ADVERTISEMENT

ಗಾಯಾಳು ನೆರವಿಗೆ ಬಾರದ ಅಂಬುಲೆನ್ಸ್!

​ಪ್ರಜಾವಾಣಿ ವಾರ್ತೆ
Published 15 ಜನವರಿ 2012, 8:50 IST
Last Updated 15 ಜನವರಿ 2012, 8:50 IST

ನಾಗಮಂಗಲ:  ತಾಲ್ಲೂಕಿನ ತಟ್ಟಹಳ್ಳಿ ಗೇಟ್ ಸಮೀಪದ ತಿರುವಿನಲ್ಲಿ ಶನಿವಾರ ಖಾಸಗಿ ಬಸ್ ಪಲ್ಟಿ ಹೊಡೆದು ಗಾಯಗೊಂಡ 30ಕ್ಕೂ ಹೆಚ್ಚು ಮಂದಿಯನ್ನು ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಕರೆ ತರಲು ತುರ್ತು ಚಿಕಿತ್ಸಾ ವಾಹನದ ವ್ಯವಸ್ಥೆ ಇಲ್ಲದೇ ಗಾಯಾಳುಗಳು ಹಲವು ಗಂಟೆಗಳ ಕಾಲ ಪರದಾಡಿದರು.

ಆಸ್ಪತ್ರೆಯ 108 ವಾಹನವು ಒಬ್ಬರು ಗಾಯಾಳು ಸಾಗಿಸಲು ದೂರ ಹೋಗಿದ್ದರೆ, ಬೇರೆ ಗಾಯಾಳುಗಳ ಚಿಕಿತ್ಸೆಗೆ ಬೇರೆಡೆ ಸಾಗಿಸಲು ಶನಿವಾರ ಖಾಸಗಿ ವಾಹನ ಅವಲಂಬಿಸ ಬೇಕಾಯಿತು. ಅವು ಸಹ ಸರಿಯಾಗಿ ದೊರೆಯದೇ ಪೋಷಕರು ಆತಂಕಕ್ಕೆ ಒಳಗಾದರು. ಆಸ್ಪತ್ರೆಯ 2 ತುರ್ತು ವಾಹನಗಳಲ್ಲಿ ಒಂದು ಕೆಟ್ಟು ನಿಂತು ತುಕ್ಕು ಹಿಡಿಯುತ್ತಿದೆ. ಮತ್ತೊಂದು ಮರದ ನೆರಳಿನಲ್ಲಿ ಆಶ್ರಯ ಪಡೆಯುತ್ತಿದೆ.

108 ವಾಹನ ಕೇವಲ ಸೀಮಿತ ಪರಿಧಿಯೊಳಗೆ ಕಾರ್ಯನಿರ್ವಹಿಸುತ್ತದೆ. ಈ ಆಸ್ಪತ್ರೆಗೆ ಬರುವ ರೋಗಿಗಳನ್ನು ಹೆಚ್ಚಿನ ಚಿಕಿತ್ಸೆಗೆ ರವಾನಿಸಲು ತುರ್ತು ವಾಹನದ ಅವಶ್ಯಕತೆ ಇದೆ. ಖಾಸಗಿ ವಾಹನದಲ್ಲಿ ರೋಗಿಯನ್ನು ಸಾಗಿಸಬಹುದು. ಆದರೆ ತುರ್ತು ವಾಹನದಲ್ಲಿ ಸಿಗುವ ಪ್ರಾಥಮಿಕ ಚಿಕಿತ್ಸೆ ಖಾಸಗಿ ವಾಹನದಲ್ಲಿ ಲಭ್ಯವಾಗುವುದಿಲ್ಲ ಎನ್ನುವುದು ನಾಗರಿಕರ ವಾದ.

2 ತುರ್ತು ವಾಹನಗಳು ಕೆಟ್ಟು ನಿಂತಿದ್ದರೂ ರಿಪೇರಿ ಮಾಡಿಸದ್ದಕ್ಕೆ ನಾಗರಿಕರು ಆಕ್ರೋಶ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.