ಚಿಕ್ಕಬಳ್ಳಾಪುರ: ರಾಜ್ಯ ಸರ್ಕಾರಿ ನೌಕರರ ಸಂಘದ ಚಿಕ್ಕಬಳ್ಳಾಪುರ ಜಿಲ್ಲಾ ಘಟಕದ ಅಧ್ಯಕ್ಷ, ಖಜಾಂಚಿ ಮತ್ತು ಸಂಘದ ರಾಜ್ಯ ಪರಿಷತ್ತಿನ ಸದಸ್ಯ ಸ್ಥಾನಕ್ಕೆ ಗುರುವಾರ ನಗರದಲ್ಲಿ ಚುನಾವಣೆ ನಡೆಯಿತು.
ನಗರದ ರಾಜ್ಯ ಸರ್ಕಾರಿ ನೌಕರರ ಭವನದಲ್ಲಿ ಬೆಳಿಗ್ಗೆ 11 ರಿಂದ 4ರ ವರೆಗೆ ಮತದಾನ ನಡೆಯಿತು. ಸಂಘದ ತಾಲ್ಲೂಕು ಘಟಕಗಳ 57 ನಿರ್ದೇಶಕರು ಮತದಾನ ಮಾಡಿದರು. ಆರೋಗ್ಯ ಇಲಾಖೆ ಆಹಾರ ಸುರಕ್ಷತಾ ತಾಲ್ಲೂಕು ಅಧಿಕಾರಿ ಜಿ.ಹರೀಶ್ ಜಿಲ್ಲಾ ಘಟಕದ ಅಧ್ಯಕ್ಷರಾಗಿ, ಖಜಾಂಚಿಯಾಗಿ ಆರೋಗ್ಯ ಇಲಾಖೆಯ ದಿನೇಶ್ ಕುಮಾರ್ ಆಯ್ಕೆಯಾದರು.
ರಾಜ್ಯ ಪರಿಷತ್ತಿನ ಸದಸ್ಯರಾಗಿ ಜಿಲ್ಲಾಧಿಕಾರಿ ಕಚೇರಿ ಉಪತಹಶೀಲ್ದಾರ್ ಆರ್.ರಾಜೇಂದ್ರ ಆಯ್ಕೆಯಾದರು. ಚಲಾವಣೆಯಾದ ಒಟ್ಟು ಮತಗಳಲ್ಲಿ ಹರೀಶ್ 36 ಮತ ಪಡೆದು ಜಯಶೀಲರಾದರೆ, ಅವರ ಪ್ರತಿಸ್ಪರ್ಧಿ ಎ. ನಾರಾಯಣಸ್ವಾಮಿ ಅವರು 21 ಮತ ಪಡೆದು ಪರಾಭವಗೊಂಡರು.
ಖಜಾಂಚಿ ಹುದ್ದೆಯ ಸ್ಪರ್ಧಿಗಳ ಪೈಕಿ ದಿನೇಶ್ ಕುಮಾರ್ 42 ಮತ ಪಡೆದರೆ, ಬಾಬಾಜಾನ್ ಅವರು 15 ಮತಗಳನ್ನು ಪಡೆದು ಸೋಲುಂಡರು. ರಾಜ್ಯ ಪರಿಷತ್ತಿನ ಸದಸ್ಯ ಸ್ಥಾನಕ್ಕೆ ಮೂರು ಸ್ಪರ್ಧಿಗಳು ಪೈಪೋಟಿ ನಡೆಸಿದ್ದರು. ಈ ಪೈಕಿ ಆರ್. ರಾಜೇಂದ್ರ 37 ಮತ ಪಡೆದು ಆಯ್ಕೆಯಾದರೆ, ಎಸ್.ಪಿ. ರವಿಶಂಕರ್ 8, ಎಂ.ಪಿ. ನಜೀರ್ ಹುಸೇನ್ 12 ಮತ ಪಡೆದು ಪರಾಭವಗೊಂಡರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.