ADVERTISEMENT

ದೇಸಿ ಕಲೆ ಉಳಿಸಿ: ಶಾಸಕ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2012, 7:20 IST
Last Updated 7 ಫೆಬ್ರುವರಿ 2012, 7:20 IST

ಕೃಷ್ಣರಾಜಪೇಟೆ: ಪಾಶ್ಚಿಮಾತ್ಯ ಸಂಸ್ಕೃತಿಯ ಪ್ರಭಾವದಿಂದಾಗಿ ನಶಿಸಿಹೋಗುತ್ತಿರುವ ನಮ್ಮ ದೇಸಿ ಕಲೆಗಳ ಸಂರಕ್ಷಣೆಗೆ ಯುವಜನರು ಮುಂದಾಗಬೇಕು ಎಂದು ಶಾಸಕ ಕೆ.ಬಿ.ಚಂದ್ರಶೇಖರ ತಿಳಿಸಿದರು.

ಪಟ್ಟಣದಲ್ಲಿ ಸೋಮವಾರ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಯುವಜನ ಮೇಳದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ಆಧುನಿಕತೆಯ ಸೋಂಕಿನಿಂದ ನಮ್ಮ ಪ್ರಾಚೀನ ಆಚಾರ ವಿಚಾರಗಳು ಅಸ್ತಿತ್ವ ಕಳೆದುಕೊಳ್ಳುತ್ತಿವೆ. ನಮ್ಮ ದೇಸಿ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಅನೇಕ ಗ್ರಾಮೀಣ ಭಾಗದ  ಚಟುವಟಿಕೆಗಳು ಇಂದು ಕಣ್ಮರೆಯಾಗುತ್ತಿವೆ.
 
ಯುವಜನರು ತಮ್ಮ ಬಿಡುವಿನ ವೇಳೆಯನ್ನು ವ್ಯರ್ಥಮಾಡದೆ ಇಂತಹ ದೇಸೀಯ ಕಲೆಗಳನ್ನು ಕಲಿತುಕೊಳ್ಳಲು ಬಳಸಬೇಕು. ತಮ್ಮ ನಿರಾಸಕ್ತ ಮನೋಭಾವನೆ ಬದಿಗೊತ್ತಿ ಕ್ರಿಯಾಶೀಲ ಧೋರಣೆಯಿಂದ ಆರೋಗ್ಯಕರ ಕಾರ್ಯಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು ಎಂದರು.

ಮೈಸೂರಿನ ಜ್ಞಾನಬುತ್ತಿ ಸಂಸ್ಥೆಯ ಜೈನಹಳ್ಳಿ ಸತ್ಯನಾರಾಯಣಗೌಡ ಮಾತನಾಡಿ, ಯುವ ಜನರು ಯೋಗ್ಯವಾದ ವಿಚಾರಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲು ಪ್ರಯತ್ನಿಸಬೇಕು. ಹಣದಾಸೆಗೆ ಅಡ್ಡದಾರಿಯನ್ನು ಹಿಡಿಯದೆ, ತಮ್ಮ ಗುರು ಹಿರಿಯರಿಗೆ ಗೌರವ ಬರುವಂತೆ ನಡೆದುಕೊಳ್ಳಬೇಕು ಎಂದರು.
ಲೇಖಕ ಡಾ.ಪ್ರದೀಪ್‌ಕುಮಾರ್ ಹೆಬ್ರಿಯವರ ಯುಗಾವತಾರಿ ಗ್ರಂಥದ 6ನೇ ಸಂಪುಟವನ್ನು ತಹಶೀಲ್ದಾರ್ ಡಾ.ಎಚ್.ಎಲ್.ನಾಗರಾಜ್ ಬಿಡುಗಡೆಗೊಳಿಸಿದರು. 

ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಕೋಮಲಾ ಸ್ವಾಮಿ, ವಿವಿಧ ಸ್ಥಾಯಿ ಸಮಿತಿ ಅಧ್ಯಕ್ಷರಾದ ವಿ.ಮಂಜೇಗೌಡ, ಮಾದಪ್ಪ, ಪಾಂಡವಪುರ ಉಪವಿಭಾಗಾಧಿಕಾರಿ ಜಿ.ಪ್ರಭು, ಯುವಜನ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಡಾ.ಮಂಜುಳಾ, ಮಹಿಳಾ ಮತ್ತು ಮಕ್ಕಳ ಇಲಾಖೆ ಉಪನಿರ್ದೇಶಕಿ ಬಿ.ವಿಮಲಾ, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಬಿ.ಪುಟ್ಟಸ್ವಾಮಿಗೌಡ, ಪುರಸಭೆ ಸದಸ್ಯ ಕೆ.ಆರ್.ನೀಲಕಂಠ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜಯರಾಮು, ಯುವ ಪ್ರಶಸ್ತಿ ಪುರಸ್ಕೃತರಾದ ಲಾಲಿಪಾಳ್ಯ ಮಹದೇವ್, ಕೀಲಾರ ಸುರೇಶ್ ಮತ್ತಿತರರು ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.