ADVERTISEMENT

ಕೆಆರ್‌ಎಸ್‌ಗೆ ಶಾಸಕರಿಂದ ಗುನ್ನ: ಆರೋಪ

​ಪ್ರಜಾವಾಣಿ ವಾರ್ತೆ
Published 22 ಜನವರಿ 2011, 8:35 IST
Last Updated 22 ಜನವರಿ 2011, 8:35 IST

ಶ್ರೀರಂಗಪಟ್ಟಣ:  ಮಂಡ್ಯ ಜಿಲ್ಲೆಯ ಜೀವನಾಡಿ ಕೆಆರ್‌ಎಸ್ ಅಣೆಕಟ್ಟೆಗೆ ಶ್ರೀರಂಗಪಟ್ಟಣ ಹಾಗೂ ಮೇಲುಕೋಟೆ ಶಾಸಕರು ಗುನ್ನ ಹೊಡೆಯುತ್ತಿದ್ದು, ಜಲಾಶಯಕ್ಕೆ ಅಪಾಯ ಎದುರಾಗಿದೆ ಎಂದು ರೈತ ಮುಖಂಡ ಕೆ.ಎಸ್.ನಂಜುಂಡೇಗೌಡ ಆರೋಪಿಸಿದರು.ಕೆ.ಎಸ್.ಪುಟ್ಟಣ್ಣಯ್ಯ ಹಾಗೂ ರೈತ ಸಂಘದ ವಿರುದ್ಧ ಜೆಡಿಎಸ್ ಶಾಸಕರು ಹಾಗೂ ಅವರ ಬೆಂಬಲಿಗರು ಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಆರೋಪಿಸಿ ಶುಕ್ರವಾರ ಪಟ್ಟಣದಲ್ಲಿ ನಡೆದ ರೈತಸಂಘದ ಪ್ರತಿಭಟನಾ ಧರಣಿಯಲ್ಲಿ ಮಾತನಾಡಿದರು. ಪಾಂಡವಪುರ ಶಾಸಕರ ಸಂಬಂಧಿಕರು ಕೆಆರ್‌ಎಸ್‌ಗೆ ಅನತಿ ದೂರದಲ್ಲಿ ಕಲ್ಲು ಗಣಿಗಾರಿಕೆ ನಡೆಸುತ್ತಿದ್ದಾರೆ. ಮೆಗ್ಗರ್ ಯಂತ್ರ ಬಳಸಿ ದೊಡ್ಡ ಪ್ರಮಾಣದಲ್ಲಿ ಬಂಡೆ ಸ್ಪೋಟಿಸುತ್ತಿದ್ದಾರೆ. ಇದರಿಂದ ಜಲಾಶಯಕ್ಕೆ ಗಂಡಾಂತರ ಎದುರಾಗಿದೆ ಎಂದು ಹೇಳಿದರು.

ಶ್ರೀರಂಗಪಟ್ಟಣ ಶಾಸಕ ರಮೇಶ ಬಂಡಿಸಿದ್ದೇಗೌಡ ಅವರ ತಾಯಿ ವಿಜಯಲಕ್ಷ್ಮಿ ಬಂಡಿಸಿದ್ದೇಗೌಡ ಶಾಸಕರಾಗಿದ್ದ ಅವಧಿಯಲ್ಲಿ ಅಣೆಕಟ್ಟೆಗೆ ಹತ್ತಿರದ ಹೊಸ ಉಂಡವಾಡಿ ಬಳಿ ಗಣಿಗಾರಿಕೆ ನಡೆದಿತ್ತು. ಗೋಮಾಳ ಹಾಗೂ ಅರಣ್ಯ ಇಲಾಖೆಗೆ ಸೇರಿದ ಜಮೀನನಲ್ಲಿ ಶಾಸಕರು ಮತ್ತವರ ಬೆಂಬಲಿಗರು ಗಣಿಗಾರಿಕೆ ನಡೆಸುತ್ತಿದ್ದಾರೆ.ಈ ಎರಡೂ ತಾಲ್ಲೂಕುಗಳಲ್ಲಿ ಅಕ್ರಮ ಗಣಿಗಾರಿಕೆ ಮಿತಿ ಮೀರಿದೆ. ಈ ಬಗ್ಗೆ ಪೊಲೀಸರು ಹಾಗೂ ತಾಲ್ಲೂಕು ಆಡಳಿತಕ್ಕೆ ಮಾಹಿತಿ ಇದ್ದರೂ ಅಸಹಾಯಕರಾಗಿದ್ದಾರೆ. ಗಣಿ ಸಂಪತ್ತು ಲೂಟಿ ಹೊಡೆಯುತ್ತಿರುವವರ ವಿರುದ್ಧ ಕ್ರಮ ಜರುಗಿಸಬೇಕು ಎಂದರು.

ರೈತ ಸಂಘದ ತಾಲ್ಲೂಕು ಅಧ್ಯಕ್ಷ ಕೆಂಪೇಗೌಡ ಮಾತನಾಡಿ ಬಳ್ಳಾರಿಯಲ್ಲಿ ಕಬ್ಬಿಣದ ಅದಿರು ಲೂಟಿಯಾಗುತ್ತಿರುವ ಮಾದರಿಯಲ್ಲಿ ಇಲ್ಲಿ ಕಲ್ಲು ಲೂಟಿಯಾಗುತ್ತಿದೆ.ಅಕ್ರಮ ಸಂಪತ್ತು ಗಳಿಸಿರುವ ಶಾಸಕರ ಆಸ್ತಿ ಕುರಿತು ತನಿಖೆ ನಡೆಸಬೇಕು’ ಎಂದು ಒತ್ತಾಯಿಸಿದರು. ಮಂಜೇಶ್‌ಗೌಡ, ಎಂ.ಸಿ.ನಾಗರಾಜು, ಮಹಾಲಿಂಗು, ಮಲ್ಲೇಗೌಡ ಮಾತನಾಡಿದರು.ಡಿ.ಎಸ್.ಚಂದ್ರಶೇಖರ್, ಮೇಳಾಪುರ ಜಯರಾಂ, ನೆಲಮನೆ ಕಾಳೇಗೌಡ, ನಾಗೇಂದ್ರಸ್ವಾಮಿ, ಪಾಲಹಳ್ಳಿ ಶ್ರೀನಿವಾಸ್, ಪಾಂಡು ನೇತೃತ್ವ ವಹಿಸಿದ್ದರು. ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು. ಇದಕ್ಕೂ ಮುನ್ನ ಬೆಂಗಳೂರು-ಮೈಸೂರು ಹೆದ್ದಾರಿ ವೃತ್ತದಿಂದ ಮಿನಿ ವಿಧಾನಸೌಧದ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.