ADVERTISEMENT

ಕೆಆರ್‌ಎಸ್‌ಗೆ ಪೊಲೀಸ್ ಸರ್ಪಗಾವಲು

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2012, 6:04 IST
Last Updated 7 ಡಿಸೆಂಬರ್ 2012, 6:04 IST

ಪ್ರಜಾವಾಣಿ ವಾರ್ತೆ
ಶ್ರೀರಂಗಪಟ್ಟಣ: ತಮಿಳುನಾಡಿಗೆ ಕಾವೇರಿ ನೀರು ಹರಿಸಬೇಕು ಎಂಬ ಸುಪ್ರೀಂ ಕೋರ್ಟ್ ತೀರ್ಪಿನ ಹಿನ್ನೆಲೆ ಯಲ್ಲಿ ರೈತರು ಮುತ್ತಿಗೆ ಹಾಕಬಹುದು ಎಂಬ ಕಾರಣಕ್ಕೆ ತಾಲ್ಲೂ ಕಿನ ಕೃಷ್ಣರಾಜಸಾಗರ ಜಲಾಶಯದ ದು ಕಿ.ಮೀ. ವ್ಯಾಪ್ತಿ ಯಲ್ಲಿ ಡಿ.10ರ ವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ಜಲಾಶಯದ ಮೂರೂ ದ್ವಾರ ಗಳಲ್ಲಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಉತ್ತರ ದಂಡೆ (ನಾರ್ತ್ ಬ್ಯಾಂಕ್), ದಕ್ಷಿಣ ದ್ವಾರ ಹಾಗೂ ಬೃಂದಾವನ ಪ್ರವೇಶಿಸುವ ಸ್ಥಳದಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. 9 ಕೆಎಸ್‌ಆರ್‌ಪಿ ತುಕಡಿ, 6 ಡಿಎಆರ್ ಹಾಗೂ 100ಕ್ಕೂ ಹೆಚ್ಚು ಸಿವಿಲ್ ಪೊಲೀಸ ರನ್ನು ನಿಯೋಜಿಸಲಾಗಿದೆ. ಇಬ್ಬರು ಹೆಚ್ಚುವರಿ ಎಸ್ಪಿ, ಮೂವರು ಡಿವೈಎಸ್ಪಿ, 7 ಮಂದಿ ಇನ್‌ಸ್ಪೆಕ್ಟರ್ ಹಾಗೂ 10 ಮಂದಿ ಸಬ್ ಇನ್‌ಸ್ಪೆಕ್ಟರ್ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ. ರೈತರು ಒಳಗೆ ನುಸುಳದಂತೆ ಅಲ್ಲಲ್ಲಿ ಬ್ಯಾರಿಕೇಡ್ ಹಾಕಿದ್ದು, ತಂತಿ ಬೇಲಿ ನಿರ್ಮಿಸಲಾ ಗುತ್ತಿದೆ.

ಗುರುವಾರ ಬೆಳಿಗ್ಗೆ ದಕ್ಷಿಣ ವಲಯ ಐಜಿ ಡಾ.ಕೆ.ವಿ. ರಾಮಚಂದ್ರರಾವ್, ಮಂಡ್ಯ ಜಿಲ್ಲಾಧಿಕಾರಿ ಬಿ.ಎನ್. ಕೃಷ್ಣಯ್ಯ, ಪೊಲೀಸ್ ವರಿಷ್ಠಾಧಿಕಾರಿ ಕೌಶಲೇಂದ್ರಕುಮಾರ್ ಹಾಗೂ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಕೆಆರ್‌ಎಸ್‌ಗೆ ಭೇಟಿ ನೀಡಿ ಭದ್ರತೆ ಪರಿಶೀಲಿಸಿದರು. ಸಂಜೆ ವೇಳೆಗೆ ಕೊಡಗು ಹಾಗೂ ಚಾಮರಾಜ ನಗರ ಜಿಲ್ಲೆಗಳಿಂದ ಪೊಲೀಸ ರನ್ನು ಕರೆಸಿಕೊಳ್ಳಲು ಉನ್ನತ ಅಧಿಕಾರಿಗಳು ಸೂಚಿಸಿದ್ದಾರೆ ಎಂದು ಸ್ಥಳೀಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಬೃಂದಾವನ ಬಂದ್: ಕೆಆರ್‌ಎಸ್ ಜಲಾಶಯದ ಸುತ್ತ ನಿಷೇ ಧಾಜ್ಞೆ ಜಾರಿ ಮಾಡಿರುವುದರಿಂದ ಗುರುವಾರ ಬೆಳಿಗ್ಗೆ ಯಿಂದ ಡಿ.10ರ ವರೆಗೆ ಬೃಂದಾವನಕ್ಕೆ ಪ್ರವಾಸಿಗರ ಪ್ರವೇಶ ನಿಷೇಧಿಸಲಾಗಿದೆ. ವರ್ಷದಲ್ಲಿ ಎರಡನೇ ಬಾರಿ ಬೃಂದಾವನ ಪ್ರವೇಶ ನಿಷೇಧಗೊಂಡಿದೆ. ಕಳೆದ ಸೆ.29ರಿಂದ ಅ.13ರ ವರೆಗೆ ಕಾವೇರಿ ಚಳವಳಿ ಕಾರಣಕ್ಕಾಗಿಯೇ 14 ದಿನಗಳ ಕಾಲ ಬೃಂದಾವನ ಬಂದ್ ಆಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.