ಕನಕಗಿರಿ: ಹತ್ತಿ ಬೀಜೋತ್ಪಾದನೆ ಮಾಡುವ ರೈತರಿಗೆ ಮೋಸ ಮಾಡುತ್ತಿರುವ ಸತ್ಯ, ಕಾವೇರಿ, ಮೈಕ್ರೋ, ತುಳಸಿ ಇತ್ಯಾದಿ ಹೆಸರಿನ ಕಂಪನಿಗಳ ಮೇಲೆ ಸೂಕ್ತ ಕ್ರಮ ಜರುಗಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕಾರ್ಯಕರ್ತರು ಮಂಗಳವಾರ ತಹಶೀಲ್ದಾರ್ ಕಚೇರಿ ಮುಂದೆ ಪ್ರತಿಭಟಿಸಿದರು.
ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರಣಪ್ಪ ಗದ್ದಿ, ತಾಲ್ಲೂಕು ಅಧ್ಯಕ್ಷ ಭೀಮನಗೌಡ ಮಾತನಾಡಿ, ‘ತಾಲ್ಲೂಕು ವ್ಯಾಪ್ತಿಯಲ್ಲಿ ರೈತರು ಹತ್ತಿ ಬೀಜೋತ್ಪಾದನೆಯಲ್ಲಿ ತೊಡಗಿಕೊಳ್ಳಲು ಸತ್ಯ, ರಾಶಿ, ತುಳಸಿ, ಮೈಕ್ರೋ, ಕಾವೇರಿ ಮತ್ತಿತರ ಕಂಪನಿಗಳು ಪ್ರೇರೇಪಿಸಿವೆ. ಕಂಪನಿಗಳು ರೈತರೊಂದಿಗೆ ಯಾವುದೇ ರೀತಿಯ ಕಾನೂನಾತ್ಮಕ ಕೃಷಿ ಒಪ್ಪಂದ ಮಾಡಿಕೊಂಡಿಲ್ಲ’ ಎಂದು ದೂರಿದರು.
ಬೀಜೋತ್ಪಾದನಾ ಹತ್ತಿ ಬೀಜಗಳನ್ನು ನೀಡಿದ್ದು ಡ್ರಿಪ್ ಸಾಮಾಗ್ರಿ, ಗೊಬ್ಬರ ಮತ್ತು ಕೀಟನಾಶಕಗಳನ್ನು ನೀಡುತ್ತಾ ಹತ್ತಿ ಬೆಳೆಯಲು ರೈತರನ್ನು ಹುರಿದುಂಬಿಸಿ ಈಗ ತಾನು ನೀಡಿರುವ ಒಪ್ಪಂದದಂತೆ ಬೀಜ ತೆಗೆದುಕೊಳ್ಳಲಾಗುವುದಿಲ್ಲ ಎಂದು ಹೇಳಿವೆ. ದ್ವಿಗುಣ ಆದಾಯದ ಆಸೆ ತೋರಿಸಿ ಬೀಜೋತ್ಪಾದನೆಯಲ್ಲಿ ತೊಡಗಿಸಿರುವ ಕಂಪನಿಗಳು, ಈಗ ಕೇವಲ ಒಂದು ಪ್ಲಾಟಿಗೆ ಒಂದರಿಂದ ಎರಡು ಕ್ವಿಂಟಲ್ ಬೀಜವನ್ನು ತೆಗೆದುಕೊಳ್ಳುತ್ತೇವೆ ಎಂದು ನೆಪ ಹೇಳುತ್ತಿವೆ. ಬೀಜೋತ್ಪಾದನೆ ಮಾಡಲು ರೈತರು ಸಾಲ ಮಾಡಿದ್ದು ಆತಂಕದಲ್ಲಿರುವ ರೈತರಿಗೆ ಕಂಪನಿಯವರು ವಂಚಿಸಿದ್ದಾರೆ ಎಂದು ಆರೋಪಿಸಿದರು.
ರೈತರಿಗೆ ವಂಚನೆ ಮಾಡುತ್ತಿರುವ ಬೀಜೋತ್ಪಾದನೆ ಕಂಪನಿಗಳು ಮಾಲೀಕರು ಹಾಗೂ ರೈತ ಮುಖಂಡರ ಸಭೆ ನಡೆಸಿ ಸಮಸ್ಯೆ ಬಗೆಹರಿಸಬೇಕು, ಇಲ್ಲದಿದ್ದರೆ ಕಂಪನಿಗಳ ಮಾಲೀಕರ ಮೇಲೆ ಸೂಕ್ತ ಕ್ರಮ ಕೈಗೊಂಡು ರೈತರಿಗೆ ಸೂಕ್ತ ನ್ಯಾಯ ಒದಗಿಸಬೇಕೆಂದು ಅವರು ಒತ್ತಾಯಿಸಿದರು.
ಸಂಘಟನೆಯ ಉಪಾಧ್ಯಕ್ಷ ಬಾಲಪ್ಪ, ಹನುಮೇಶ ಪೂಜಾರಿ, ಪ್ರಮುಖರಾದ ರುದ್ರಪ್ಪ, ಯಂಕಣ್ಣ, ಸುಭಾಸ ನಾಯಕ, ಲಕ್ಷ್ಮಣ ಉಪ್ಪಾರ, ವೀರೇಶ ಗಡಾದ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.