ADVERTISEMENT

ಕ್ರೀಡಾಂಗಣ ಕಾಮಗಾರಿ ಆಮೆಗತಿ

​ಪ್ರಜಾವಾಣಿ ವಾರ್ತೆ
Published 23 ಜುಲೈ 2012, 4:20 IST
Last Updated 23 ಜುಲೈ 2012, 4:20 IST

ಮಂಡ್ಯ: ಸುಸಜ್ಜಿತ ಒಳಾಂಗಣ ಕ್ರೀಡಾಂಗಣ ಹೊಂದುವ ಜಿಲ್ಲೆಯ ಕ್ರೀಡಾಪಟುಗಳು ಕನಸು ಕೂಡಲೇ ಈಡೇರುವ ಕನಸು ಕಾಣುತ್ತಿಲ್ಲ. ಇದಕ್ಕೆ ಆಮೆಗತಿಯಲ್ಲಿ ನಡೆದಿರುವ ಕಾಮಗಾರಿಯೇ ಕಾರಣ.

ನಗರದ ಕಲಾ ಮಂದಿರದ ಹಿಂಭಾಗದಲ್ಲಿ ಒಳಾಂಗಣ ಕ್ರೀಡಾಂಗಣ ನಿರ್ಮಾಣ ಕಾರ್ಯ 2010ರಲ್ಲಿ ಆರಂಭಗೊಂಡಿದೆ. 2011 ಮಾರ್ಚ್‌ನಲ್ಲಿ ಪೂರ್ಣಗೊಳ್ಳಬೇಕಾಗಿತ್ತು. ಶೇ 60 ರಷ್ಟು ಭಾಗ ಮಾತ್ರ ಪೂರ್ಣಗೊಂಡಿದೆ.

ಒಳಾಂಗಣ ಕ್ರೀಡಾಂಗಣವು ಮೂರು ಅಂತಸ್ತಿನದಾಗಿದ್ದು, ವೇಟ್ ಹಾಗೂ ಪವರ್ ಲಿಫ್ಟ್, ಮೂರು ಬ್ಯಾಡ್ಮಿಂಟನ್, ಮೂರು ವಾಲಿಬಾಲ್ ಮತ್ತು ಒಂದು ಬ್ಯಾಸ್ಕೆಟ್‌ಬಾಲ್ ಮೈದಾನವನ್ನು ಈ ಕ್ರೀಡಾಂಗಣ ಒಳಗೊಂಡಿದೆ.

ಯುವಜನ ಮತ್ತು ಸೇವಾ ಇಲಾಖೆಯು 1.90 ಕೋಟಿ ರೂಪಾಯಿ ವೆಚ್ಚದಲ್ಲಿ ಕ್ರೀಡಾಂಗಣ ನಿರ್ಮಾಣಕ್ಕೆ ಅನಮೋದನೆ ಪಡೆದುಕೊಂಡಿತ್ತು. ಕಾಮಗಾರಿಯನ್ನು ಲೋಕೋಪಯೋಗಿ ಇಲಾಖೆಗೆ ವಹಿಸಿ ಕೊಡಲಾಗಿತ್ತು. ಆದರೆ ನಂತರದ ಬೆಳವಣಿಗೆಯಲ್ಲಿ ಅದನ್ನು ನಿರ್ಮಿತಿ ಕೇಂದ್ರಕ್ಕೆ ವಹಿಸಿಕೊಡಲಾಯಿತು.

ನಿರ್ಮಿತಿ ಕೇಂದ್ರವು 2.35 ಕೋಟಿ ರೂಪಾಯಿ ವೆಚ್ಚದ ಯೋಜನೆ ರೂಪಿಸಿತು. ಇದಕ್ಕೆ ಕ್ರೀಡಾ ಇಲಾಖೆ ಸಮ್ಮತಿಸಲಿಲ್ಲ. ಆಗ ಜಿಲ್ಲಾ ಕ್ರೀಡಾ ಸಮಿತಿಯ ಅಧ್ಯಕ್ಷರು, ಸ್ಥಳೀಯ ಸಂಸ್ಥೆಗಳ ಅನುದಾನ ಪಡೆದುಕೊಂಡು ನಿರ್ಮಿಸಲಾಗುವುದು ಎಂದು ಹೇಳಿ, ನಿರ್ಮಿತಿ ಕೇಂದ್ರಕ್ಕೆ ಒಪ್ಪಿಸಿದರು.

ಕಾಮಗಾರಿ ವಿಳಂಬವಾಗುತ್ತದೆ ಎಂದು ಲೋಕೋಪಯೋಗಿ ಇಲಾಖೆ ಯಿಂದ ನಿರ್ಮಿತಿ ಕೇಂದ್ರಕ್ಕೆ ವರ್ಗಾಯಿ ಸಲಾಯಿತು ಎಂದು ಅಧಿಕಾರಿಗಳು ಹೇಳುತ್ತಾರೆ. ಈಗಲೂ ವಿಳಂಬ ವಾಗಿದೆಯಲ್ಲ ಎಂಬ ಪ್ರಶ್ನೆಗೆ ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು, ಮೂಲ ಕಾರಣವೇ ಬೇರೆ ಇತ್ತು ಎನ್ನುತ್ತಾರೆ.

ಕ್ರೀಡಾಂಗಣ ನಿರ್ಮಾಣಕ್ಕಾಗಿ ಈಗಾಗಲೇ ಸರ್ಕಾರದಿಂದ 1.25 ಕೋಟಿ ರೂಪಾಯಿ ಬಿಡುಗಡೆ ಯಾಗಿದೆ. ಇನ್ನು ಹಣ ಬಿಡುಗಡೆ ಯಾಗಲಿದೆ. ಆದರೆ ಕಾಮಗಾರಿ ಮಾತ್ರ ನಿರೀಕ್ಷಿತ ಪ್ರಗತಿ ಕಾಣುತ್ತಿಲ್ಲ.

ನಿರ್ಮಿತಿ ಕೇಂದ್ರವೂ ಸರ್ಕಾರದ ಒಂದ ಏಜೆನ್ಸಿಯಾಗಿರುವುದರಿಂದ ಏನನ್ನೂ ಹೇಳಲಾಗದ ಸ್ಥಿತಿ ಅಧಿಕಾರಿ ಗಳದ್ದಾಗಿದೆ. ಹಲವಾರು ಬಾರಿ ಕಾಮ ಗಾರಿಯನ್ನು ಶೀಘ್ರ ಪೂರ್ಣಗೊಳಿಸು ವಂತೆ ಸೂಚಿಸಲಾಗಿದೆ. ಆದರೆ ಪರಿಣಾಮ ಮಾತ್ರ ಶೂನ್ಯ.

ಬ್ಯಾಡ್ಮಿಂಟನ್, ದೇಹದಾರ್ಢ್ಯ ಮುಂತಾದ ಸ್ಪರ್ಧೆಯ ಕ್ರೀಡಾಪಟು ಗಳು ಇಂದಿಗೂ ಖಾಸಗಿ ಕ್ರೀಡಾಂಗಣ ವನ್ನೇ ಅವಲಂಬಿಸಬೇಕಾಗಿದೆ. ಕಟ್ಟಡ ಕಾಮಗಾರಿ ತೀವ್ರಗೊಳ್ಳುವುದೇ ಕಾದು ನೋಡಬೇಕು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.