ADVERTISEMENT

ಉತ್ಸವಕ್ಕೆ ಕಳೆ ತುಂಬಿದ ಕುಸ್ತಿ ಪಂದ್ಯ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2012, 9:55 IST
Last Updated 12 ಡಿಸೆಂಬರ್ 2012, 9:55 IST

ಪಾಂಡವಪುರ: ಪಟ್ಟಣದ ಮಹಾಂಕಾಳೇಶ್ವರಿ ದೇವಸ್ಥಾನದ ಆವರಣದಲ್ಲಿ ಕಾರ್ತಿಕ ಮಾಸದ ಪ್ರಯುಕ್ತ 50ನೇ ವರ್ಷದ ಮಹಾಂಕಾಳೇಶ್ವರಿ ಅಮ್ಮನವರ ಉತ್ಸವದ ಅಂಗವಾಗಿ ಸೋಮವಾರ ಸಂಜೆ ಕುಸ್ತಿ ಪಂದ್ಯಾವಳಿ ನಡೆಯಿತು.

ಪಂದ್ಯಾವಳಿಯಲ್ಲಿ ಉತ್ತಮ ಪಟ್ಟಗಳನ್ನು ಹಾಕಿ ಭರ್ಜರಿ ಗೆಲುವು ಸಾಧಿಸಿದ ರಮ್ಮನಹಳ್ಳಿ ಪೈ.ಚಿಕ್ಕಸ್ವಾಮಿಗೆ ಮಹಾಂಕಾಳೇಶ್ವರಿ ಪ್ರಶಸ್ತಿ, ಪಟ್ಟಣದ ಹಾರೋಹಳ್ಳಿ ಪೈ.ಸುಜೇಂದ್ರಗೆ ದಿ.ವರದಣ್ಣ ಪ್ರಶಸ್ತಿ ಹಾಗೂ ಪಾಂಡವಪುರ ರಾಕೇಶ್‌ಗುರು ಅವರಿಗೆ ಮಂಗತಾಯಮ್ಮ ರಾಮಮಂದಿರ ಟ್ರಸ್ಟ್ ಪ್ರಶಸ್ತಿ ಜತೆಗೆ ಗದೆ ನೀಡಿ ಗೌರವಿಸಲಾಯಿತು.

ಮಹಾಂಕಾಳೇಶ್ವರಿ ಪ್ರಶಸ್ತಿಗಾಗಿ ನಡೆದ ಕುಸ್ತಿ ಪಂದ್ಯಾವಳಿಯಲ್ಲಿ ರಮ್ಮನಹಳ್ಳಿಯ ಪೈ.ಚಿಕ್ಕಸ್ವಾಮಿ ಹಾಗೂ ದಾವಣಗೆರೆಯ ಪೈ.ಸೀನ ನಡುವೆ ಡೋಬಿ ಶಾಟ್, ಡಾಕ್, ಕಲವಾರ್ ಜಂಗ್, ಏಕಲಾಂಗ್, ಸವಾರಿ ಪಟ್ಟುಗಳನ್ನು ಹಾಕುವ ಮೂಲಕ ತೀವ್ರ ಹಣಾಹಣಿ ಗುದ್ದಾಟ ಸುಮಾರು ಅರ್ಧ ಗಂಟೆ ಕಾಲ ನಡೆದ ಕುಸ್ತಿಯ ಅಂತಿಮ ಕ್ಷಣದಲ್ಲಿ ರಮ್ಮನಹಳ್ಳಿಯ ಚಿಕ್ಕಸ್ವಾಮಿ ಹಾಕಿ ಪಟ್ಟಿಗೆ ದಾವಣಗೆರೆ ಸೀನ ಸೋಲನ್ನಭವಿಸಬೇಕಾಯಿತು. ಕಟ್ಟುಮಸ್ತಾದ ದೇಹ ಹೊಂದಿದ್ದ ಇಬ್ಬರು ಪೈಲ್ವಾನ್‌ಗಳ ಗುದ್ದಾಟ ನೆರೆದಿದ್ದ ಪ್ರೇಕ್ಷಕರನ್ನು ರಂಜಿಸಿತು.

ಮೈಸೂರು ಪೈ.ಪ್ರಶಾಂತ್ ವಿರುದ್ದ ಪಾಂಡವಪುರ ಪೈ.ರಘುರಾಕ್, ಮೈಸೂರು ಪೈ.ಶರತ್ ವಿರುದ್ದ ಪೈ.ಸತ್ಯರಾಜ್, ಹನುಕುಪ್ಪೆ ಪೈ.ಸಂಜಯ್ ವಿರುದ್ದ ಪಾಂಡವಪುರ ಪೈ.ಯಶವಂತ್, ಮೇಳಾಪುರ ಪೈ.ರಾಜೇಶ್ ವಿರುದ್ದ ಪೈ.ಸಂತೋಷ್, ಪಾಂಡವಪುರ ಪೈ.ತಂಗರಾಜ್ ವಿರುದ್ದ ರಮ್ಮನಹಳ್ಳಿ ಪೈ.ಮನು, ಪೈ.ಅಜಯ್ ಮೈಸೂರು ಪೈ.ರಘು, ಮೇಳಾಪುರ ಪೈ.ಪುಟ್ಟಸ್ವಾಮಿ ವಿರುದ್ದ ನಾಗೇನಹಳ್ಳಿ ಪೈ.ತಮ್ಮಣ್ಣೇಗೌಡ, ಮೈಸೂರು ಪೈ.ಇರ‌್ಪಾನ್ ವಿರುದ್ದ ಕನಕಪುರ ಪೈ.ದೇವರಾಜು ಜಯಗಳಿಸಿದರು.

ಮೇಳಾಪುರ ಪೈ.ಯೋಗೇಶ್ ಹಾಗೂ ಪಾಂಡವಪುರ ಪೈ.ಶಿವಪ್ರಕಾಶ್, ರಮ್ಮನಹಳ್ಳಿ ಪೈ.ರವಿ ಹಾಗೂ ಎಲೆಕೆರೆ ಮಂಜುನಾಥ್, ಕನಕಪುರ ಪೈ.ಶಿಪ್ರಕಾಶ್ ಹಾಗೂ ಮೇಳಾಪುರ ಪೈ.ಗೋವಿಂದ, ಮೈಸೂರು ಪೈ.ಅಜಯ್ ಹಾಗೂ ಗಂಜಾಂ ಪೈ.ವಿನಯ್‌ಕುಮಾರ್ ನಡುವೆ ನಡೆದ ಕುಸ್ತಿ ಪಂದ್ಯಾವಳಿಯಲ್ಲಿ ತೀವ್ರ ಪೈಪೋಟಿ ನಡೆದು ಸಮಬಲ ಪ್ರದರ್ಶನದಿಂದಾಗಿ ಯಾರೂ ಗೆಲ್ಲದೆ ಸಮವಾದರು.

ಹಾರೋಹಳ್ಳಿ ಪೈ.ಸಂತೋಷ್ ಸಿಂಹ ನೇತೃತ್ವದಲ್ಲಿ ಈ ಕುಸ್ತಿ ಪಂದ್ಯಾವಳಿ ನಡೆಯಿತು. ಬೀರಶೆಟ್ಟಹಳ್ಳಿ ಪೈ.ಬೋರಣ್ಣ, ಪಟ್ಟಣದ ಪೈ.ಸಗಾಯಂ ತೀರ್ಪುಗಾರರಾಗಿದ್ದರು. ರಾತ್ರಿ ಶ್ರೀ ಮಹಾಂಕಾಳೇಶ್ವರಿ ಅಮ್ಮನವರ ಉತ್ಸವವು ವಿಜೃಂಭಣೆಯಿಂದ ಜರುಗಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.