ADVERTISEMENT

ಕಲಾಕ್ಷೇತ್ರದ ಸಾಧಕರಿಗೆ ಸನ್ಮಾನ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2013, 6:29 IST
Last Updated 19 ಸೆಪ್ಟೆಂಬರ್ 2013, 6:29 IST

ಮಂಡ್ಯ: ಪ್ರತಿಭಾವಂತರನ್ನು ಗೌರವಿಸುವುದರಿಂದ ಅವರಿಗೆ ಹೆಚ್ಚಿನ ಸಾಧನೆ ಮಾಡಲು ಹಾಗೂ ಹೊಸಬರಿಗೆ ಆ ಸಾಧನೆ ಹಾದಿಯಲ್ಲಿ ಸಾಗಲು ಪ್ರೇರೆಪಣೆಯಾಗುತ್ತದೆ ಎಂದು ರಂಗ ನಿರ್ದೇಶಕ ಶಶಿಧರ್‌ ಬಾರಿಘಾಟ್‌ ಹೇಳಿದರು.

ಜನ ದನಿ ಸಾಂಸ್ಕೃತಿಕ ಟ್ರಸ್ಟ್‌್್ ಹಾಗೂ ಕರ್ನಾಟಕ ಸಂಘದ ವತಿಯಿಂದ ನಗರದ ಕಲಾ ಮಂದಿರದಲ್ಲಿ ನಡೆಯುತ್ತಿರುವ ನಾಟಕೋತ್ಸವ ಸಮಾರಂಭದಲ್ಲಿ ಟ್ರಸ್ಟ್‌ನಿಂದ ಪಯಣ ಆರಂಭಿಸಿ ಸಾಧನೆ ಮಾಡಿರುವವರನ್ನು ಸನ್ಮಾನಿಸಿ ಮಾತನಾಡಿದರು.

ಜನಪರ ಆಲೋಚನೆ ಹೇಗೆ ಮಾಡಬಹುದು ಎಂಬುದನ್ನು ನಾಟಕವು ಕಲಿಸುತ್ತದೆ. ಕಲಾಕ್ಷೇತ್ರದ ಸಾಧನೆಗೆ ಇವರೆಲ್ಲರೂ ಉತ್ತಮ ಉದಾಹರಣೆ­ಯಾಗಿದ್ದಾರೆ ಎಂದರು.

ಸನ್ಮಾನ ಸ್ವೀಕರಿಸಿದ ಮಂಡ್ಯ ರಮೇಶ್‌ ಮಾತನಾಡಿ, ಮನುಷ್ಯನನ್ನು ಮನುಷ್ಯ ಅರ್ಥ ಮಾಡಿಕೊಳ್ಳಲು ನಾಟಕದಿಂದ ಸಾಧ್ಯ. ನೈತಿಕವಾಗಿ ದಿವಾಳಿ­ಯಾಗುತ್ತಿರುವ ಸಮಾಜಕ್ಕೆ ಎಚ್ಚರಿಸುವ ಕೆಲಸವನ್ನು ಮಾಡಬೇಕಿದೆ ಎಂದರು.

ಸರಳತೆಯ ಸೌಂದರ್ಯ ನೀಡುವುದು ರಂಗಭೂಮಿಯಿಂದ ಸಾಧ್ಯ. ಸಾಮಾಜಿಕ ಪ್ರಜ್ಞೆ, ಸಂವೇದನಾಶೀಲತೆಯನ್ನು ಕಲಿಸಿಕೊಟ್ಟಿದೆ. ಪ್ರೊ.ಜಯಪ್ರಕಾಶಗೌಡ­ರಂತಹ ಸಂಘಟಕರು ಸಿಕ್ಕರೆ ಎಷ್ಟೊಂದು ಮಂದಿ ಸಾಧನೆ ಮಾಡಬಹುದು ಎಂಬುದುಕ್ಕೆ ಇದು ಸಾಕ್ಷಿಯಾಗಿದೆ ಎಂದು ಹೇಳಿದರು.

ಮಾಜಿ ಶಾಸಕ ಕೆ.ಟಿ. ಶ್ರೀಕಂಠೇಗೌಡ ಮಾತನಾಡಿ, ಕೃಷಿ ಬದುಕು ತತ್ತರಿಸಿದೆ. ಸರಿಪಡಿಸಲಾಗದ ಸ್ಥಿತಿ ತಲುಪಿದೆ. ಸಬ್ಸಿಡಿ, ಸಾಲ ಮನ್ನಾದಿಂದ ಕೃಷಿ ಕ್ಷೇತ್ರ ಬೆಳೆಯುವುದಿಲ್ಲ. ಹೊಸ ಸ್ಪರ್ಶ ನೀಡುವ ಕೆಲಸ ಆಗುತ್ತಿಲ್ಲ ಎಂದು ವಿಷಾದಿಸಿದರು.

ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಜಯಪ್ರಕಾಶಗೌಡ ಮಾತನಾಡಿ, ಓದನೊಂದಿಗೆ ಕಲಾ ಕ್ಷೇತ್ರದಲ್ಲಿ ಬದುಕನ್ನು ಕಟ್ಟಿಕೊಳ್ಳಬಹುದು ಎನ್ನು­ವುದಕ್ಕೆ ಸಾಕ್ಷಿಯಾಗಿದ್ದಾರೆ ಎಂದರು. ತಹಶೀಲ್ದಾರ್‌ ಡಾ.ಎಚ್‌.ಎಲ್‌. ನಾಗರಾಜು ಉಪಸ್ಥಿತರಿದ್ದರು.

ರಂಗಭೂಮಿ, ಕಿರುತೆರೆ, ಚಲನಚಿತ್ರ, ಗಾಯನ ಕ್ಷೇತ್ರದ ರವಿಪ್ರಸಾದ್‌, ಬಸ್‌ ಕುಮಾರ್‌, ಎಚ್‌.ಆರ್‌.. ರಮ್ಯಾ, ಬಪ್ಪಿಬ್ಲಾಸಮ್‌, ಆಟೊ ಪ್ರಕಾಶ್‌, ಗಾಮನಹಳ್ಳಿ ಸ್ವಾಮಿ, ಸಬ್ಬನಹಳ್ಳಿ ರಾಜು, ಪ್ರತಿಭಾಂಜಲಿ ಡೇವಿಡ್‌, ಮಧುಕರ್‌ ಮಳವಳ್ಳಿ, ಪುಟಬುದ್ಧಿ, ಕಾಂತರಾಜು, ರಾಮಕೃಷ್ಣ, ಸೋಮಶೇಖರ್‌ ಅವರನ್ನು ಸನ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.