ADVERTISEMENT

`ಕೃಷಿಗೆ ಉದ್ಯಮದ ಸ್ಥಾನ ನೀಡಿ'

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2012, 5:59 IST
Last Updated 7 ಡಿಸೆಂಬರ್ 2012, 5:59 IST

ಕೃಷ್ಣರಾಜಪೇಟೆ: ದೇಶ ಆಳುವ ರಾಜಕೀಯ ಪಕ್ಷಗಳಿಗೆ ಅನ್ನದಾತನಾರ ಬಗ್ಗೆ ನಿಜವಾದ ಕಾಳಜಿಯಿದ್ದರೆ ಕೃಷಿ ಕ್ಷೇತ್ರವನ್ನು ಉದ್ಯಮ ಎಂದು ಘೋಷಿಸಿ, ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿ ಮಾಡಬೇಕು ಎಂದು ರೈತ ಮುಖಂಡ ಕೆ.ಎಸ್.ಪುಟ್ಟಣ್ಣಯ್ಯ ಆಗ್ರಹಿಸಿದರು.

ತಾಲ್ಲೂಕಿನ ಲಕ್ಷ್ಮಿಪುರ, ಮೆಳ್ಳಹಳ್ಳಿ, ದೊಡ್ಡಯಾಚೇನಹಳ್ಳಿ, ಮಡುವಿನಕೋಡಿ ಗ್ರಾಮಗಳಲ್ಲಿ ಇತ್ತೀಚೆಗೆ ಕಬ್ಬು ಬೆಳೆಗಾರರು ಏರ್ಪಡಿಸಿದ್ದ ಕಾರ್ಯಕ್ರಮಗಳಲ್ಲಿ ಅವರು ಮಾತನಾಡಿದರು.

ರೈತರು ಕಷ್ಟಪಟ್ಟು ದುಡಿದರೂ ಅವರ ಆರ್ಥಿಕ ಸ್ಥಿತಿ ಪ್ರಗತಿ ಕಾಣುತ್ತಿಲ್ಲ. ದಿನೇ ದಿನೇ ಶ್ರೀಮಂತ- ಬಡವರ ನಡುವಿನ ಅಂತರ ಹೆಚ್ಚಾಗುತ್ತಿದೆ. ರೈತರ ಯಾವುದೇ ಬೆಳೆಗೂ ನ್ಯಾಯವಾದ ಬೆಲೆ ಸಿಗುತ್ತಿಲ್ಲ. ರೈತ ಸಂಘದ ಹೋರಾಟದಿಂದ ಟನ್ ಕಬ್ಬಿಗೆ ರೂ. 2400 ಮುಂಗಡ ನೀಡಲು ಸರ್ಕಾರ ಒಪ್ಪಿದೆ.

ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿ. ಸಕ್ಕರೆಗೆ ನಲವತ್ತು ರೂಪಾಯಿ ಇದೆ. ಆದರೆ, ಕಬ್ಬಿಗೆ ಮಾತ್ರ ಸೂಕ್ತ ಬೆಲೆ ನೀಡಲು ಸರ್ಕಾರ ಮೀನಾಮೇಷ ಎಣಿಸುತ್ತಿದೆ. ಸಚಿವರಾದ ಮುರುಗೇಶ್ ನಿರಾಣಿ, ಉಮೇಶ್ ಕತ್ತಿ, ಜಾರಕಿಹೊಳಿ ಅವರೇ ಸಕ್ಕರೆ ಕಾರ್ಖಾನೆಗಳ ಮಾಲೀಕರಾಗಿದ್ದಾರೆ. ಇಂತವರು ಮಂತ್ರಿಗಳಾಗಿದ್ದರೆ ರೈತರಿಗೆ ಎಲ್ಲಿ ನ್ಯಾಯ ಸಿಗುತ್ತದೆ ಎಂದು ವಿಷಾಸಿದರು.

ಪಟ್ಟಣದ ಲಕ್ಷ್ಮಮ್ಮ ದುಂಡಶೆಟ್ಟಿ ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಜಯಶೇಖರ್ ಅವರನ್ನು ಗ್ರಾಮಸ್ಥರು ಸನ್ಮಾನಿಸಿದರು. ರೈತ ಸಂಘದ ಮಹಿಳಾ ವಿಭಾಗದ ಅಧ್ಯಕ್ಷೆ ನಂದಿನಿ ಜಯರಾಂ, ಜಿಲ್ಲಾ ಪಂಚಾಯಿತಿ ಸದಸ್ಯ ಕೆಂಪೂಗೌಡ, ತಾಲ್ಲೂಕು ರೈತಸಂಘದ ಅಧ್ಯಕ್ಷ ಮಂಚನಹಳ್ಳಿ ನಾಗಣ್ಣ, ಪಾಂಡವಪುರ ಅಧ್ಯಕ್ಷ ಹರವು ಪ್ರಕಾಶ್, ರೈತ ಮುಖಂಡರಾದ ಎಲ್.ಬಿ. ಜಗದೀಶ್, ಮರುವನಹಳ್ಳಿ ಶಂಕರ್, ಗ್ರಾಮದ ಮುಖಂಡರಾದ ರಂಗಸ್ವಾಮಿ, ಗಂಗಾಧರ್, ಪ್ರಕಾಶ್, ಉಮೇಶ್, ಸಾಗರ್ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.