ಮದ್ದೂರು: ಇತಿಹಾಸ ಪ್ರಸಿದ್ಧ ಆಬಲವಾಡಿ ತೋಪಿನ ತಿಮ್ಮಪ್ಪನ ಹರಿಸೇವೆ ಇದೇ ಜೂನ್ 27 ಹಾಗೂ 28ರಂದು ನಡೆಯಲಿದ್ದು, ತಾವರೆ ಎಲೆ ವಿಶೇಷ ಭೋಜನಕ್ಕೆ ತಾಲ್ಲೂಕಿನ ಆಬಲವಾಡಿ ಗ್ರಾಮ ಸಜ್ಜುಗೊಳುತ್ತಿದೆ.
850 ವರ್ಷಗಳಿಂದ ಪರಂಪರಾನುಗತವಾಗಿ ಈ ಹರಿಸೇವೆ ನಡೆಯುತ್ತಿದ್ದು, ಈ ಬಾರಿಯ ಹರಿಸೇವೆಗೆ ರಾಜ್ಯದ ವಿವಿದೆಡೆಯಿಂದ 50ಸಾವಿರಕ್ಕೂ ಹೆಚ್ಚು ಭಕ್ತರು ಭಕ್ತರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಈ ಹಿಂದೆ ಇದ್ದ ಸಣ್ಣ ತಿಮ್ಮಪ್ಪನ ಗುಡಿಯನ್ನು ಕೆಲವು ವರ್ಷಗಳ ಹಿಂದೆ ಕ್ಷೇತ್ರ ಶಾಸಕ ಡಿ.ಸಿ. ತಮ್ಮಣ್ಣ ಅವರ ನೇತೃತ್ವದಲ್ಲಿ ₨ ಒಂದು ಕೋಟಿ ವೆಚ್ಚದಲ್ಲಿ ಜೀರ್ಣೋದ್ಧಾರಗೊಳಿಸಲಾಗಿದೆ. ಅಲ್ಲದೇ ಪ್ರತಿವರ್ಷ ವೈಕುಂಠ ಏಕಾದಶಿ, ಹರಿಸೇವೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳನ್ನು ವೈಶಿಷ್ಟ್ಯ ಪೂರ್ಣವಾಗಿ ಆಚರಿಸಿಕೊಂಡು ಬರಲಾಗುತ್ತಿದೆ.
ಹರಿಸೇವೆ ಸಿದ್ಧತೆಯ ಪರಿ: ಎರಡು ದಿನಗಳ ಕಾಲ ನಡೆಯುವ ಈ ಹರಿಸೇವೆಯಲ್ಲಿ ಪಾಲ್ಗೊಳ್ಳುವ ಭಕ್ತರಿಗೆ ವಿಷ್ಣುವಿಗೆ ಪ್ರಿಯವೆನಿಸಿದ ತಾವರೆ ಎಲೆಯಲ್ಲಿ ಭೋಜನ ವಿತರಿಸುವುದು ಇಲ್ಲಿನ ವಿಶೇಷ. ಹರಿಸೇವೆಗೆ ಗ್ರಾಮದ ಪ್ರತಿ ಮನೆಯಿಂದ 10 ಸೇರು ಅಕ್ಕಿ, 2 ಸೇರು ಬೇಳೆ, ಹುಣಸೆ ಹಣ್ಣು, ಕುಂಬಳಕಾಯಿ, ಸೌದೆ, ತೆಂಗಿನಕಾಯಿ, ಬೆಲ್ಲ, ಕೈಲಾದಷ್ಟು ಹಣ, ಹಾಗೂ ಹರಕೆ ತೀರಿಸಲು 1 ಕಟ್ಟು ತಾವರೆ ಎಲೆಯನ್ನು ಹರಕೆ ರೂಪದಲ್ಲಿ ಸ್ವೀಕರಿಸಲಾಗುತ್ತದೆ.
ರಾಜ್ಯದ ವಿವಿದೆಡೆಗಳಿಂದ ಸಾವಿರಾರು ಬರುವ ಭಕ್ತರಿಗೆ ಅಡುಗೆ ತಯಾರಿಸುವುದು. ಊಟ ಬಡಿಸುವುದು ಸೇರಿದಂತೆ ಹಲವು ಕಾರ್ಯಗಳನ್ನು ಗ್ರಾಮಸ್ಥರು ಜಾತಿ ಭೇದ ಪಕ್ಷಭೇದ ಮರೆತು ಶ್ರದ್ಧೆಯಿಂದ ನೆರವೇರಿಸುವುದು ಈ ಹರಿಸೇವೆಯ ವೈಶಿಷ್ಟ್ಯ.
ದಲಿತರಿಂದ ನೈವೇದ್ಯ: ಈ ಹರಿಸೇವೆಗೆ ಪ್ರತಿ ವರ್ಷ ದಲಿತರಿಂದ ಹರಕೆ ರೂಪದಲ್ಲಿ ಸ್ವೀಕರಿಸಲಾದ ಅಕ್ಕಿಯನ್ನು ದೇವರಿಗೆ ಪ್ರಥಮ ನೈವೇದ್ಯವಾಗಿ ಬಳಸುವುದು ಇಲ್ಲಿ ವಿಶೇಷ. ದೇವರ ನೈವೇದ್ಯಕ್ಕೆ ದವಸ ನೀಡಲು ಸ್ಥಳೀಯ ದಲಿತ ಕುಟುಂಬಗಳಿಗೆ ಹಿಂದಿನಿಂದಲೂ ಪ್ರಥಮ ಪ್ರಾಶಸ್ತ್ಯ ನೀಡಲಾದರೂ, ದೇಗುಲದ ಒಳ ಪ್ರಾಂಗಣ ಪ್ರವೇಶಕ್ಕೆ ಅವರಿಗೆ ಅವಕಾಶ ಕಲ್ಪಿಸಿರಲಿಲ್ಲ. ಆದರೆ ಕಳೆದ ಮೂರು ವರ್ಷಗಳಿಂದ ದೇಗುಲದ ಒಳಕ್ಕೆ ದಲಿತರಿಗೂ ಪ್ರವೇಶಾವಕಾಶ ನೀಡಲಾಗಿದೆ.
ಲಾಡು ವಿತರಣೆ: ಈ ಬಾರಿ ಅನ್ನಸಂತರ್ಪಣೆಯೊಂದಿಗೆ 50ಸಾವಿರ ಲಾಡುಗಳನ್ನು ತಯಾರಿಸಿ ಭಕ್ತರಿಗೆ ವಿತರಿಸಲು ಅಗತ್ಯ ಸಿದ್ಧತೆ ಕೈಗೊಳ್ಳ ಲಾಗಿದೆ. ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
850 ವರ್ಷಗಳಿಂದ ಹರಿಸೇವೆ ಯಾವುದೇ ತೊಡಕಿಲ್ಲದೇ ನಡೆದಿದೆ. ಈ ಬಾರಿಯೂ ಸಮಸ್ಯೆಯಿಲ್ಲದಂತೆ ನಡೆಸಲು ಅಗತ್ಯ ಸಿದ್ಧತೆ ನಡೆಸಲಾಗಿದೆ. -ಡಿ.ಸಿ. ತಮ್ಮಣ್ಣ, ಶಾಸಕರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.