ADVERTISEMENT

ಗೊಬ್ಬರ ಬೆಲೆ ಏರಿಕೆ ಖಂಡಿಸಿ ಧರಣಿ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2011, 9:45 IST
Last Updated 10 ಸೆಪ್ಟೆಂಬರ್ 2011, 9:45 IST

ಮಂಡ್ಯ: ಪೊಟಾಷ್, ಡಿಎಪಿ, ಸುಫಲಾ, ಯೂರಿಯಾ ಸೇರಿದಂತೆ ವಿವಿಧ ರಸಗೊಬ್ಬರಗಳ ಬೆಲೆ ಏರಿಕೆ ಆಗಿರುವುದನ್ನು ಖಂಡಿಸಿ ರೈತ ಸಂಘದ ಕಾರ್ಯಕರ್ತರು ಶುಕ್ರವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

ಮೈಸೂರು-ಬೆಂಗಳೂರು ಹೆದ್ದಾ ರಿಯ ಸರ್ಕಾರಿ ಬಸ್ ನಿಲ್ದಾಣ ಸಮೀಪ ವೃತ್ತದಲ್ಲಿ ಜಮಾವಣೆಗೊಂಡ ರೈತರು, ಮಾನವ ಸರಳಿ ನಿರ್ಮಿಸಿ ಕೆಲ ಕಾಲ ರಸ್ತೆಯಲ್ಲಿನ ವಾಹನ ಸಂಚಾರಕ್ಕೆ ಅಡ್ಡಿಪಡಿಸಿದರು. ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ರೈತರು ಬೆಳೆದ ಕೃಷಿ ಉತ್ಪನ್ನಗಳಿಗೆ ಸೂಕ್ತ ಬೆಲೆ ನೀಡಲು ಮೀನಾಮೇಷ ಎಣಿಸುವ ಸರ್ಕಾರ ಅಗತ್ಯ ರಸಗೊಬ್ಬರಗಳ ಬೆಲೆಯನ್ನು ಏಕಾಏಕೀ ಏರಿಸುವ ಮೂಲಕ ರೈತರನ್ನು ಶೋಷಿಸುತ್ತಿದೆ. ಈಗಾಗಲೇ ಬೇಸಾಯದ ವೆಚ್ಚ ದುಪ್ಪಟವಾಗಿದೆ. ಈಗ ರಸಗೊಬ್ಬರದ ಬೆಲೆಯನ್ನೂ ಹೆಚ್ಚಿಸಿರುವುದು ಸರಿಯಲ್ಲ ಎಂದು ಕಿಡಿಕಾರಿದರು.

ಡಿಎಪಿ ಹಳೇ ದರ ರೂ 490 ಇದ್ದು, ಈಗ ರೂ. 670ಕ್ಕೆ ಏರಿಕೆ ಆಗಿದೆ. ಅದೇ ರೀತಿ, 10:26:26 ಗೊಬ್ಬರದ ಬೆಲೆ ರೂ. 730ಕ್ಕೆ, ಪೊಟಾಸ್ ದರ ರೂ. 390ಕ್ಕೆ, 20:20:20 ಗೊಬ್ಬರ ಬೆಲೆ ರೂ 565 ಆಗಿದೆ. ಜತೆಗೆ, ಕ್ರಿಮಿ ನಾಶಕ ಔಷಧಗಳ ಬೆಲೆಯೂ ಏರಿದೆ. ಬೇಸಾಯ ಕಷ್ಟವಾಗುತ್ತಿದ್ದು, ರೈತರ ನೆರವಿಗೆ ಸರ್ಕಾರ ಧಾವಿಸಬೇಕು ಎಂದು ಆಗ್ರಹಿಸಿದರು.

ರೈತ ಸಂಘದ ಎಸ್. ಸುರೇಶ್, ಹನಿಯಂಬಾಡಿ ನಾಗರಾಜು, ಬೊಮ್ಮೇಗೌಡ, ಸೋಮಶೇಖರ್, ಹಲ್ಲೇಗೆರೆ ಶಿವರಾಮು, ಮುದ್ದೇಗೌಡ, ಬಳ್ಳಾರಿಗೌಡ, ಸಿದ್ದೇಗೌಡ ಅವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.