ADVERTISEMENT

ಗ್ರಾಪಂ ಎದುರು ಮಹಿಳೆಯರ ಧರಣಿ

​ಪ್ರಜಾವಾಣಿ ವಾರ್ತೆ
Published 5 ಜನವರಿ 2012, 6:45 IST
Last Updated 5 ಜನವರಿ 2012, 6:45 IST

ನಾಗಮಂಗಲ: ತೆರಿಗೆ ಹಣವನ್ನು ಬಳಸಿಕೊಂಡು ಅಮಾನತ್ತಿನಲ್ಲಿರುವ ಗ್ರಾಮ ಪಂಚಾಯಿತಿ ನೌಕರನನ್ನು ಮತ್ತೆ ಕೆಲಸಕ್ಕೆ ಸೇರಿಸಿಕೊಳ್ಳುವ ಗ್ರಾಮ ಪಂಚಾಯಿತಿ ಅಧ್ಯಕ್ಷರ ವರ್ತನೆ ಖಂಡಿಸಿ ಹರದನಹಳ್ಳಿ ಹಾಗೂ ಸುತ್ತಮುತ್ತಲ ಗ್ರಾಮಗಳ ಮಹಿಳೆಯರು ಬುಧವಾರ ಧರಣಿ ನಡೆಸಿದರು.

ತಾಲ್ಲೂಕಿನ ಹರದನಹಳ್ಳಿ ಗ್ರಾಮ ಪಂಚಾಯಿತಿ ಎದುರು ಪಂಚಾಯಿತಿ ಅಧ್ಯಕ್ಷ ಡಿ.ಕೆ. ರಾಜೇಗೌಡರಿಗೆ ಘೇರಾವ್ ಹಾಕಿ, ಧರಣಿ ನಡೆಸಿದರು.

ಪಂಚಾಯಿತಿಯಲ್ಲಿ ಕಂದಾಯ ವಸೂಲಿ ಮಾಡುವ ನಾಗರಾಜ್ ಮನೆ ಕಂದಾಯ ಪಾವತಿಸದಿದ್ದರೆ ಪಡಿತರ ನೀಡುವುದಿಲ್ಲ ಎಂದು ಹೆದರಿಸಿ 5  ಗ್ರಾಮಗಳ ಮಹಿಳೆಯರಿಂದ ಕಂದಾಯ ವಸೂಲಿ ಮಾಡಿದ್ದಾನೆ. ರಸೀತಿ ನೀಡುವ ಬದಲು ಬಿಳಿ ಹಾಳೆಯಲ್ಲಿ ರುಜು ಮಾಡಿ ನೀಡಿದ್ದಾನೆ. ಇಷ್ಟೆ ಅಲ್ಲದೇ ಒಂದೇ ಮನೆಯಿಂದ ಎರಡು ಬಾರಿ ಕಂದಾಯ ವಸೂಲಿ ಮಾಡಿದ್ದಾನೆ. ಹೀಗೆ ವಸೂಲಿ ಮಾಡಿದ ರೂ.50 ಸಾವಿರಕ್ಕೂ ಅಧಿಕ ಹಣವನ್ನು ದುರುಪಯೋಗ ಪಡಿಸಿಕೊಂಡ ಆಪಾದನೆ ಮೇಲೆ ನಾಗರಾಜ ಅಮಾನತ್ತಿನಲ್ಲಿದ್ದಾನೆ ಎಂದು ದೂರಿದರು.

ಪಂಚಾಯಿತಿಗೆ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಡಿ.ಕೆ.ರಾಜೇಗೌಡ, ನಾಗರಾಜನನ್ನು ಮತ್ತೆ ಕೆಲಸಕ್ಕೆ ಸೇರಿಸಲು ಪಟ್ಟು ಹಿಡಿದಿದ್ದಾರೆ. ಈ ಹಿನ್ನೆಲೆಯಲ್ಲಿ 7 ಮಂದಿ ಗ್ರಾಮ ಪಂಚಾಯಿತಿ ಸದಸ್ಯರು ನಾಗರಾಜನ ವಿರುದ್ಧ ಮತ ಹಾಕಿದ್ದಾರೆ. ಆದರೂ ಪಟ್ಟು ಬಿಡದ ಅಧ್ಯಕ್ಷ ಆತನನ್ನು  ಕೆಲಸಕ್ಕೆ ಸೇರಿಸಿಕೊಳ್ಳಲು ಮುಂದಾಗಿದ್ದಾರೆ. ಆದ್ದರಿಂದ ಯಾವುದೇ ಕಾರಣಕ್ಕೂ ಕೆಲಸಕ್ಕೆ ತೆಗೆದುಕೊಳ್ಳಬಾರದು ಎಂದು ಪಟ್ಟು ಹಿಡಿದು ಅಧ್ಯಕ್ಷರ ವಿರುದ್ಧ ಘೋಷಣೆ ಕೂಗಿದರು.

ಸಭೆಯಲ್ಲಿ ತೀರ್ಮಾನ: ನಾಗರಾಜನನ್ನು ಕೆಲಸಕ್ಕೆ ತೆಗೆದುಕೊಳ್ಳಬೇಕೋ, ಬೇಡವೋ ಎನ್ನುವ ವಿಷಯದ ಬಗ್ಗೆ ಮುಂದಿನ ಸಾಮಾನ್ಯಸಭೆಯಲ್ಲಿ ಸದಸ್ಯರೊಂದಿಗೆ ಚರ್ಚಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಡಿ.ಕೆ.ರಾಜೇಗೌಡ ಹೇಳಿದರು.

ನೇತ್ರ ತಪಾಸಣೆ ಇಂದು
ಮಳವಳ್ಳಿ: ಎಂ.ಎನ್.ಜಗನ್ನಾಥ್ ಹಾಗೂ ಕೆ.ಎಂ.ನಿತಿನ್‌ಸಾಗರ್ ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಟ್ರಸ್ಟ್, ಭಗವಾನ್ ಬುದ್ಧ ಸಾಮಾಜಿಕ ಮತ್ತು ಶೈಕ್ಷಣಿಕ ಸಂಸ್ಥೆ, ಭಗವಾನ್ ಮಹಾವೀರ್ ದರ್ಶನ್ ಕಣ್ಣಿನ ಆಸ್ಪತ್ರೆ ಹಾಗೂ ತಾಲ್ಲೂಕು ಆಸ್ಪತ್ರೆಗಳ ಸಂಯುಕ್ತ ಆಶ್ರಯದಲ್ಲಿ ಜ.5 ರಂದು ಭಗವಾನ್ ಬುದ್ಧ ಕಾಲೇಜು ಆವರಣದಲ್ಲಿ `ಉಚಿತ ಕಣ್ಣಿನ ಪೊರೆ ತಪಾಸಣಾ ಶಿಬಿರ~ವನ್ನು ಹಮ್ಮಿಕೊಳ್ಳಲಾಗಿದೆ.

ಅಂದು ಮಧ್ಯಾಹ್ನ 12 ರಿಂದ 4 ಗಂಟೆವರಿಗೆ ತಪಾಸಣೆ ನಡೆಯಲಿದ್ದು, ಸಾರ್ವಜನಿಕರು  ಇದರ ಸದುಪಯೋಗ ಪಡೆದುಕೊಳ್ಳುವಂತೆ ಮನವಿ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.