ADVERTISEMENT

‘ಜಲ ಸಂರಕ್ಷಣೆ ಎಲ್ಲರ ಜವಾಬ್ದಾರಿ’

ಬೆಣಕಲ್ ಗ್ರಾ.ಪಂ.ನಲ್ಲಿ ‘ದಿನ್ನೆಯಿಂದ ತೆಗ್ಗಿನೆಡೆಗೆ’ ಕಾರ್ಯಾಗಾರ

​ಪ್ರಜಾವಾಣಿ ವಾರ್ತೆ
Published 14 ಜನವರಿ 2022, 13:29 IST
Last Updated 14 ಜನವರಿ 2022, 13:29 IST
ಕುಕನೂರು ತಾಲ್ಲೂಕಿನ ಬೆಣಕಲ್ ಗ್ರಾಮದಲ್ಲಿ ಗುರುವಾರ ನಡೆದ ದಿನ್ನೆ ಇಂದ ತೆಗ್ಗಿನಡೆಗೆ ಕಾರ್ಯಾಗಾರಕ್ಕೆ ಚಾಲನೆ ನೀಡಲಾಯಿತು
ಕುಕನೂರು ತಾಲ್ಲೂಕಿನ ಬೆಣಕಲ್ ಗ್ರಾಮದಲ್ಲಿ ಗುರುವಾರ ನಡೆದ ದಿನ್ನೆ ಇಂದ ತೆಗ್ಗಿನಡೆಗೆ ಕಾರ್ಯಾಗಾರಕ್ಕೆ ಚಾಲನೆ ನೀಡಲಾಯಿತು   

ಕುಕನೂರು: ಜಲ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿ. ಅದಕ್ಕಾಗಿ ಎಲ್ಲರೂ ಸೇರಿ ಪಣ ತೊಡೋಣ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಸೊಮಸೇಖರ್ ಬಿರಾದಾರ ಹೇಳಿದರು.

ತಾಲ್ಲೂಕಿನ ಬೆಣಕಲ್ ಗ್ರಾಮದ ಅನ್ನದಾನೇಶ್ಚರ ಶಾಖಾ ಮಠದಲ್ಲಿ ಗುರುವಾರ ಮನೆ-ಮನೆಗೂ ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ ‘ದಿನ್ನೆ ಇಂದ ತೆಗ್ಗಿನಡೆಗೆ’ ಕಾರ್ಯಗಾರ ಉದ್ಘಾಟಿಸಿ ಅವರು ಮಾತನಾಡಿದರು.

ನರೇಗಾ ಯೋಜನೆಯಡಿ ಈಗಾಗಲೇ ಜಲ‌ಮೂಲಗಳನ್ನು ಹೂಳೆತ್ತುವ ಮೂಲಕ ಅಭಿವೃದ್ಧಿ ಪಡಿಸಲಾಗುತ್ತಿದೆ. ಮಳೆ ನೀರು ಸಂಗ್ರಹವಾದರೆ ನಮ್ಮ ನೆಲ, ಜಲ, ಸಮೃದ್ಧವಾಗಲು ಸಾಧ್ಯ. ಆ ನಿಟ್ಟಿನಲ್ಲಿ ನಾವೆಲ್ಲ ಪ್ರಯತ್ನ ಮಾಡೋಣ ಎಂದು ಕರೆ ನೀಡಿದರು.

ADVERTISEMENT

ತಾಲ್ಲೂಕಿನಲ್ಲಿ ಸಾಕಷ್ಟು ಕರೆಗಳಿದ್ದು, ಆದರೂ ನೀರಿನ ಸಮಸ್ಯೆಯಾಗುತ್ತಿದೆ. ಅಂದರೆ ಅವುಗಳ ರಕ್ಷಣೆ ಮಾಡಬೇಕಿದೆ. ಈಗ ನರೇಗಾ ಯೋಜನೆಯಡಿ ಜಲ ಮೂಲಗಳ ಸಂರಕ್ಷಣೆಗೆ ಬದು, ಕೆರೆ, ಕೃಷಿಹೊಂಡ, ನಾಲಾ ಮುಂತಾದ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದ್ದೇವೆ. ಹಾಗೇಯೆ ಗ್ರಾಮಪಂಚಾಯಿತಿ ಹಾಗೂ ಶಾಲಾ ಕಟ್ಟಡಗಳಿಗೆ ಮಳೆನೀರು ಕೊಯ್ಲು ಘಟಕ ನಿರ್ಮಿಸಿ ಮಳೆನೀರನ್ನು ತಡೆಯಲಾಗುತ್ತಿದೆ. ಉದ್ಯೋಗ ಖಾತ್ರಿಯಲ್ಲಿ 250ಕ್ಕೂ ಹೆಚ್ಚು ಸೌಲಭ್ಯಗಳಿದ್ದು, ಅವುಗಳ ಸದುಪಯೊಗ ಪಡೆದುಕೊಳ್ಳಬೇಕು ಎಂದರು.

ಎಫ್‌ಇಎಸ್ ಸಂಸ್ಥೆಯ ಅಂತರ್ಜಲ ಚೇತನ ಜಿಲ್ಲಾ ಸಂಯೋಜಕ ವಾಸುದೇವ ಮೂರ್ತಿ ಮಾತನಾಡಿ, ಮಣ್ಣು ನೀರಿನಿಂದ ಸಸ್ಯ ಸಂಪತ್ತು ಸೃಷ್ಟಿಯಾಗುತ್ತದೆ. ನಮಗೆ ವ್ಯವಸಾಯಕ್ಕೆ ಬೇಕಾಗುವ ಮಳೆನೀರನ್ನು ಜಮೀನಿನಲ್ಲೆ ತಡೆಯುವಂತೆ ಮಾಡಬೇಕು. ಆಗ ಮಾತ್ರ ಜಮೀನಿನಲ್ಲಿ ತಂಪು ವಾತಾವರಣ ಇರಲು ಸಾಧ್ಯ. ಇದಕ್ಕಾಗಿ ಉದ್ಯೋಗ ಖಾತ್ರಿಯಲ್ಲಿ ಬದು, ಕೃಷಿಹೊಂಡ, ರಿಚಾರ್ಜ್ ಪಿಟ್ ಮುಂತಾದ ಕಾಮಗಾರಿಗಳ ಸದ್ಬಳಕೆ ಮಾಡಿಕೊಂಡು ಮಳೆನೀರು ತಡೆಯಿರಿ ಎಂದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕಸ್ತೂರೆವ್ವ ನಿಂಗಪ್ಪ ಹಂಚಿನಾಳ, ತಾಂತ್ರಿಕ ಸಂಯೋಜಕ ಯಮನೂರ, ಐಇಸಿ ಸಂಯೋಜಕ ಶರಣಪ್ಪ ಹಾಳಕೇರಿ, ಪಿಡಿಒ ಕೃಷ್ಣಾರೆಡ್ಡಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.