ADVERTISEMENT

ಗೊಬ್ಬರ ದರ ಏರಿಕೆ ಖಂಡಿಸಿ ರಸ್ತೆ ತಡೆ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2011, 10:05 IST
Last Updated 10 ಸೆಪ್ಟೆಂಬರ್ 2011, 10:05 IST

ಪಾಂಡವಪುರ: ಸರ್ಕಾರ ರಸಗೊಬ್ಬರ ಹಾಗೂ ಕೀಟನಾಶಕ ದರ ಹೆಚ್ಚಳ ಮಾಡಿರುವುದನ್ನು ವಿರೋಧಿಸಿ ರೈತ ಸಂಘದ ಅಧ್ಯಕ್ಷ ಕೆ.ಎಸ್.ಪುಟ್ಟಣ್ಣಯ್ಯನೇತೃತ್ವದಲ್ಲಿ ನೂರಾರು ಕಾರ್ಯಕರ್ತರು ಶುಕ್ರವಾರ ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು.

ಬೆಳಿಗ್ಗೆ 11 ಗಂಟೆಯಲ್ಲಿ ಪಟ್ಟಣದ ಡಾ.ರಾಜಕುಮಾರ್ ವೃತ್ತದಲ್ಲಿ ಜಮಾವಣೆಗೊಂಡ ಕಾರ್ಯಕರ್ತರು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.

ರೈತರ ಕೃಷಿ ಬೆಳೆಗಳಿಗೆ ಉಪಯೋಗಿಸುತ್ತಿದ್ದ ರಸಗೊಬ್ಬರ ಹಾಗೂ ಕೀಟನಾಶಕಗಳಿಗೆ  ದುಬಾರಿ ಬೆಲೆಯನ್ನು ಹೆಚ್ಚಿಸಿರುವುದರಿಂದ ಬೇಸಾಯ ಮಾಡಲು ಕಷ್ಟಕರವಾಗುತ್ತಿದೆ. ರಸಗೊಬ್ಬರಗಳಾದ ಡಿಎಪಿ 490ರಿಂದ 670 ರೂಗಳಿಗೆ, 10:26:26 380ರಿಂದ 730 ರೂಗಳಿಗೆ, ಪೊಟ್ಯಾಸ್ 265ರಿಂದ 390ರೂಗಳಿಗೆ, 20:20:20 345ರಿಂದ 565ರೂಗಳಿಗೆ, 16:20 325ರಿಂದ 570ರೂಗಳಿಗೆ, ಸುಫಲಾ 270ರಿಂದ 480ರೂಗಳಿಗೆ, 14:35 ಮಿಶ್ರಣ 425ರಿಂದ 600ರೂಗಳಿಗೆ, ಬೂದಿ 270ರಿಂದ 430ರೂಗಳನ್ನು ಹೆಚ್ಚಳ ಮಾಡಲಾಗಿದೆ ಎಂದು ಆರೋಪಿಸಿದ ಪ್ರತಿಭಟನಕಾರರು ಕೂಡಲೇ ಸರ್ಕಾರ ಬೆಲೆ ಹೆಚ್ಚಳದ ಬಗ್ಗೆ ಕ್ರಮ ಕೈಗೊಂಡು ಮೊದಲಿನ ದರಕ್ಕೆ ನೀಡಬೇಕೆಂದು ಆಗ್ರಹಿಸಿದರು.

ನಂತರ ಮಾತನಾಡಿದ ಕೆ.ಎಸ್. ಪುಟ್ಟಣ್ಣಯ್ಯ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ದ ರೈತ ವಿರೋಧಿ ನೀತಿಯಿಂದಾಗಿ ರೈತರು ಗುಳೆ ಹೋಗುವ ಪರಿಸ್ಥಿತಿ ಬಂದಿದೆ. ಸರ್ಕಾ ರದ ಕೃಷಿ ಹಾಗೂ ಆರ್ಥಿಕ ನೀತಿ ಯಿಂದಾಗಿ ಕೃಷಿ ಕ್ಷೇತ್ರ ಬರಡಾಗುತ್ತಿದ್ದು, ಇದುವರೆಗೂ 7ಲಕ್ಷ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪರಿಸ್ಥಿತಿ ಹೀಗೆ ಮುಂದುವರೆದರೆ ಆಹಾರ ಹಾಗೂ ಜೀವನಾವಶ್ಯಕ ವಸ್ತುಗಳು ಮತ್ತಷ್ಟು ಹೆಚ್ಚಳವಾಗಲಿದೆಯೆಂದು ಆತಂಕ ವ್ಯಕ್ತಪಡಿಸಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ಎ.ಎಲ್. ಕೆಂಪೂಗೌಡ, ಎಪಿಎಂಸಿ ನಿರ್ದೇಶಕ ಕೃಷ್ಣಮೂರ್ತಿ, ಟಿಎಪಿಸಿಎಂಎಸ್ ನಿರ್ದೇಶಕ ದಯಾನಂದ್, ರೈತ ಸಂಘದ ಪ್ರಧಾನ ಕಾರ್ಯದರ್ಶಿ ಎಚ್.ಎನ್. ವಿಜಯಕುಮಾರ್ ಮುಖಂಡರಾದ ಹರವು ಪ್ರಕಾಶ್, ಜಯರಾಂ, ಹೊಸಕೋಟೆ ರಾಮೇಗೌಡ, ರಾಜಶೇಖರಮೂರ್ತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.