ADVERTISEMENT

ಕವಿತೆ ಸಾಮಾಜಿಕ ಬದುಕಿನ ಪ್ರತಿಬಿಂಬ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2011, 5:40 IST
Last Updated 4 ಅಕ್ಟೋಬರ್ 2011, 5:40 IST

ಮದ್ದೂರು: ಕವಿತೆ ಸಾಮಾಜಿಕ ಬದುಕಿನ ಪ್ರತಿಬಿಂಬವಾಗಿದ್ದು, ಬದುಕಿನ ಸೂಕ್ಷ್ಮ ನೋಟಗಳನ್ನು ಅವಲೋಕಿಸಿ ಕಾವ್ಯ ಪ್ರಯೋಗಕ್ಕೆ ಕವಿಗಳು ಮುಂದಾಗಬೇಕು ಎಂದು ಮೈಸೂರು ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ವಿಶ್ರಾಂತ ಪ್ರಾಧ್ಯಾಪಕ ಡಾ.ಸೋಮಶೇಖರಗೌಡ ಅಭಿಪ್ರಾಯಪಟ್ಟರು.

ಸಮೀಪದ ಶಿವಪುರದ ಐತಿಹಾಸಿಕ ಧ್ವಜ ಸತ್ಯಾಗ್ರಹಸೌಧದಲ್ಲಿ      ಭಾನುವಾರ ಗಾಂಧಿ ಜಯಂತಿ ಅಂಗವಾಗಿ ಏರ್ಪಡಿಸಿದ್ದ    ಜಿಲ್ಲಾಮಟ್ಟದ ಕವಿಗೋಷ್ಠಿ  ಉದ್ಘಾಟಿಸಿ ಮಾತನಾಡಿದರು.

ಕಾವ್ಯ ರಚನೆ ತಪಸ್ಸು ಇದ್ದಂತೆ. ಪ್ರಾಸಕ್ಕೆ ಜೋತು ಬಿದ್ದು ಪದ್ಯ ರಚಿಸುವುದು ತರವಲ್ಲ. ಕವಿಯ ಭಾವ ತೀವ್ರತೆಯೊಂದಿಗೆ ಸಾಮಾಜಿಕ ಬದುಕಿನ ಸೂಕ್ಷ್ಮ ಅವಲೋಕನವೂ ಪದ್ಯದಲ್ಲಿ ಮಿಳಿತವಾದರೆ               ಉತ್ತಮ ಕಾವ್ಯ ರಚನೆ ಸಾಧ್ಯವಾಗುತ್ತದೆ ಎಂದು ಸಲಹೆ ನೀಡಿದರು.

ಸಾಹಿತಿ ಡಾ.ಪ್ರದೀಪ್‌ಕುಮಾರ್ ಹೆಬ್ರಿ ಮಾತನಾಡಿ, ಕವಿತೆ ರಚನೆಗೆ ಕೇವಲ ಕಲ್ಪನೆ ಸಾಲದು.                   ನಿರಂತರ ಅಧ್ಯಯನಶೀಲತೆ  ಅತ್ಯವಶ್ಯಕ. ಬದುಕನ್ನು ಹೊರತುಪಡಿಸಿ ಕಾವ್ಯ ರಚನೆ ಅಸಾಧ್ಯವಾಗಿದ್ದು, ಬದುಕನ್ನು ತೆರೆದಿಡುವುದು  ಕಾವ್ಯದ ನಿಜವಾದ ಗುರಿಯಾಗಬೇಕು ಎಂದರು.

ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷ ಡಿ.ಪಿ.ಸ್ವಾಮಿ, ಸೌಧ ಸಮಿತಿ ಅಧ್ಯಕ್ಷ ಬಿ.ಆರ್.ಶ್ರೀನಿವಾಸಮೂರ್ತಿ ಮಾತನಾಡಿದರು. ಕವಿಗಳಾದ ಮಲ್ಲಿಕಾ ಮಹದೇವಪ್ಪ, ಕೆ.ವಿ.ರಮೇಶ್, ಅನಾರ್ಕಲಿ ಸಲೀಂ, ಸತೀಶ್ ಜವರೇಗೌಡ, ಗಣಂಗೂರು ನಂಜೇಗೌಡ, ಬಲ್ಲೇನಹಳ್ಳಿ ಶಂಕರ್, ಸಿ.ಕೆ.ಗಂಗೇಗೌಡ, ಶಿವೇಗೌಡ ಗಂಡಸಿ, ಪಿ.ಸುಂದರಪ್ಪ ಲಿಂಗಾಪಟ್ಟಣ, ಸಬ್ಬನಹಳ್ಳಿ ಶಶಿಧರ್, ಸುಧಾಕರ ಕೋಡಾಲ, ಸುಧಾಕರ ಹೊಸಹಳ್ಳಿ, ಮಾರೇನಹಳ್ಳಿ ಲೋಕೇಶ್, ಮಧುಸೂದನ ಮದ್ದೂರು, ಚಾ.ಸಿ.ಜಯಕುಮಾರ್, ಭಾರತೀಪುತ್ರ, ದರ್ಶನ್, ಶ್ವೇತ ಕವಿತೆ ವಾಚಿಸಿದರು. ಕಸಾಪ ಅಧ್ಯಕ್ಷ ಮಾರಸಿಂಗನಹಳ್ಳಿ ರಾಮಚಂದ್ರು ಉಪಸ್ಥಿತರಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.