ADVERTISEMENT

ಕೊಪ್ಪಳ: ವಚನಕಾರರು ವೈದಿಕರ ವಿರೋಧಿಗಳಲ್ಲ

ಕಲ್ಯಾಣ ನಗರದಲ್ಲಿ ಮೂರ್ತಿಯ ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮ: ವೀಣಾ ಬನ್ನಂಜೆ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2023, 6:47 IST
Last Updated 6 ಫೆಬ್ರುವರಿ 2023, 6:47 IST
ಕೊಪ್ಪಳದಲ್ಲಿ ಭಾನುವಾರ ನಡೆದ ಕಾರ್ಯಕ್ರಮವನ್ನು ಅಧ್ಯಾತ್ಮ ಚಿಂತಕಿ ವೀಣಾ ಬನ್ನಂಜೆ ಉದ್ಘಾಟಿಸಿದರು
ಕೊಪ್ಪಳದಲ್ಲಿ ಭಾನುವಾರ ನಡೆದ ಕಾರ್ಯಕ್ರಮವನ್ನು ಅಧ್ಯಾತ್ಮ ಚಿಂತಕಿ ವೀಣಾ ಬನ್ನಂಜೆ ಉದ್ಘಾಟಿಸಿದರು   

ಕೊಪ್ಪಳ: ‘ವಚನಕಾರರು ವೈದಿಕರ ವಿರೋಧಿಗಳು ಎಂದು ಬಿಂಬಿಸಲಾಗುತ್ತಿದ್ದು, ಇದು ಸುಳ್ಳು. ಆ ವಚನಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳಬೇಕಾಗಿದೆ’ ಎಂದು ಅಧ್ಯಾತ್ಮ ಚಿಂತಕಿ ವೀಣಾ ಬನ್ನಂಜೆ ಅಭಿಪ್ರಾಯಪಟ್ಟರು.

ಇಲ್ಲಿನ ಕಲ್ಯಾಣ ನಗರದಲ್ಲಿ ಭಾನುವಾರ ಮಾರುತಿ ದೇವಸ್ಥಾನ ಮತ್ತು ಶಿಕ್ಷಣ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆ ವತಿಯಿಂದ ನಡೆದ ವರಸಿದ್ಧಿ ಗಣಪತಿ ಹಾಗೂ ಸ್ಪಟಿಕ ಸಹಿತ ಈಶ್ವರ ಮೂರ್ತಿ ಪ್ರಾಣಪ್ರತಿಷ್ಠಾಪನೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಸಮಾರೋಪದಲ್ಲಿ ಅವರು ಮಾತನಾಡಿದರು.

‘ವಚನಕಾರರು ವೇದಶಾಸ್ತ್ರಗಳನ್ನು ವಿರೋಧಿಸಿದರು ಎಂದು ಬಿಂಬಿಸಲಾಗುತ್ತಿದೆ. ಆದ್ದರಿಂದ ಪ್ರತ್ಯೇಕ ಧರ್ಮ ಎಂದು ಹೋರಾಟ ಮಾಡುತ್ತಿದ್ದಾರೆ. ಸರಿಯಾಗಿ ಅರ್ಥಮಾಡಿಕೊಳ್ಳುವ ಪ್ರಯತ್ನವಾಗುತ್ತಿಲ್ಲ. ವೇದಗಳನ್ನು ಪುಂಡರ ಸಮರ್ಥನೆಗೆ ಬಳಸಬಾರದು ಎನ್ನುವುದು ವಚನಕಾರರ ಉದ್ದೇಶವಾಗಿತ್ತು. ಅದನ್ನು ನಾವೆಲ್ಲರೂ ತಪ್ಪಾಗಿ ಅರ್ಥ ಮಾಡಿಕೊಂಡಿದ್ದೇವೆ. ವೇದವ್ಯಾಸರು ಯಾರನ್ನೂ ಅಖಂಡ ಎಂದು ಹೇಳಿಲ್ಲ. ಧರ್ಮಗಳಲ್ಲಿ ವಿರೋಧ ಇರಬಹುದು. ಆದರೆ, ಅಧ್ಯಾತ್ಮದಲ್ಲಿ ಎಂದಿಗೂ ವಿರೋಧ ಇಲ್ಲ. ಆಧ್ಯಾತ್ಮ ಧರ್ಮ, ಪಂಥ ಹಾಗೂ ಲಿಂಗಬೇಧಗಳನ್ನು ದೂರ ಮಾಡುತ್ತದೆ’ ಎಂದರು.

ADVERTISEMENT

‘ನಾನು ದೊಡ್ಡವನು, ನನ್ನ ಪಂಥ, ಜಾತಿ, ಮತೀಯ ದೊಡ್ದುಡ ಎನ್ನುವ ಜಗಳದಲ್ಲಿ ನಾವೆಲ್ಲರೂ ಬಿದ್ದಿದ್ದೇವೆ. ಜಗತ್ತು ಜಗಳದಲ್ಲಿ ಸಂತೋಷ ಪಡುತ್ತಿದೆ. ದೇವರ ದಾರಿ ಇರುವುದು ಎಲ್ಲರನ್ನೂ ಒಂದುಗೂಡಿಸಲು ಮಾತ್ರ ಎನ್ನುವ ಸತ್ಯವನ್ನು ನಾವೆಲ್ಲರೂ ಅರ್ಥ ಮಾಡಿಕೊಳ್ಳಬೇಕು’ ಎಂದರು.

ಬಿಜೆಪಿ ಮುಖಂಡ ಸಿ.ವಿ. ಚಂದ್ರಶೇಖರ್‌ ಮಾತನಾಡಿ ‘ಜೀವನದಲ್ಲಿ ಏನು ಮಾಡಬಾರದು ಅದನ್ನು ಆಸೆ, ದುರಾಸೆಗಳಿಗೆ ಒಳಗಾಗಿ ಮಾಡುತ್ತಿದ್ದೇವೆ. ನಮ್ಮಲ್ಲಿನ ಮನಸ್ಸು ಕಲ್ಮಷವಾಗಿದ್ದು, ಸತ್ಸಂಗದಿಂದ ಮಾತ್ರ ನೆಮ್ಮದಿ ಸಾಧ್ಯ’ ಎಂದರು.

ದೇವಸ್ಥಾನಕ್ಕೆ ವಿದ್ಯುತ್‌ ದೀಪಗಳಿಂದ ಹಾಗೂ ಪ್ರಣತಿಯಲ್ಲಿ ದೀಪ ಹಚ್ಚಿಟ್ಟು ಅಲಂಕಾರ ಮಾಡಲಾಗಿತ್ತು.

ದೇವಸ್ಥಾನ ಸಮಿತಿ ಅಧ್ಯಕ್ಷ ಯು.ಎಸ್‌. ಸೊಪ್ಪಿಮಠ, ಸದಸ್ಯ ಉಮೇಶ್ ವಾಲ್ಮೀಕಿ, ಸಾರಿಗೆ ಇಲಾಖೆ ನೌಕರ ಬಸವರಾಜ ಬಟ್ಟೂರು, ನಗರಸಭೆ ಸದಸ್ಯೆ ದೇವಕ್ಕ ಕಂದಾರಿ, ಹನುಮಂತಪ್ಪ ಮರೆಬಾಳ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.