ಹಿರೇವಡ್ರಕಲ್ಲ (ಯಲಬುರ್ಗಾ): ತಾಲ್ಲೂಕಿನ ಹಿರೇವಡ್ರಕಲ್ಲ ಗ್ರಾಮದ ಹೊರವಲಯದ ಗುಡ್ಡದಲ್ಲಿನ ಕರಡಿಗಳ ಹಾವಳಿ ಹೆಚ್ಚಾಗಿದ್ದು, ಅಕ್ಕಪಕ್ಕದ ಹೊಲದಲ್ಲಿ ಬೆಳೆದ ವಿವಿಧ ಹಣ್ಣಿನ ಬೆಳೆಯನ್ನು ನಾಶ ಮಾಡುತ್ತಿವೆ.
ಅರಣ್ಯ ಇಲಾಖೆಯವರು ಸೂಕ್ತ ಕ್ರಮಕ್ಕೆ ಮುಂದಾಗಬೇಕು ಎಂದು ರೈತರು ಆಗ್ರಹಿಸಿದ್ದಾರೆ.
‘ಬೇರೆ ಪ್ರದೇಶದಿಂದ ಬಂದ ಕರಡಿಗಳು ಈ ಪ್ರದೇಶದ ಗುಡ್ಡದಲ್ಲಿ ಸೇರಿವೆ. ಈ ಕರಡಿಗಳಿಂದ ಯಾವೊಂದು ಬೆಳೆ ಉಳಿಯುತ್ತಿಲ್ಲ. ಅಲ್ಲದೇ ಹೊಲಗಳಿಗೆ ಹೋಗಿ ಬರುವುದಕ್ಕೂ ಭಯವಾಗುತ್ತಿದೆ. ಇಲ್ಲಿಯ ರೈತರು ರಾತ್ರಿ ಸಮಯದಲ್ಲಿ ಹೊಲದಲ್ಲಿಯೇ ಮಲಗುವುದರಿಂದ ಬಹುತೇಕ ರೈತರು ಭಯದ ನೆರಳಲ್ಲಿಯೇ ಜೀವನ ಮಾಡುವಂತಾಗಿದೆ’ ಎಂದು ರೈತ ಯಮನೂರಪ್ಪ ನೋವು ತೋಡಿಕೊಂಡಿದ್ದಾರೆ.
ಈ ಭಾಗದ ಗ್ರಾಮಗಳಾದ ಕಟಗಿಹಳ್ಳಿ, ಗಾಣದಾಳ, ತಿಪ್ಪನಾಳ, ಚಿಕ್ಕವಡ್ರಕಲ್ಲ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಕಲ್ಲಂಗಡಿ ಹಣ್ಣಿನ ಬೆಳೆ ವ್ಯಾಪಕವಾಗಿ ಬೆಳೆಯುತ್ತಿದ್ದು, ರೈತರು ಸಾಲಮಾಡಿ ಬೀಜೋತ್ಪಾದನೆಯಲ್ಲಿ ತೊಡಗಿಕೊಂಡಿದ್ದಾರೆ. ಆದರೆ ಕರಡಿಗಳ ಹಾವಳಿಯಿಂದ ಬೆಳೆದ ಬೆಳೆ ಕೈಗೆ ಸೇರದಂತಾಗಿದೆ. ಇದರಿಂದ ರೈತರು ತೀವ್ರ ತೊಂದರೆಗೆ ಸಿಲುಕಿಕೊಳ್ಳುತ್ತಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಕಾಳಜಿ ತೋರಿ ರೈತರನ್ನು ರಕ್ಷಿಸಬೇಕು. ನಾಶವಾಗಿರುವ ಹಣ್ಣಿನ ಬೆಳೆಗೆ ಪರಿಹಾರ ನೀಡಬೇಕು ಎಂದು ಕೋರಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.