ADVERTISEMENT

ಟಿಎಪಿಸಿಎಂಎಸ್ ಅಭಿವೃದ್ಧಿಗೆ ಸಹಕಾರ ಅಗತ್ಯ: ದೇವರಾಜ್

​ಪ್ರಜಾವಾಣಿ ವಾರ್ತೆ
Published 2 ಜನವರಿ 2012, 10:25 IST
Last Updated 2 ಜನವರಿ 2012, 10:25 IST

ಕೃಷ್ಣರಾಜಪೇಟೆ:  ತಾಲ್ಲೂಕಿನ ರೈತರ ಅನುಕೂಲಕ್ಕಾಗಿ ವಿವಿಧ ಯೋಜನೆ ರೂಪಿಸಿರುವ ಟಿಎಪಿಸಿಎಂಎಸ್ ಸಂಸ್ಥೆ ಅಭಿವೃದ್ಧಿಗೆ ಎಲ್ಲರೂ ಸಹಕಾರ ನೀಡಬೇಕು ಎಂದು ಅಧ್ಯಕ್ಷ ಬಿ.ಎಲ್.ದೇವರಾಜ್ ಮನವಿ ಮಾಡಿದರು.

ಪಟ್ಟಣದ ಎಸ್.ಎಂ.ಲಿಂಗಪ್ಪ ಸಹಕಾರ ಭವನದಲ್ಲಿ ಈಚೆಗೆ ನಡೆದ ಸಂಸ್ಥೆಯ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ರೈತರ ಕೃಷಿ ಚಟುವಟಿಕೆಗಳಿಗೆ ಅಗತ್ಯವಾದ ಬಿತ್ತನೆ ಬೀಜಗಳು, ರಸಗೊಬ್ಬರ, ಕೃಷಿ ಸಲಕರಣೆಗಳು ಜೊತೆಗೆ ಜವಳಿ ವಸ್ತುಗಳು, ಗೃಹ ಬಳಕೆ ಸಾಮಗ್ರಿಗಳು, ಗೃಹ ನಿರ್ಮಾಣ ವಸ್ತುಗಳು ಮತ್ತಿತರ ಸೌಲಭ್ಯ ಒದಗಿಸುವಲ್ಲಿ ಸಂಸ್ಥೆ ಮುಂಚೂಣಿಯಲ್ಲಿದೆ. ಇದಲ್ಲದೆ ತಾಲ್ಲೂಕಿನ ಪಡಿತರ ವ್ಯವಸ್ಥೆಯ ವಸ್ತುಗಳು ಹಾಗೂ ಶಾಲೆಗಳ ಬಿಸಿಯೂಟದ ಆಹಾರ ವಸ್ತುಗಳ ಸರಬರಾಜು ಮಾಡುತ್ತಾ ಉತ್ತಮ ಹೆಸರು ಗಳಿಸಿದೆ. ಕಳೆದ ಸಾಲಿನಲ್ಲಿ ಸಂಸ್ಥೆ 15 ಲಕ್ಷ ರೂಪಾಯಿ ನಿವ್ವಳ ಲಾಭ ಗಳಿಸಿದೆ. ಇದರ ಜೊತೆಗೆ ಪ್ರಸಕ್ತ ಸಾಲಿನ ಜಿಲ್ಲಾ ಸಹಕಾರ ಯೂನಿಯನ್ ಪ್ರಶಸ್ತಿ ಪಡೆಯುವ ಮೂಲಕ ತನ್ನ ಗತವೈಭವ ಮರುಹೊಂದಲು ದಾಪುಗಾಲಿಡುತ್ತಿದೆ ಎಂದು ಹೇಳಿದರು.

ಸಂಸ್ಥೆ ಶೇರುದಾರರಾದ ವಿಠಲಾಪುರ ಸುಬ್ಬೇಗೌಡ, ಎಸ್.ಎಂ.ಚನ್ನಬಸಪ್ಪ, ಬಿ.ನಂಜಪ್ಪ, ಕೆ.ಟಿ.ತಿಮ್ಮೇಗೌಡ, ಬೇಲದಕೆರೆ ಪಾಪೇಗೌಡ, ಎಸ್.ಟಿ.ಸಿದ್ದೇಗೌಡ, ಎ.ಬಿ.ಜವರಪ್ಪ, ಬಿ.ಸಿ.ಚನ್ನೇಗೌಡ, ನಿರ್ದೇಶಕರಾದ ಕಾಳೇಗೌಡ, ಪಾಪೇಗೌಡ, ಬಿ.ಜವರಾಯಿಗೌಡ, ಕೆ.ಟಿ.ಗಂಗಾಧರ್, ನಾಗೇಶ್, ಮಧುಸೂಧನ್, ಸಂಸ್ಥೆಯ ಕಾರ್ಯದರ್ಶಿ ಲಕ್ಷ್ಮೀನಾರಾಯಣ್ ಮತ್ತಿತರರು ಉಪಸ್ಥಿತರಿದ್ದರು.

ಕಿಕ್ಕೇರಿ ಡೇರಿಯಿಂದ ಕ್ಯಾಲೆಂಡರ್ ಬಿಡುಗಡೆ
ಕಿಕ್ಕೇರಿ: ನೂತನ ವರ್ಷ ಗ್ರಾಹಕರಿಗೆ ಸಮೃದ್ಧಿ ನೀಡಲಿ ಎಂದು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಎಂ.ಸಿ.ಕೆಂಪೇಗೌಡ ಶುಭ ಹಾರೈಸಿದರು.

ಪಟ್ಟಣದ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಭಾನುವಾರ ಹೊಸ ವರ್ಷದ ಸರಳ ಸಮಾರಂಭ ಏರ್ಪಡಿಸಿ ಹೊಸ ವರ್ಷದ ಕ್ಯಾಲೆಂಡರ್ ಬಿಡುಗಡೆಗೊಳಿಸಿ ಗ್ರಾಹಕರೊಂದಿಗೆ ಮಾತನಾಡಿದರು.

ಹೆಚ್ಚು ಗುಣಮಟ್ಟದ ಹಾಲು ವಿತರಿಸಿ ಜನರ ಆರೋಗ್ಯದ ಜತೆಗೆ ಆರ್ಥಿಕವಾಗಿ ಸದೃಢರಾಗಿ ಎಂದರು.
ಅಧ್ಯಕ್ಷ ಎಂ.ಸಿ.ಕೆಂಪೇಗೌಡ, ಕಾರ್ಯದರ್ಶಿ ಕೃಷ್ಣ, ಸದಸ್ಯರಾದ ಸುಲೋಚನಮ್ಮ, ತಿಮ್ಮೇಗೌಡ, ಮರೀಗೌಡ, ತೋರೇಶ್, ನಾಗಣ್ಣ, ಕೃಷ್ಣೇಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.