ADVERTISEMENT

ಅಂಬರೀಷ್ ಚುನಾವಣಾ ಪ್ರಚಾರ ಶುರು

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2013, 5:52 IST
Last Updated 23 ಏಪ್ರಿಲ್ 2013, 5:52 IST

ಮಂಡ್ಯ: ಬೆಂಗಳೂರಿನ ಮನೆ ಹಾಗೂ ಕಚೇರಿಯನ್ನು ಮಂಡ್ಯಕ್ಕೆ ವರ್ಗಾಯಿ ಸಿದ್ದು, ಇಲ್ಲಿಯೇ ವಾಸ್ತವ್ಯ ಹೂಡುತ್ತೇನೆ ಎಂದು ಕಾಂಗ್ರೆಸ್ ಅಭ್ಯರ್ಥಿ ಅಂಬರೀಷ್ ಹೇಳಿದರು.

ತಾಲ್ಲೂಕಿನ ಕೆರಗೋಡು ಗ್ರಾಮದಲ್ಲಿ ಪಂಚಲಿಂಗೇಶ್ವರಸ್ವಾಮಿ ದೇವಾಲಯ ದಲ್ಲಿ ಪೂಜೆ ಸಲ್ಲಿಸಿ ಚುನಾವಣಾ ಪ್ರಚಾರ ಆರಂಭಿಸಿದರು.
ಕಾಂಗ್ರೆಸ್ ಪಕ್ಷದ ಬಗೆಗೆ ಉತ್ತಮ ಅಭಿಪ್ರಾಯವಿದೆ. ಮಾಜಿ ಮುಖ್ಯ ಮಂತ್ರಿ ಕೃಷ್ಣ ಅವರ ಆಡಳಿತ ಅವಧಿಯಲ್ಲಿ ಅಭಿವೃದ್ಧಿ ಪಡಿಸಿದ್ದು ಬಿಟ್ಟರೆ, ಬೇರೆಯವರು ಅಭಿವೃದ್ಧಿ ಮಾಡಿಲ್ಲ ಎಂದು ಟೀಕಿಸಿದರು.

ಮುಖಂಡರಾದ ರವಿಕುಮಾರ್ ಗಣಿಗ, ಎಂ.ಎಸ್. ಚಿದಂಬರ್, ಕೆಬ್ಬಳ್ಳಿ ಆನಂದ್, ಜಿ.ಪಂ. ಉಪಾಧ್ಯಕ್ಷ ಸೋಮಶಂಕರೇಗೌಡ, ತಾ.ಪಂ. ಮಾಜಿ ಸದಸ್ಯ ಚಿಕ್ಕಬಳ್ಳಿ ಕೃಷ್ಣ, ಗ್ರಾ.ಪಂ. ಅದ್ಯಕ್ಷೆ ಸುಮಿತ್ರಾ ಶಿವಲಿಂಗಸ್ವಾಮಿ ಮತ್ತಿತರರು ಪಾಲ್ಗೊಂಡಿದ್ದರು.

ತಾಲ್ಲೂಕಿನ ಮರಲಿಂಗನದೊಡ್ಡಿ, ತಾಳೆಮೇಳದೊಡ್ಡಿ, ಅಂಕಣ್ಣದೊಡ್ಡಿ, ಅನಸೂಸಲು, ಹಲ್ಲೆಗೆರೆ, ಚಂದಗಾಲು, ದೊಡ್ಡಕೊತ್ತಕೆರೆ ಮತ್ತಿತರ ಗ್ರಾಮ ಗಳಲ್ಲಿ ತೆರೆದ ವಾಹನದಲ್ಲಿ ಪ್ರಚಾರ ಮಾಡಿದರು. ಅಂಬರೀಷ್ ಅವರನ್ನು ನೋಡಲು ಜನರು ಮುಗಿಬಿದ್ದಿದ್ದರು.

ಚಿತ್ರನಟ ದರ್ಶನ್, ಸುಮಲತಾ ಪ್ರಚಾರ
ಮಂಡ್ಯ: ಕಾಂಗ್ರೆಸ್ ಅಭ್ಯರ್ಥಿ ಅಂಬರೀಷ್ ಅವರ ಪರವಾಗಿ ಚಿತ್ರನಟ ದರ್ಶನ್ ಹಾಗೂ ಅಂಬರೀಷ್ ಅವರ ಪತ್ನಿ ಸುಮಲತಾ ಅವರು ಏ.23,24 ರಂದು ಪ್ರಚಾರ ನಡೆಸಲಿದ್ದಾರೆ.

ಬೆಳಿಗ್ಗೆ 9 ಗಂಟೆಗೆ ಕಾಳಿಕಾಂಬ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ನಂತರ ನಗರದ ವಿವಿಧ ಪ್ರದೇಶ ಗಳಲ್ಲಿ ಪ್ರಚಾರ ಮಾಡಲಿದ್ದಾರೆ.


ಹಟ ಮಾಡಬೇಡಿ: ಆತ್ಮಾನಂದಗೆ ಮನವಿ
ಮಂಡ್ಯ: “ಆತ್ಮಾನಂದರವವರೇ ದಯವಿಟ್ಟು ಹಟ ಮಾಡಬೇಡಿ. ಪ್ರಚಾರಕ್ಕೆ ಬನ್ನಿ. ಮುಂದಿನ ದಿನಗಳಲ್ಲಿ ಎಲ್ಲವೂ ಒಳ್ಳೆಯದಾಗುತ್ತದೆ'  ಹೀಗೆಂದು ಕಾಂಗ್ರೆಸ್ ಅಭ್ಯರ್ಥಿ ಅಂಬರೀಷ್ ಅವರು, ಟಿಕೆಟ್ ವಂಚಿತರಾಗಿ ಅಸಮಾಧಾನ ಗೊಂಡಿರುವ ಎಂ.ಎಸ್. ಆತ್ಮಾನಂದ ಅವರಿಗೆ ಮನವಿ ಮಾಡಿದರು.

ಬಹಿರಂಗ ಪ್ರಚಾರ ಆರಂಭಿಸುತ್ತಿದ್ದೇನೆ. ಪೂಜೆಗೆ ಬನ್ನಿ. ನಿಮಗೆ ಅವಕಾಶ ಮಾಡಿಕೊಡಲು ಪ್ರಯತ್ನ ಮಾಡುತ್ತೇನೆ. ನನ್ನ ಮೇಲೆ ವಿಶ್ವಾಸವಿಡಿ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಆತ್ಮಾನಂದ ಅವರು, `ನನ್ನ ಮನಸ್ಥಿತಿ ಚೆನ್ನಾಗಿಲ್ಲ. 40 ವರ್ಷದಿಂದ ಕಾಂಗ್ರೆಸ್ ಬೆಂಬಲಿಸಿದ್ದೇನೆ. ಈಗಲೂ ಪಕ್ಷವನ್ನು ಬೆಂಬಲಿಸುತ್ತೇನೆ. ಬೇಜಾರಾಗಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ ಎಂದರು. ಪ್ರಚಾರಕ್ಕೆ ಬರುವುದಕ್ಕೆ ಸಂಬಂಧಿಸಿದಂತೆ ಸ್ಪಷ್ಟ ಉತ್ತರ ನೀಡಲಿಲ್ಲ.
ಚುನಾವಣಾ ಪ್ರಚಾರಕ್ಕೆ ಬನ್ನಿ. ನೀವು ನಮ್ಮ ಜೊತೆಗಿರಿ, ನಾವೇ ಮತ ಕೇಳುತ್ತೇವೆ ಎಂದು ನಗರಸಭಾ ಸದಸ್ಯರೂ ಮನವಿ ಮಾಡಿಕೊಂಡರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.