ ಅಬ್ದುಲ್‌ ರಜಾಕ್‌ ಇದ್ದರು. ದಾಖಲೆ ಹಾಜರುಪಡಿಸದ ಕಾರಣ ಹಣ ವಶಪಡಿಸಿಕೊಂಡಿದ್ದು, ಇದರ ಮೂಲ ಪರಿಶೀಲಿಸುವಂತೆ ಆದಾಯ ತೆರಿಗೆ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಯೋಶೋಧಾ ವಂಟಗೋಡಿ ತಿಳಿಸಿದರು.

ADVERTISEMENT

ಗಂಗಾವತಿ ಡಿವೈಎಸ್‌ಪಿ ಶೇಖರಪ್ಪ ಎಚ್‌., ಗ್ರಾಮೀಣ ಠಾಣೆ ಪೊಲೀಸ್‌ ಇನ್‌ಸ್ಟೆಕ್ಟರ್‌ ಮಂಜುನಾಥ, ಪಿಎಸ್‌ಐ ಸುಜಾತ, ಸಿಬ್ಬಂದಿ ಸಿದ್ದನಗೌಡ, ಶಿವಶರಣ, ಮರಿಯಪ್ಪ, ಬಸವರಾಜ, ವೆಂಕರೆಡ್ಡಿ, ಮಲ್ಲಪ್ಪ, ಮಂಜುನಾಥ, ಸೈಯದ್ ಗೌಸ್‌, ರಾಘವೇಂದ್ರ, ಅಮರೇಶ ಹಾಗೂ ಪ್ರಭುಗೌಡ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.