ADVERTISEMENT

ತಪ್ಪದ ವಿದ್ಯಾರ್ಥಿಗಳ ಪರದಾಟ

ಕಾಲೇಜು ಕಟ್ಟಡ ಕಾಮಗಾರಿ ಅಪೂರ್ಣ

​ಪ್ರಜಾವಾಣಿ ವಾರ್ತೆ
Published 5 ಜುಲೈ 2013, 8:54 IST
Last Updated 5 ಜುಲೈ 2013, 8:54 IST

ಶ್ರೀರಂಗಪಟ್ಟಣ: ತಾಲ್ಲೂಕಿನ ಕೆಆರ್‌ಎಸ್ ಸರ್ಕಾರಿ ಪದವಿ ಪೂರ್ವ ಕಾಲೇಜು ಕಟ್ಟಡ ಕಾಮಗಾರಿ ಕಳೆದ 4 ವರ್ಷಗಳಿಂದ ಸ್ಥಗಿತಗೊಂಡಿದೆ.

ಲೋಕೋಪಯೋಗಿ ಇಲಾಖೆ ರೂ.30 ಲಕ್ಷ ವೆಚ್ಚದಲ್ಲಿ ಈ ಕಟ್ಟಡ ಕಾಮಗಾರಿ ಆರಂಭಿಸಿತ್ತು. 5 ವರ್ಷಗಳ ಹಿಂದೆ ಆರಂಭವಾದ ಕಟ್ಟಡ ಕಾಮಗಾರಿಗೆ ಅಗತ್ಯ ಅನುದಾನ ಬಾರದ ಕಾರಣ ಅರ್ಧಕ್ಕೆ ನಿಂತಿದೆ. ಅಪೂರ್ಣ ಕಟ್ಟಡ ಜೂಜು, ಮದ್ಯ ಸೇವನೆಯಂತಹ ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ. ನಾಯಿ, ಬೀಡಾಡಿ ದನಗಳ ಆವಾಸ ಸ್ಥಾನವಾಗಿದೆ. 4 ವರ್ಷಗಳ ಹಿಂದೆ ನಿರ್ಮಿಸಿದ ಕಟ್ಟಡದ ಗೋಡೆಯ ಇಟ್ಟಿಗೆಗಳು ಬೀಳುತ್ತಿವೆ.

  ಕೆಆರ್‌ಎಸ್‌ನಲ್ಲಿ ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜು ತರಗತಿಗಳು ಪಾಳಿಯ ಪ್ರಕಾರ ನಡೆಯುತ್ತಿವೆ. ಮೈಸೂರು ತಾಲ್ಲೂಕಿನ ಆನಂದೂರು, ಮಲ್ಲೇಗೌಡನಕೊಪ್ಪಲು, ಹಳೇ ಉಂಡವಾಡಿ; ಪಾಂಡವಪುರ ತಾಲ್ಲೂಕಿನ ಚಿಕ್ಕಾಯರಹಳ್ಳಿ, ನಾರ್ತ್‌ಬ್ಯಾಂಕ್; ಶ್ರೀರಂಗಪಟ್ಟಣ ತಾಲ್ಲೂಕಿನ ಕೆಆರ್‌ಎಸ್, ಹೊಂಗಹಳ್ಳಿ, ಹುಲಿಕೆರೆ ಗ್ರಾಮಗಳಿಂದ 250ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಾಲೇಜಿಗೆ ಬರುತ್ತಾರೆ.

ಕೊಠಡಿಗಳ ಸಮಸ್ಯೆ ಇರುವುದರಿಂದ ಪಾಠ, ಪ್ರವಚನಗಳಿಗೆ ತೊಂದರೆಯಾಗಿದೆ. ವಿಜ್ಞಾನ ವಿಭಾಗದ ಪ್ರಯೋಗಾಲಯದ ಛಾವಣಿ ಶಿಥಿಲಗೊಂಡಿದ್ದು ಗಾರೆ ಉದುರುತ್ತಿದೆ.

ಮಳೆಗಾಲದಲ್ಲಿ ನೀರು ಜಿನುಗುತ್ತಿದ್ದು, ಬೆಲೆ ಬಾಳುವ ಪರಿಕರಗಳಿಗೆ ಹಾನಿಯಾಗುತ್ತಿದೆ ಎಂದು ಕಾಲೇಜಿನ ಪ್ರಾಂಶುಪಾಲ ಕೃಷ್ಣೇಗೌಡ ಹೇಳುತ್ತಾರೆ.

ಲೋಕೋಪಯೋಗಿ ಇಲಾಖೆಯಿಂದ ರೂ.30 ಲಕ್ಷ ವೆಚ್ಚದಲ್ಲಿ ಕೆಳ ಅಂತಸ್ತಿನ ಕಟ್ಟಡ ಕಾಮಗಾರಿ ಪೂರ್ಣಗೊಳಿಸಲಾಗಿದೆ. ಮುಂದುವರೆದ ಕಾಮಗಾರಿಗೆ ಹಣ ಬಿಡುಗಡೆ ಮಾಡುವಂತೆ ಕಾಲೇಜು ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಎರಡು ಬಾರಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಅನುದಾನ ಬಿಡುಗಡೆ ಆಗಿಲ್ಲದ ಕಾರಣ ಕಟ್ಟಡ ಕಾಮಗಾರಿ ಸ್ಥಗಿತಗೊಂಡಿದೆ ಎಂದು ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ರಮೇಶ್ `ಪ್ರಜಾವಾಣಿ'ಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.