ADVERTISEMENT

ಎ.ಸಿ.ಬಿ ದಾಳಿ: ಗ್ರಾಮ ಪಂಚಾಯಿತಿ ಅಧ್ಯಕ್ಷೆ ಬಂಧನ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2018, 8:42 IST
Last Updated 10 ಮಾರ್ಚ್ 2018, 8:42 IST

ಮಂಡ್ಯ: ಬಸವ ವಸತಿ ಯೋಜನೆಯ ಫಲಾನುಭವಿ ಆಯ್ಕೆಗಾಗಿ ಲಂಚ ಪಡೆಯುತ್ತಿದ್ದ ತಾಲ್ಲೂಕಿನ ಉಪ್ಪರಕನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮತ್ತು ಅವರ ಪತಿಯನ್ನು ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಅಧಿಕಾರಿಗಳು ಶುಕ್ರವಾರ ಬಂಧಿಸಿದ್ದಾರೆ.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪದ್ಮಾ ಮತ್ತು ಆಕೆಯ ಪತಿ ಶಿವರಾಜ್ ಬಂಧಿತರು. ಇಬ್ಬರನ್ನೂ ನ್ಯಾಯಾಂಗ ವಶಕ್ಕೆ ನೀಡಲಾಗಿದೆ. ಬಸವ ವಸತಿ ಯೋಜನೆಯ ಫಲಾನುಭವಿಗಳ ಪಟ್ಟಿಗೆ ಹೆಸರು ಸೇರಿಸಲು ಎಚ್.ಬಿ.ಪುಟ್ಟರಾಜು ಅವರು ಗ್ರಾಮ ಪಂಚಾಯಿತಿಗೆ ಅರ್ಜಿ ಸಲ್ಲಿಸಿದ್ದರು. ಹೆಸರು ಸೇರಿಸಲು ₹ 25 ಸಾವಿರ ಲಂಚ ನೀಡಬೇಕು ಎಂದು ಅಧ್ಯಕ್ಷೆ ಪದ್ಮಾ ಹಾಗೂ ಆಕೆಯ ಪತಿ ಬೇಡಿಕೆ ಇಟ್ಟಿದ್ದರು. ಪುಟ್ಟರಾಜು  ಮೊದಲೇ ₹ 10 ಸಾವಿರ ನೀಡಿದ್ದರು. ಬಾಕಿ ಹಣವನ್ನು ನೀಡುವಂತೆ ಪದ್ಮಾ ಒತ್ತಾಯಿಸಿದ್ದರು. ಪುಟ್ಟರಾಜು ಎಸಿಬಿ ಅಧಿಕಾರಿಗಳಿಗೆ ದೂರು ನೀಡಿದ್ದರು.

ಶುಕ್ರವಾರ ಬಾಕಿ ₹ 15 ಸಾವಿರ ಹಣವನ್ನು ಪುಟ್ಟರಾಜು ಅವರು ಪದ್ಮಾ ಅವರ ಹಂಪಾಪುರ ಗ್ರಾಮದ ಮನೆಗೆ ತೆರಳಿ ಅವರ ಪತಿ ಶಿವರಾಜ್‌ಗೆ ಹಣ ನೀಡಿದ್ದಾರೆ. ಕಾದು ಕುಳಿತಿದ್ದ ಎಸಿಬಿ ಅಧಿಕಾರಿಗಳು ತಕ್ಷಣವೇ ದಾಳಿ ನಡೆಸಿ, ಪದ್ಮಾ ಹಾಗೂ ಪತಿಯನ್ನು ಬಂಧಿಸಿದ್ದಾರೆ.

ADVERTISEMENT

ಎಬಿಸಿ ಎಸ್ಪಿ ಶೇಖರ್ ಟೆಕ್ಕಣ್ಣನವರ್, ಡಿವೈಎಸ್ಪಿ ಶೈಲೇಂದ್ರ ಅವರ ಮಾರ್ಗದರ್ಶನದಲ್ಲಿ ಎಸಿಬಿ ಇನ್‌ಸ್ಪೆಕ್ಟರ್‌ ಜಿ.ಜೆ.ಸತೀಶ್, ಸಿಬ್ಬಂದಿ ಮಹೇಶ್, ವೆಂಕಟೇಶ್, ಕುಮಾರ್, ಮಹದೇವು, ಪಾಪಣ್ಣ, ಪ್ರಕಾಶ್ ದಾಳಿಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.