ADVERTISEMENT

ಯಲಬುರ್ಗಾ | 'ವಾಲ್ಮೀಕಿ ಸಮುದಾಯ ಭವನ ದುರ್ಬಳಕೆ ಆರೋಪ'

ವಾಲ್ಮೀಕಿ ಸಮಾಜದ ಮುಖಂಡರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 19 ಜುಲೈ 2025, 6:37 IST
Last Updated 19 ಜುಲೈ 2025, 6:37 IST
ಯಲಬುರ್ಗಾ ಪಟ್ಟಣದ ಹೊರವಲಯದ ಕುದ್ರಿಕೊಟಗಿ ರಸ್ತೆಗೆ ಹೊಂದಿಕೊಂಡಿರುವ ವಾಲ್ಮೀಕಿ ಸಮುದಾಯ ಭವನದ ಎದುರು ವಾಲ್ಮೀಕಿ ನಾಯಕ ಸಮಾಜದ ಮುಖಂಡರು ದಿಢೀರ್‌ ಪ್ರತಿಭಟನೆ ನಡೆಸಿ ದುರಸ್ತಿಗೊಳಿಸಲು ಒತ್ತಾಯಿಸಿದರು. ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ನಾಗೇಶ ಸೇರಿ ಅನೇಕರು ಹಾಜರಿದ್ದರು
ಯಲಬುರ್ಗಾ ಪಟ್ಟಣದ ಹೊರವಲಯದ ಕುದ್ರಿಕೊಟಗಿ ರಸ್ತೆಗೆ ಹೊಂದಿಕೊಂಡಿರುವ ವಾಲ್ಮೀಕಿ ಸಮುದಾಯ ಭವನದ ಎದುರು ವಾಲ್ಮೀಕಿ ನಾಯಕ ಸಮಾಜದ ಮುಖಂಡರು ದಿಢೀರ್‌ ಪ್ರತಿಭಟನೆ ನಡೆಸಿ ದುರಸ್ತಿಗೊಳಿಸಲು ಒತ್ತಾಯಿಸಿದರು. ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ನಾಗೇಶ ಸೇರಿ ಅನೇಕರು ಹಾಜರಿದ್ದರು   

ಯಲಬುರ್ಗಾ: ಪಟ್ಟಣದ ಕುದ್ರಿಕೊಟಗಿ ರಸ್ತೆಯಲ್ಲಿರುವ ವಾಲ್ಮೀಕಿ ಸಮುದಾಯ ಭವನವನ್ನು, ಪಕ್ಕದಲ್ಲಿಯೇ ಕಾಲೇಜು ನಿರ್ಮಿಸುತ್ತಿರುವ ಗುತ್ತಿಗೆದಾರರು ದುರ್ಬಳಕೆ ಮಾಡಿಕೊಂಡಿದ್ದಾರೆ. ಇದರಿಂದ ಕಟ್ಟಡವು ಸಂಪೂರ್ಣ ಹಾಳಾಗಿದ್ದು, ಸಂಬಂಧಿಸಿದವರು ಸೂಕ್ತ ಕ್ರಮಕೈಗೊಳ್ಳಬೇಕು ಎಂದು ವಾಲ್ಮೀಕಿ ಸಮುದಾಯದ ಮುಖಂಡರು ಆಗ್ರಹಿಸಿದ್ದಾರೆ. ಸಮುದಾಯ ಭವನಕ್ಕೆ ಭೇಟಿ ನೀಡಿದ ಸಮುದಾಯದವರು, ಕಟ್ಟಡದ ದುರವಸ್ಥೆಯನ್ನು ಕಂಡು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ವಿರುದ್ಧ ಹರಿಹಾಯ್ದರು.

ಪಂಚಾಯಿತಿ ವ್ಯಾಪ್ತಿಗೆ ಸೇರಿದ ಈ ಭವನವನ್ನು ಸರಿಯಾದ ರೀತಿ ನಿರ್ವಹಿಸುವಲ್ಲಿ ವಿಫಲರಾಗಿದ್ದರಿಂದ ಸದ್ಬಳಕೆಯಾಗದೇ ದುರ್ಬಳಕೆಯಾಗುತ್ತಿದೆ. ಸಮುದಾಯದ ಕಲ್ಯಾಣ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಇರುವ ಈ ಭವನವನ್ನು ಗುತ್ತಿಗೆದಾರರು ಸಿಮೆಂಟ್, ಖಾಲಿ ಚೀಲ ಹಾಗೂ ಇನ್ನಿತರ ಪರಿಕರಗಳನ್ನು ಇಟ್ಟುಕೊಂಡಿದ್ದು ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ಬೇಜವಾಬ್ದಾರಿತನಕ್ಕೆ ಸಾಕ್ಷಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ತಾಲ್ಲೂಕು ಅಧ್ಯಕ್ಷ ಮಾನಪ್ಪ ಪೂಜಾರ ಮತನಾಡಿ, ‘₹1 ಕೋಟಿ ವೆಚ್ಚದಲ್ಲಿ ಕೃಷ್ಣ ಭಾಗ್ಯ ಜಲನಿಗಮದವರಿಂದ 2016-17ರಲ್ಲಿ ನಿರ್ಮಾಣಗೊಂಡಿದ್ದ ಈ ಸಮುದಾಯ ಭವನದ ಕಿಟಕಿಗಳಿಗೆ ಅಳವಡಿಸಿದ ಗ್ಲಾಸ್‍ಗಳು ಒಡೆದಿವೆ. ಗೋಡೆಯು ಸಿಮೆಂಟ್‍ನಿಂದ ಮೆತ್ತಿಕೊಂಡು ಹಾಳಾಗಿವೆ. 20ಕ್ಕು ಹೆಚ್ಚು ಫ್ಯಾನುಗಳನ್ನು ಕಿತ್ತುಕೊಂಡು ಹೋಗಿದ್ದಾರೆ. ಟೈಲ್ಸ್‌ಗಳು ಕೂಡ ಒಡೆದಿವೆ. ಹೀಗೆ ಸಮುದಾಯದ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಮುನ್ನವೇ ದುರ್ಬಳಕೆಯಾಗಿ ಹಾಳಾಗುತ್ತಿರುವುದು ಸಮುದಾಯಕ್ಕೆ ಮಾಡಿದ ಅವಮಾನ’ ಎಂದು ಬೇಸರ ವ್ಯಕ್ತಪಡಿಸಿದರು.

ADVERTISEMENT

ಸಂಘದ ಕಾರ್ಯದರ್ಶಿ ಶ್ರೀಕಾಂತ ಮಾಲಿಪಾಟೀಲ ಮಾತನಾಡಿ, ‘ಸಮುದಾಯದ ಸುತ್ತಲೂ ಮುಳ್ಳಿನ ಗಿಡಗಳು ಬೆಳೆದಿವೆ. ಅವುಗಳನ್ನು ಸ್ವಚ್ಛಗೊಳಿಸಿ ದುರಸ್ತಿಗೊಳಿಸಿ ಸದ್ಬಳಕೆಗೆ ಅನುಕೂಲ ಮಾಡಿಕೊಡಬೇಕು’ ಎಂದು ಆಗ್ರಹಿಸಿದರು.

ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ನಾಗೇಶ ಮಾತನಾಡಿ, ‘ಭವನ ನಿರ್ಮಾಣಗೊಂಡು 10 ವರ್ಷಗಳು ಗತಿಸಿವೆ. ಈವರೆಗೆ ಪಂಚಾಯಿತಿಗೆ ಹಸ್ತಾಂತರಿಸಿಲ್ಲ. ನಮ್ಮ ಸುಪರ್ದಿಗೆ ಬಂದ ಮೇಲೆ ಅದರ ನಿರ್ವಹಣೆಗೆ ಕ್ರಮವಹಿಸಲಾಗುತ್ತದೆ. ಈ ಬಗ್ಗೆ ಸಂಬಂಧಪಟ್ಟವರೊಂದಿಗೆ ಚರ್ಚಿಸಲಾಗಿದೆ. ಆದರೂ ಹಸ್ತಾಂತರಕ್ಕೆ ಕ್ರಮಕೈಗೊಂಡಿಲ್ಲ. ಗುತ್ತಿಗೆದಾರರಿಗೆ ತಮ್ಮ ಸಾಮಗ್ರಿಗಳನ್ನು ತೆರವುಗೊಳಿಸಲು ತಿಳಿಸಲಾಗುವುದು’ ಎಂದು ಹೇಳಿದರು.

ಸಂಘಟನೆ ಉಪಾಧ್ಯಕ್ಷ ಗುಂಡನಗೌಡ ಮಾಲಿಪಾಟೀಲ, ಹನಮಂತಪ್ಪ ತಳವಾರ, ಪದಾಧಿಕಾರಿಗಳಾದ ಶಂಕ್ರಪ್ಪ ಶಾಖಾಪುರ, ಹನಮಗೌಡ ಮಾಲಿಪಾಟೀಲ, ಚನ್ನಬಸವ ಗುಮಗೇರಿ, ಮೌನೇಶ ತಳವಾರ, ಶರಣಗೌಡ ಮಾಲಿಗೌಡ್ರ, ಲಕ್ಷ್ಮಣ ಕುಲಕರ್ಣಿ, ಶರಣಪ್ಪ ಹಿರೇಮನಿ, ಹನಮಂತ ತಲ್ಲೂರು, ಹನಮೇಶ ಕೋನಸಾಗರ, ಶರಣಪ್ಪ ಹಂಚಿ ಸೇರಿ ಅನೇಕರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.