ADVERTISEMENT

ಐತಿಹಾಸಿಕ ಕೊಳ ಸ್ವಚ್ಛಗೊಳಿಸಿದ ಪುರಸಭೆ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2013, 6:57 IST
Last Updated 12 ಏಪ್ರಿಲ್ 2013, 6:57 IST

ಶ್ರೀರಂಗಪಟ್ಟಣ: ಮುಚ್ಚಿ ಹೋಗುವ ಸ್ಥಿತಿಯಲ್ಲಿದ್ದ, ಇಲ್ಲಿಗೆ ಸಮೀಪದ ಗಂಜಾಂ ರಸ್ತೆ ಪಕ್ಕದ ಶತಮಾನಗಳಷ್ಟು ಹಳೆಯದಾದ ದಾಸಪ್ಪನ ಕೊಳವನ್ನು ಪುರಸಭೆ ವತಿಯಿಂದ ಬುಧವಾರ ಸ್ವಚ್ಛಗೊಳಿಸಲಾಯಿತು.

ಜೆಸಿಬಿ ಯಂತ್ರದ ಸಹಾಯದಿಂದ ಕೊಳದ ಬದುವಿನಲ್ಲಿ ಬೆಳೆದಿದ್ದ ಗಿಡಗಂಟಿಗಳನ್ನು ತೆಗೆಯಲಾಯಿತು. ಕೊಳದ ಒಳ ಭಾಗದಲ್ಲಿ ಬೆಳೆದಿದ್ದ ಕಳೆ ಗಿಡಗಳು ಹಾಗೂ ಪಾಚಿಯನ್ನು ಸ್ವಚ್ಛ ಮಾಡಲಾಯಿತು. ಕೊಳದಲ್ಲಿನ ನೀರು ಮಲೆತು ಗಬ್ಬು ವಾಸನೆ ಬರುತ್ತಿತ್ತು. ಸ್ಥಳೀಯರು ಈ ಕೊಳ ಸ್ವಚ್ಛ ಮಾಡುವಂತೆ ಪುರಸಭೆಗೆ ಮನವಿ ಸಲ್ಲಿಸಿದ್ದರು.

ಹಳೆಯ ಕೊಳಗಳನ್ನು ಸುಸ್ಥಿತಿಯಲ್ಲಿ ಇಡುವಂತೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ. ಹಾಗಾಗಿ ದಾಸಪ್ಪ ಕೊಳದ ಸ್ವಚ್ಛತಾ ಕಾರ್ಯ ಕೈಗೊಂಡಿದ್ದೇವೆ. ಮುಂದಿನ ದಿನಗಳಲ್ಲಿ ಕೊಳದ ಸುತ್ತ ಕಲ್ಲಿನ ಕಟ್ಟಡ ಹಾಗೂ ಮೆಟ್ಟಿಲು ನಿರ್ಮಾಣ ಕಾರ್ಯವನ್ನು ಕೈಗೆತ್ತಿಕೊಳ್ಳಲು ಉದ್ದೇಶಿಸಲಾಗಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಎಂ.ರಾಜಣ್ಣ ತಿಳಿಸಿದರು.

ಪರಿಸರ ಎಂಜಿನಿಯರ್ ರೂಪಾ, ಆರೋಗ್ಯ ಪರಿವೀಕ್ಷಕಿ ಸುಷ್ಮಾ ಇತರರು ಇದ್ದರು. ಕೊಳದ ಸಂರಕ್ಷಣಾ ಕಾರ್ಯಕ್ಕೆ ಕೈ ಜೋಡಿಸುವುದಾಗಿ ಜಯಕರ್ನಾಟಕ ಸಂಘಟನೆ ಕಾರ್ಯಕರ್ತರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.