ADVERTISEMENT

ಅಂತಿಮ ತೀರ್ಮಾನದವರೆಗೆ ಧರಣಿ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2012, 7:35 IST
Last Updated 10 ಅಕ್ಟೋಬರ್ 2012, 7:35 IST

ಶ್ರೀರಂಗಪಟ್ಟಣ: ಕಾವೇರಿ ನದಿ ನೀರನ್ನು ತಮಿಳುನಾಡಿಗೆ ಬಿಡುವ ಕುರಿತು ಕಾವೇರಿ ನದಿ ಪ್ರಾಧಿಕಾರ ಅಥವಾ ಸುಪ್ರೀಂಕೋರ್ಟ್ ಅಂತಿಮ ತೀರ್ಮಾನ ಕೊಡುವವರೆಗೆ ಪಟ್ಟಣದಲ್ಲಿ ಪ್ರತಿಭಟನಾ ಧರಣಿ ನಿರಂತರವಾಗಿ ನಡೆಯಲಿದೆ ಎಂದು ಕಾವೇರಿ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಕೆ.ಎಸ್.ನಂಜುಂಡೇಗೌಡ ತಿಳಿಸಿದರು.

ಕುವೆಂಪು ವೃತ್ತದಲ್ಲಿ ಮಂಗಳವಾರ ನಡೆದ ಧರಣಿಯಲ್ಲಿ ಭಾಗವಹಿಸಿ ಮಾತನಾಡಿದರು.
ಜಲಾಶಯದಿಂದ ತಮಿಳುನಾಡಿಗೆ ಹರಿಸುತ್ತಿದ್ದ ನಿರು ನಿಲ್ಲಿಸಿರುವುದರಿಂದ ರಸ್ತೆತಡೆ, ಸರ್ಕಾರಿ ಕಚೇರಿಗಳಿಗೆ ಮುತ್ತಿಗೆ ಇತರ ಕಾರ್ಯಕ್ರಮ ನಿಲ್ಲಿಸಲಾಗಿದೆ. ಗಾಂಧಿ ಮಾರ್ಗದಲ್ಲಿ ಧರಣಿ ಸತ್ಯಾಗ್ರಹ ನಡೆಯಲಿದೆ. ವಿವಿಧ ಗ್ರಾಮಗಳ ರೈತರು, ಸಂಘಟನೆಗಳ ಕಾರ್ಯಕರ್ತರು ಸರದಿಯಂತೆ ಈ ಧರಣಿಯಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.

ತಾಲ್ಲೂಕು ಮಡಿವಾಳ ಮಾಚಿದೇವ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು ಗೋವಿಂದಪ್ಪ ನೇತೃತ್ವದಲ್ಲಿ ಮಂಗಳವಾರ ಧರಣಿ ನಡೆಸಿದರು.

ಕೆ.ಜಯರಾಂ ಇತರರು ಪಾಲ್ಗೊಂಡಿದ್ದರು. ಕಾವೇರಿ ಹಿತರಕ್ಷಣಾ ಸಮಿತಿ ಕಾರ್ಯದರ್ಶಿ ಸಿ.ಪುಟ್ಟಸ್ವಾಮಿ, ವಕೀಲ ಗಂಜಾಂ ರವೀಶ್, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪುರುಷೋತ್ತಮ, ಸರ್ವಜನಿಕ ಹಿತರಕ್ಷಣಾ ಸಮಿತಿ ಅಧ್ಯಕ್ಷ ಡಿ.ಎಂ.ರವಿ, ರೈತ ಸಂಘದ ಅಧ್ಯಕ್ಷ ಕೆಂಪೇಗೌಡ, ಬಾಲಕೃಷ್ಣ, ಶಿವಕುಮಾರ್, ಕಡತನಾಳು ಬಾಬು, ಕುಮಾರ್ ಧರಣಿಯಲ್ಲಿ ಭಾಗವಹಿಸಿದ್ದರು.

ಕಾವೇರಿ: ದಸಂಸ ಬೆಂಬಲ
ಮಳವಳ್ಳಿ: ಕಾವೇರಿ ಹಿತರಕ್ಷಣಾ ಸಮಿತಿ ಅಧ್ಯಕ್ಷ ಹಿರಿಯ ಮುತ್ಸದ್ದಿ ಜಿ.ಮಾದೇಗೌಡರವರು ಕಾವೇರಿ ನದಿ ನೀರಿನ ಹಂಚಿಕೆ ವಿಷಯವಾಗಿ ತಮ್ಮ ಜೀವವನ್ನೇ ಪಣಕ್ಕಿಟ್ಟು ಹೋರಾಟ ಮಾಡುತ್ತಿದ್ದು ಅವರ ಆರೋಗ್ಯದಲ್ಲಿ ಏರುಪೇರಾದರೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೆ ನೇರಹೊಣೆಯಾಗಬೇಕಾಗುತ್ತದೆ ಎಂದು ತಾಲ್ಲೂಕು ದಲಿತ ಜಾಗೃತಿ ವೇದಿಕೆ ಎಚ್ಚರಿಸಿದೆ.

ಕಾವೇರಿ ನದಿ ಹಂಚಿಕೆ ವಿಷಯದಲ್ಲಿ ಹಿಂದಿನಿಂದಲೂ ಆಡಳಿತ ನಡೆಸಿದ ಎಲ್ಲಾ ಸರ್ಕಾರಗಳು ನ್ಯಾಯಾಲಯಕ್ಕೆ ಹಾಗೂ ಸುಪ್ರೀಂ ಕೋರ್ಟ್‌ಗೆ ಸಮರ್ಪಕ ಮಾಹಿತಿಸ ನೀಡದೆ ರಾಜಕೀಯ ವಿಷಯವನ್ನಾಗಿ ಮಾಡಿ ರಾಜ್ಯದ ಜನರ ಬದುಕನ್ನು ಬಲಿಕೊಡಲಾಗಿದೆ. ನೀರಿಗಾಗಿ ಎರಡು ರಾಜ್ಯಗಳು ಹರತಪಿಸುತ್ತಿರುವ ಈ ಸಂದರ್ಭದಲ್ಲಿಯಾದರೂ ರಾಷ್ಟ್ರೀಯ ಜಲನೀತಿ ರೂಪಿಸಬೇಕೆಂದು ಹಾಗೂ ನದಿಗಳ ಜೋಡಣೆಗೆ ಮುಂದಾಗಬೇಕೆಂದು ದಲಿತ ಜಾಗೃತಿ ವೇದಿಕೆಯ ಅಧ್ಯಕ್ಷ ಹಾಗೂ ಪುರಸಭೆ ಮಾಜಿ ಉಪಾದ್ಯಕ್ಷ ಡಿ.ಶಿವಕುಮಾರ್ ಆಗ್ರಹಿಸಿದ್ದಾರೆ.

ರೈಲು ತಡೆ ಯತ್ನ-ಬಂಧನ
ಕಿಕ್ಕೇರಿ: ಮಂದಗೆರೆಯಲ್ಲಿ ಕರವೇ ಹಾಗೂ ಕರ್ನಾಟಕ ಕಾವಲು ಪಡೆಯ ಕಾರ್ಯಕರ್ತರು ಸೋಮವಾರ ಕಾವೇರಿ ನೀರು ನಿಲುಗಡೆಗೆ ಆಗ್ರಹಿಸಿ ರೈಲು ತಡೆಯೊಡ್ಡುವ ಮೂಲಕ ಪ್ರತಿಭಟಿಸಲು ಮುಂದಾದರು.

ಮೈಸೂರಿನಿಂದ ಶಿವಮೊಗ್ಗಕ್ಕೆ ಹೋಗುತ್ತಿದ್ದ ರೈಲು ತಡೆಯಲು ಯತ್ನಿಸಿದ ಕನ್ನಡಪರ ಹೋರಾಟಗಾರರು ಕೇಂದ್ರ ಸರ್ಕಾರ, ಜಯಲಲಿತಾ, ಕಾವೇರಿ ನದಿ ಪ್ರಾಧಿಕಾರದ ವಿರುದ್ಧ ಘೋಷಣೆ ಕೂಗಲು ಮಂದಾದರು. ಪೋಲೀಸರು ಚಳುವಳಿಗಾರರನ್ನು ರೈಲು ತಡೆಯುವ ಮುನ್ನವೇ ಬಂಧಿಸಿ ಬಿಡುಗಡೆ ಮಾಡಿದರು.

ತಾಲ್ಲೂಕು ಅಧ್ಯಕ್ಷ ಎ.ಸಿ.ಕಾಂತರಾಜು, ಹೋಬಳಿ ಅಧ್ಯಕ್ಷ ಗುರುಮೂರ್ತಿ, ಸಮೀದ್, ಕುಮಾರ್, ನಾಗೇಂದ್ರ, ಚೇತನ, ಪಯಾಜ್, ಗಿರೀಶ್, ಕರ್ನಾಟಕ ಕಾವಲು ಪಡೆಯ ತಾಲ್ಲೂಕು ಅಧ್ಯಕ್ಷ ಎ.ಸಿ.ಚಂದ್ರಶೇಖರ್, ಹೋಬಳಿ ಅಧ್ಯಕ್ಷ ಸತ್ಯ, ಗುಂಡ, ಮಂಜು, ಕಿರಣ್, ಪ್ರಕಾಶ, ಗೋಪಾಲ, ಮಂಜು, ಗೃಹರಕ್ಷಕದಳದ ಘಟಕಾಧಿಕಾರಿ ಜಿ.ಪಿ.ರಾಜು, ಹರೀಶ್, ಶಂಕರ್ ಇದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT