ADVERTISEMENT

ಜಲಪಾತೋತ್ಸವ ಇಂದಿನಿಂದ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2013, 6:50 IST
Last Updated 14 ಸೆಪ್ಟೆಂಬರ್ 2013, 6:50 IST
ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನಲ್ಲಿರುವ ಗಗನಚುಕ್ಕಿ ಜಲಪಾತದ ವೈಭವ ದೃಶ್ಯ.
ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನಲ್ಲಿರುವ ಗಗನಚುಕ್ಕಿ ಜಲಪಾತದ ವೈಭವ ದೃಶ್ಯ.   

ಮಂಡ್ಯ: ಹಾಲಿನ ನೊರೆಯಂತೆ ಉಕ್ಕಿ ಹರಿಯುತ್ತಿರುವ ಗಗನಚುಕ್ಕಿ ಜಲಪಾತದ ವೈಭವ ಒಂದೆಡೆಯಾದರೆ, ದೀಪಾಲಂಕಾರ, ಬಾಣಬಿರುಸುಗಳ ಚಿತ್ತಾರ, ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತೊಂದೆಡೆ.

ಇವರೆಡರ ಸವಿಯೂಟವನ್ನು ಉಣಬಡಿಸಲು ಸೆ.14 ಮತ್ತು 15 ರಂದು ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಗಗನಚುಕ್ಕಿಯಲ್ಲಿ ನಡೆಯಲಿರುವ ಜಲಪಾತೋತ್ಸವ ಸಜ್ಜಾಗಿದೆ.

ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗಿರುವುದರಿಂದ ಗಗನಚುಕ್ಕಿ ಜಲಪಾತ ಮೈದುಂಬಿಕೊಂಡಿದ್ದು, 370 ಎತ್ತರದಿಂದ ನೀರು ಧುಮ್ಮಿಕ್ಕುತ್ತಿದೆ.

ಜಲಪಾತದ ಸವಿಯೊಂದಿಗೆ ಸಾಂಸ್ಕೃತಿಕ ಸವಿಯನ್ನೂ ಸವಿಸಲು ಜಲಪಾ­ತೋತ್ಸವ ಹಮ್ಮಿಕೊಳ್ಳ­ಲಾಗಿದೆ. ನಾಡಿನ ವಿವಿಧೆಡೆಯಿಂದ ಆಗಮಿ­ಸುವ ಕಲಾವಿದರು, ಕಲೆಯ ಸವಿಯನ್ನು ಉಣಬಡಿಸಲಿ­ದ್ದಾರೆ. ಕಲಾ ಪ್ರದರ್ಶನಕ್ಕಾಗಿ ’ಶಿವ’ ವೇದಿಕೆಯನ್ನು ಸಜ್ಜುಗೊಳಿಸಲಾಗಿದ್ದು, 10 ಸಾವಿರಕ್ಕೂ ಹೆಚ್ಚು ಪ್ರೇಕ್ಷಕರಿಗೆ ಆಸನ ವ್ಯವಸ್ಥೆ ಮಾಡಲಾಗಿದೆ.

ಉತ್ಸವ ವೀಕ್ಷಣೆಗೆ ಆಗಮಿಸುವ ಪ್ರವಾಸಿಗರಿಗಾಗಿ 40 ಕೌಂಟರ್‌ಗಳಲ್ಲಿ ಊಟದ ವ್ಯವಸ್ಥೆಯನ್ನು ಮಾಡಲಾಗಿ­ದೆ. ವಾಹನ ನಿಲುಗಡೆಗೆ ಜಲಪಾತ­ದಿಂದ ಸ್ವಲ್ಪ ದೂರದಲ್ಲಿ ಅನುಕೂಲ ಮಾಡಲಾಗಿದ್ದು, ಅಲ್ಲಿಂದ ಸರ್ಕಾರಿ ಬಸ್ ಗಳಲ್ಲಿ ಕರೆದೊಯ್ಯುವ ವ್ಯವಸ್ಥೆ ಮಾಡಲಾಗಿದೆ.

ಪ್ಲಾಸ್ಟಿಕ್‌ ಬಳಕೆಯನ್ನು ಅಲ್ಲಿ ನಿಷೇಧಿಸಿ­ರುವ ಹಿನ್ನೆಲೆಯಲ್ಲಿ ಅಡಿಕೆತಟ್ಟೆಯಲ್ಲಿ ಊಟದ ವ್ಯವಸ್ಥೆ ಮಾಡಲಾಗಿದೆ. ಸಾರ್ವಜನಿಕರೂ ಅಲ್ಲಿ ಪ್ಲಾಸ್ಟಿಕ್‌ ಬಳಸಬಾರದು ಎನ್ನುವುದು ಶಾಸಕ ನರೇಂದ್ರಸ್ವಾಮಿ ಅವರ ಅಭಿಮತ.

ಚಲನಚಿತ್ರ ಹಾಗೂ ಕಿರುತೆರೆಯ ನಟರಾದ ವಿಜಯ ರಾಘವೇಂದ್ರ, ಯಜ್ಞಾ­ಶೆಟ್ಟಿ, ಚಿತ್ರಾ ಮತ್ತಿತರನ್ನೊಳ­ಗೊಂಡ ತಂಡವು ನೃತ್ಯ ಪ್ರದರ್ಶನವನ್ನು ನೀಡಲಿದೆ.

ಸೆ.14ರಂದು ಬೆಳಿಗ್ಗೆ 10 ಗಂಟೆಗೆ ಶಿವನಸಮುದ್ರದ ರಾಮಮಂದಿರ ಬಳಿ ಹಿರಿಯ ಸಾಹಿತಿ ಅ.ರಾ. ಮಿತ್ರ ಅವರು ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ.

ಸಂಜೆ 6ಕ್ಕೆ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಅಂಬರೀಷ್‌ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಶಾಸಕ ಪಿ.ಎಂ. ನರೇಂದ್ರಸ್ವಾಮಿ ವಹಿಸ­ಲಿ­ದ್ದಾರೆ. ಸಂಸದೆ ರಮ್ಯಾ, ಸಚಿವರಾದ ರಾಮಲಿಂಗಾರೆಡ್ಡಿ, ಎಂ.ಬಿ. ಪಾಟೀಲ ಇತರರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಜಲಪಾತೋತ್ಸವದಲ್ಲಿ ಇಂದು
ಜಾನಪದ ಕಲಾ ಜಾಥ ಮೆರವಣಿಗೆ –ಬೆಳಿಗ್ಗೆ 10.

ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು –ಬೆಳಿಗ್ಗೆ 11.

ಶಾಲಾ ವಿದ್ಯಾರ್ಥಿಗಳಿಂದ ನೃತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ. ಮಧ್ಯಾಹ್ನ 2.30.

ಲಘು ಸಂಗೀತ (ಐಡಿಯಲ್‌ ಫೌಂಡೇಷನ್‌ನ ಅಂಧ ಕಲಾವಿದರಿಂದ). ಮಧ್ಯಾಹ್ನ 3.30.

ಭಾವ ಸಂಗೀತ (ಶ್ರೀ ಗಣೇಶ್‌ ದೇಸಾಯಿ ಮತ್ತು ತಂಡದಿಂದ). ಸಂಜೆ 4.30.

ಉದ್ಘಾಟನಾ ಸಮಾರಂಭ ಮತ್ತು ಪುಷ್ಪಾಂಜಲಿ ಕಾರ್ಯಕ್ರಮ. ಸಂಜೆ 6.

ಬಾಣ ಬಿರುಸುಗಳ ಪ್ರದರ್ಶನ. ಸಂಜೆ 6.45.

ನೃತ್ಯ ಪ್ರದರ್ಶನ ಚಲನಚಿತ್ರ ಮತ್ತು ಕಿರುತೆರೆ ಕಲಾವಿದರಿಂದ. ಸಂಜೆ 7.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.