ಮದ್ದೂರು: ಅದೊಂದು ಅಜ್ಜ- ಅಜ್ಜಿಯ ಅಪೂರ್ವ ಸಮ್ಮಿಲನ. 60 ತುಂಬಿದ ಇಳಿವಯಸ್ಸಿನ ಜೀವಗಳಿಗೆ ತಮ್ಮ ಮದುವೆಯ ನೆನಪನ್ನು ಮರು ಕಳಿಸಿ ತಂದ ಅಪರೂಪದ ಕಾರ್ಯ ಕ್ರಮ.
ತಾಲ್ಲೂಕಿನ ತೈಲೂರಿನ ಕನ್ನಡ ಜ್ಯೋತಿ ಯುವಕರ ಸಂಘ, ದಿ.ಎಂ. ಎಸ್.ಸಿದ್ದರಾಜು ಕ್ರೀಡಾಸಂಸ್ಥೆ, ವೀರ ಮಾಸ್ತಿ ಕೆಂಪಮ್ಮಸೇವಾ ಸಮಿತಿ ಸಂಯುಕ್ತವಾಗಿ ಏರ್ಪಡಿಸಿದ್ದ ವಿಶೇಷ ಷಷ್ಠಿ ಕಾರ್ಯಕ್ರಮದಲ್ಲಿ ಗ್ರಾಮದ ದಂಪತಿಗಳನ್ನು ಒಂದೆಡೆ ಸೇರಿಸಿ ಹಾರ ಬದಲಿಸಿ, ಶಾಸ್ತ್ರೋಸ್ತ್ರವಾಗಿ ಮದುವೆ ಮಾಡಲಾಯಿತು.
ಮಂಗಳ ವಾದ್ಯದ ನಡುವೆ ಅಜ್ಜಿ ಅಜ್ಜ ಪರಸ್ಪರ ನಾಚಿಕೆಯಿಂದಲೇ ಹಾರ ಬದಲಿಸಿಕೊಂಡರು. ಬಳಿಕ ಮಾಂಗಲ್ಯ ಪೂಜೆ ನೆರವೇರಿಸಿದರು. ಜಿರಿಗೆಯನ್ನು ವಧು-ವರರು ಪರಸ್ಪರ ತಲೆ ಮೇಲೆ ಹಾಕಿ ನಂತರ ಪರಸ್ಪರ ಸಿಹಿ ತಿನ್ನಿಸುವ ಮೂಲಕ ಹೆಸರುಗಳನ್ನು ವಿನಿಮಯ ಮಾಡಿಸಲಾಯಿತು. ನಂತರ ಅರುಂಧತಿ ನಕ್ಷತ್ರದ ದರ್ಶನವನ್ನು ಮಾಡಿಸಲಾಯಿತು.
ಹಿರಿಯರಾದ ರಾಜಮ್ಮ-ಕೆಂಪ ಸಿದ್ದರಾಮಣ್ಣ, ಚಿಕ್ಕತಾಯಮ್ಮ-ಅಂಕಣ್ಣ, ಹೊನ್ನಮ್ಮ-ಜೋಗಯ್ಯ, ಸಿದ್ದಮ್ಮ-ಮರಿಯಣ್ಣ, ಚಂದ್ರಮ್ಮ-ಗಂಗಪ್ಪ, ಜಯಮ್ಮ-ತಿಮ್ಮೇಗೌಡ, ಪುಟ್ಟಹೊನ್ನಮ್ಮ-ತಿಮ್ಮೇಗೌಡ, ಹೊಂಬಾಳಮ್ಮ-ಗಿರಿಯಪ್ಪ, ಲಕ್ಷ್ಮಮ್ಮ-ಚಿಕ್ಕನಿಂಗಯ್ಯ, ಯಶೋದಮ್ಮ-ರಾಮಣ್ಣ ದಂಪತಿಗಳನ್ನು ಕನ್ನಡ ಜ್ಯೋತಿ ಯುವಕರ ಸಂಘದ ಅಧ್ಯಕ್ಷ ಸಿದ್ದರಾಜು, ಮುಖಂಡ ತೈಲೂರು ರಘು, ಎಂ.ಎಸ್.ಸಿದ್ದರಾಜು ಕ್ರೀಡಾ ಸಂಸ್ಥೆಯ ಕಾರ್ಯದರ್ಶಿ, ಎನ್.ಪ್ರಸನ್ನ ಸನ್ಮಾನಿಸಿದರು. ಕಾರ್ಯಕ್ರಮದ ಅಂಗವಾಗಿ ಭಾರಿ ಭೂರಿ ಭೋಜನವನ್ನು ಏರ್ಪಡಿಸಲಾಗಿತ್ತು. ಮುಖಂಡರಾದ ಚೆನ್ನಣ್ಣ, ಸತೀಶ್, ರಾಜು, ರವೀಂದ್ರ, ಆನಂದ ಚಾರ್, ಗುರುಪ್ರಸಾದ್, ನಾಗ ರಾಜು, ಹೊಂಬಮ್ಮ, ನಾಗಣ್ಣ ಸೇರಿದಂತೆ ನೂರಾರು ಗ್ರಾಮಸ್ಥರು ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.