ಕುಷ್ಟಗಿ: ಪಟ್ಟಣ ಸೇರಿದಂತೆ ತಾಲ್ಲೂಕಿನಾದ್ಯಂತ ಸರ್ಕಾರಿ ಕಚೇರಿಗಳಲ್ಲಿ ಮಹಾಯೋಗಿ ವೇಮನ ಜಯಂತಿ ಆಚರಿಸಲಾಯಿತು.
ತಹಶೀಲ್ದಾರ್ ಕಚೇರಿ ಸಭಾಂಗಣದಲ್ಲಿ ವೇಮನ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಶಾಸಕ ಅಮರೇಗೌಡ ಬಯ್ಯಾಪುರ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು,‘ವೇಮನ ಅವರ ವಚನಗಳಲ್ಲಿನ ಸಂದೇಶಗಳು ಮನುಕುಲ ಸರಿಯಾದ ದಾರಿಯಲ್ಲಿ ನಡೆಯುವುದಕ್ಕೆ ದಾರಿ ದೀಪವಾಗುತ್ತವೆ’ ಎಂದು ಹೇಳಿದರು.
‘ಮನು ಕುಲದ ಸಂತರಾಗಿರುವ ವೇಮನ ತಮ್ಮ ವಚನಗಳ ಮೂಲಕ ಸಮಾಜದಲ್ಲಿನ ಅಂಕುಡೊಂಕುಗಳನ್ನು ತಿದ್ದುವ ಪ್ರಯತ್ನ ಮಾಡಿದ್ದಾರೆ.
ಹಾಗಾಗಿ ಅಂಥ ವಚನಗಳು ಸರ್ವಕಾಲಕ್ಕೂ ಪ್ರಸ್ತುತ ಎನಿಸುತ್ತವೆ. ಸಮಾಜದಲ್ಲಿ ಈ ಹಿಂದೆ ಆಗಿ ಹೋಗಿರುವ ಶರಣರು, ಸಂತರು, ದಾಸಶ್ರೇಷ್ಠರು ಸಮಾಜದ ಪರಿವರ್ತನೆಯನ್ನು ಬಯಸುತ್ತ ಬಂದಿದ್ದನ್ನು ಕಾಣುತ್ತೇವೆ. ಹಾಗಾಗಿ ಅಂಥ ಮಹಾನ್ ವ್ಯಕ್ತಿಗಳನ್ನು ಯಾವುದೇ ಒಂದು ಜಾತಿಸಮುದಾಯಕ್ಕೆ ಸೀಮಿತಗೊಳಿಸುವುದು ಸರಿಯಲ್ಲ. ಅವರ ತತ್ವ, ಆದರ್ಶಗಳು ಎಲ್ಲ ಜಾತಿಗಳಿಗೂ ಅನ್ವಯಿಸುತ್ತವೆ’ ಎಂದರು.
ತಹಶೀಲ್ದಾರ್ ಎಂ.ಸಿದ್ದೇಶ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಕೆ.ತಿಮ್ಮಪ್ಪ, ಪ್ರಮುಖರಾದ ಶರಣಗೌಡ ಪಾಟೀಲ, ಸೋಮಶೇಖರ ವೈಜಾಪುರ ಸೇರಿದಂತೆ ರಡ್ಡಿ ಸಮುದಾಯದ ಹಿರಿಯರು, ಯುವಕರು. ಶಿರಸ್ತೆದಾರ ಸತೀಶ್, ಶಿಕ್ಷಕ ಮಲ್ಲಪ್ಪ ಕುದರಿ ಇತರರು ಇದ್ದರು. ಪಟ್ಟಣದ ವಿವಿಧ ಸರ್ಕಾರಿ ಕಚೇರಿಗಳು, ಗ್ರಾಮ ಪಂಚಾಯಿತಿಗಳು, ಶಾಲೆ ಕಾಲೇಜುಗಳಲ್ಲಿಯೂ ವೇಮನ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.