ADVERTISEMENT

`ಜಿಲ್ಲಾಧಿಕಾರಿ ವ್ಯಾಪ್ತಿಗೆ ಅಟಲ್‌ಜೀ ಜನಸ್ನೇಹಿ'

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2012, 6:47 IST
Last Updated 20 ಡಿಸೆಂಬರ್ 2012, 6:47 IST

ಮಂಡ್ಯ: `ನೆಮ್ಮದಿ ಕೇಂದ್ರ'ಗಳಿಗೆ `ಅಟಲ್ ಜೀ ಜನಸ್ನೇಹಿ ಕೇಂದ್ರ' ಎಂದು ಪುನರ್ ನಾಮಕರಣ ಮಾಡಿದ್ದು, ಡಿ. 25ರಿಂದ ಈ ಕೇಂದ್ರಗಳ ಕೆಲಸ ಕಾರ್ಯಗಳು ಜಿಲ್ಲಾಧಿಕಾರಿಯ ಆಡಳಿತ ವ್ಯಾಪ್ತಿಗೆ ಒಳಪಡಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಪಿ.ಯೋಗೇಶ್ವರ್ ತಿಳಿಸಿದರು.

ತಾಲ್ಲೂಕಿನ ಕೀಲಾರ ಗ್ರಾಮದಲ್ಲಿ ನಿರ್ಮಿಸಿರುವ ರಾಜೀವ್‌ಗಾಂಧಿ ಸೇವಾ ಕೇಂದ್ರವನ್ನು ಬುಧವಾರ ಉದ್ಘಾಟಿಸಿ ಮಾತನಾಡಿದ ಅವರು, ಈ ಕೇಂದ್ರಗಳಲ್ಲಿನ ಕೆಲಸಗಳು ಇನ್ನಷ್ಟು ಸರಳವಾಗಿ ನಡೆಯಲಿದೆ ಎಂದು ಹೇಳಿದರು.
ಸಕಾಲ ಯೋಜನೆಯೂ ಕೂಡ ವಿಸ್ತರಣೆಯಾಗಿದ್ದು ಸಾರ್ವಜನಿಕರಿಗೆ ನಿಗದಿತ ಅವಧಿಯಲ್ಲಿ ಈ ಯೋಜನೆಯಡಿ ಸೇವೆ ಒದಗಿಸಲಾಗುತ್ತಿದೆ ಎಂದು ತಿಳಿಸಿದರು.

ಗ್ರಾಮಗಳ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದ್ದು, ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಬಗೆಗೆ ಹೆಚ್ಚಿನ ಗಮನ ಹರಿಸಲಾಗುವುದು ಎಂದು ಹೇಳಿದರು.ಜಿಲ್ಲಾಧಿಕಾರಿ ಬಿ.ಎನ್.ಕೃಷ್ಣಯ್ಯ ಮಾತನಾಡಿ, `ಸಕಾಲ' ಯೋಜನೆಯಡಿ ಹೊಸದಾಗಿ ಸೇರ್ಪಡೆಗೊಂಡಿರುವ ಯೋಜನೆಗಳಿಗೆ ಡಿ. 25 ರಂದು ಚಾಲನೆ ನೀಡಲಾಗುವುದು ಎಂದು ತಿಳಿಸಿದರು.

ಕೀಲಾರ ಗ್ರಾಮದಲ್ಲಿ 25 ಕುಟುಂಬಗಳಿಗೆ ಪಡಿತರ ಚೀಟಿ ಇಲ್ಲದಿರುವುದು ಕಂಡು ಬಂದಿದ್ದು, ಈ ಬಗೆಗೆ ಸೂಕ್ತ ಕ್ರಮಕೈಗೊಳ್ಳುವಂತೆ ತಹಶೀಲ್ದಾರ್ ಅವರಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.ವಾಜಪೇಯಿ ಜನಶ್ರೀ ಆರೋಗ್ಯ ಯೋಜನೆಯು ಮೈಸೂರು ವಿಭಾಗದಲ್ಲೂ ಶೀಘ್ರವೇ ಆರಂಭಗೊಳ್ಳಲಿದೆ.

ಈ ಯೋಜನೆಯಡಿ ಬಿ.ಪಿ.ಎಲ್. ಕಾರ್ಡುದಾರರಿಗೆ ಉಚಿತವಾಗಿ ಕಿಡ್ನಿ, ಹೃದಯ ಸಂಬಂಧಿ ಕಾಯಿಲೆಗಳಿಗೆ ಚಿಕಿತ್ಸೆ ಒದಗಿಸಲಾಗುವುದು ಎಂದರು.ಶಾಸಕ ಎಂ.ಶ್ರೀನಿವಾಸ್, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪಿ.ಸಿ.ಜಯಣ್ಣ, ಜಿಲ್ಲಾ ಪಂಚಾಯಿತಿ ಸದಸ್ಯ ವಿಜಯಾನಂದ, ಬಿಜೆಪಿ ಜಿಲ್ಲಾ ಘಟಕ ಅಧ್ಯಕ್ಷ ಹೆಚ್.ಪಿ.ಮಹೇಶ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಪುಟ್ಟೇಗೌಡ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಮೇಶ್ ಉಪಸ್ಥಿತರಿದ್ದರು.

ಯುವ ಸಂಘಗಳ ವಿನಿಮಯ
ಮಂಡ್ಯ:
ಯುವ ಸಂಘಗಳ ವಿನಿಮಯ ಕಾರ್ಯಕ್ರಮವನ್ನು ಡಿ. 21 ರಿಂದ 25ರ ವರೆಗೆ ನಗರದಲ್ಲಿನ ನೆಹರು ಯುವ ಕೇಂದ್ರದ ಸಭಾಂಗಣದಲ್ಲಿ ಆಯೋಜಿಸಲಾಗಿದೆ.ನೆಹರು ಯುವ ಕೇಂದ್ರ ಮಂಡ್ಯ, ನೆಹರು ಯುವ ಕೇಂದ್ರ ನಾಗಪುರ (ಮಹಾರಾಷ್ಟ್ರ), ಜಿಲ್ಲಾ ಯುವ ಪರಿಷತ್, ಕ್ಷೀರ ಸಾಗರ ಮಿತ್ರಕೂಟ, ಜನಸ್ಪಂದನ ಟ್ರಸ್ಟ್ ಸಹಯೋಗದಲ್ಲಿ ಕಾರ್ಯಕ್ರಮ ನಡೆಯಲಿದೆ.

ಇದೇ ಸಂದರ್ಭದಲ್ಲಿ ಜೀವನಾ ನಿರ್ವಹಣಾ ಕೌಶಲ್ಯಾಭಿವೃದ್ಧಿ ಬಗೆಗೂ ತರಬೇತಿ ನೀಡಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT