ADVERTISEMENT

ಗಡಿಯಲ್ಲಿ ದ್ವಿಭಾಷಾ ನೀತಿ ಜಾರಿಗೊಳಿಸಿ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2011, 6:35 IST
Last Updated 27 ಸೆಪ್ಟೆಂಬರ್ 2011, 6:35 IST

ಮಂಡ್ಯ: `ರಾಜ್ಯಗಳ ಗಡಿ ಭಾಗಗಳಲ್ಲಿ ದ್ವಿಭಾಷಾ ನೀತಿ ಜಾರಿಗೆ ತರುವಂತೆ~ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಡಾ. ಮುಖ್ಯಮಂತ್ರಿ ಚಂದ್ರು ಆಗ್ರಹಿಸಿದರು.

ನಗರದ ಎಂಜಿನಿಯರಿಂಗ್ ಕಾಲೇಜಿನ ಪ್ಲೇಸ್‌ಮೆಂಟ್ ಸಭಾಂಗಣದಲ್ಲಿ ಸೋಮವಾರ ಜರುಗಿದ ಸಮಾರಂಭ ದಲ್ಲಿ ಎಚ್.ಡಿ.ಚೌಡಯ್ಯ ಪ್ರಶಸ್ತಿಗಳನ್ನು ಪ್ರದಾನ ಮಾಡಿ ಮಾತನಾಡಿದ ಅವರು, `ಕನ್ನಡ ಭಾಷೆ ಬೆಳವಣಿಗೆ ದೃಷ್ಟಿಯಿಂದ ರಾಜ್ಯ ಸರ್ಕಾರ ಸೂಕ್ತ ಕ್ರಮಕೈ ಗೊಳ್ಳಬೇಕು~ ಎಂದು ಒತ್ತಾಯಿಸಿದರು.

ಭಾಷಾವಾರು ಪ್ರದೇಶ ಅನುಸಾರ ಕನ್ನಡ ಏಕೀಕರಣವಾಗಿದೆಯೇ ವಿನಾಃ ಸಂಪೂರ್ಣ ಕನ್ನಡೀಕರಣವಾಗಿಲ್ಲ. ಶಾಲಾ ಕಾಲೇಜುಗಳಲ್ಲಿ ಗುಣಾತ್ಮಾಕ ಶಿಕ್ಷಣ ನೀಡುವುದರ ಮಾತೃಭಾಷೆಯ ಬಗೆಗೆ ಅಭಿಮಾನ, ಆಸಕ್ತಿ ಮಾಡಿಸುವ ಕೆಲಸವೂ ಆಗಬೇಕಿದೆ ಎಂದು ಹೇಳಿದರು.

ಕನ್ನಡ ಶಿಕ್ಷಕರ ನೇಮಕವಾಗಬೇಕು: ರಾಜ್ಯದಲ್ಲಿನ ಗಡಿಭಾಗ ಶಾಲಾ- ಕಾಲೇಜುಗಳು ಹಾಗೂ ಹೊರ ರಾಜ್ಯದಲ್ಲಿನ ಕನ್ನಡ ಅಧ್ಯಯನ ಪೀಠಗಳಲ್ಲಿ ಖಾಲಿ ಇರುವ ಕನ್ನಡ ಭಾಷಾ ಶಿಕ್ಷಕರ ಹುದ್ದೆಗಳನ್ನು ಭರ್ತಿಮಾಡುವ ಸಂಬಂಧ ಮುಖ್ಯಮಂತ್ರಿ ಮತ್ತು ಶಿಕ್ಷಣ ಸಚಿವರ ಜೊತೆ ಶೀಘ್ರ ಚರ್ಚಿಸುವುದಾಗಿ ತಿಳಿಸಿದರು. ಬೆಳಗಾವಿಯಲ್ಲಿ ಮರಾಠಿ ಮತ್ತು ಕನ್ನಡ ಭಾಷಿಕರ ನಡುವೆ ಸೌಹಾರ್ದ ಸಂಬಂಧವಿದೆ.

ಆದರೆ, ಕೆಲ ವ್ಯಕ್ತಿಗಳು ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳುವುದಕೋಸ್ಕರ ಆಗಿದ್ದಾಂಗೆ ಗಲಭೆಗಳನ್ನು ನಡೆಸುವ ಮೂಲಕ ಸಾಮರಸ್ಯ ಕದಡಲು ಯತ್ನಿಸುತ್ತಿದ್ದಾರೆ. ಇದರಲ್ಲಿ ಅವರು ಯಶಸ್ವಿಯಾಗಲು ಸಾಧ್ಯವಿಲ್ಲ ಎಂದು ಪ್ರತಿಪಾದಿಸಿದರು.

ಪ್ರಶಸ್ತಿ ಪುರಸ್ಕೃತರು: ಬೆಳಗಾವಿ ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಬಿ.ಕೋರೆ ಅವರಿಗೆ ಸಮಾಜ ಸೇವಾ ಪ್ರಶಸ್ತಿ, ಮಾಜಿ ಸಚಿವ ಎಚ್.ಕೆ.ಪಾಟೀಲರಿಗೆ ಸಹಕಾರ ಪ್ರಶಸ್ತಿ ಹಾಗೂ ವಿಮರ್ಶಕ ಡಾ. ಸಿ.ಪಿ.ಕೃಷ್ಣಕುಮಾರ್ ಅವರಿಗೆ ಸಾಹಿತ್ಯ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು.

ಇದೇ ಸಂದರ್ಭದಲ್ಲಿ ಕಳೆದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಗರಿಷ್ಠ ಅಂಕ ಗಳಿಸಿದ ಹೊಳಲು ಸರ್ಕಾರಿ ಶಾಲೆಯ ಎಚ್.ಎ.ರಶ್ಮಿ, ಎಚ್.ವಿ.ಪ್ರತಾಪ್; ವೆಂಕಟೇಶ್ವರ ವಿದ್ಯಾನಿಕೇತನ ಶಾಲೆಯ ಎಚ್.ಎಸ್.ಕಾರ್ತಿಕ್ ಮತ್ತು ಎಸ್.ಎ.ಸಪ್ನ ಅವರಿಗೆ ನಗದು ಬಹುಮಾನ ನೀಡಿ ಪ್ರೋತ್ಸಾಹಿಸಲಾಯಿತು.

ಎಚ್.ಡಿ.ಚೌಡಯ್ಯ ಮತ್ತು ಅವರ ಪತ್ನಿ ದೊಡ್ಡ ಲಿಂಗಮ್ಮ, ಪ್ರಾಧ್ಯಾಪಕ ಡಾ. ಎಸ್.ಬಿ.ಶಂಕರಗೌಡ, ಎಚ್.ಡಿ.ಚೌಡಯ್ಯ ಪ್ರತಿಷ್ಠಾನದ ಅಧ್ಯಕ್ಷ ಎಚ್.ಹೊನ್ನಪ್ಪ, ಪ್ರಧಾನ ಕಾರ್ಯದರ್ಶಿ ಪ್ರೊ. ಜಯಪ್ರಕಾಶ್‌ಗೌಡ, ಡಾ. ರಾಮಲಿಂಗಯ್ಯ, ಆರ್.ಎಂ.ಸುಬ್ಬೇಗೌಡ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.