ಶ್ರೀರಂಗಪಟ್ಟಣ: ತಾಲ್ಲೂಕಿನ ನಗುವನಹಳ್ಳಿ ಕಾಲೊನಿಯ ಜನ ಕಳೆದ ಒಂದು ದಶಕದಿಂದ ಗಂಟು ನೋವಿನಿಂದ ಬಳಲುತ್ತಿದ್ದಾರೆ.
ಕಾಲೊನಿಯ 60ಕ್ಕೂ ಹೆಚ್ಚು ಮಂದಿ ಮಂಡಿಚಿಪ್ಪು, ಮೊಳಕಾಲು ಹಾಗೂ ಹಿಮ್ಮಡಿ ನೋವಿನ ಬಾಧೆ ಪಡುತ್ತಿದ್ದಾರೆ. 40 ವರ್ಷ ದಾಟಿರುವ ಜನರು ಹೆಚ್ಚು ಈ ಬಾಧೆಗೆ ಒಳಗಾಗಿದ್ದಾರೆ. ಗ್ರಾಮದ ಅಂದಾನಯ್ಯ, ಹನುಮಯ್ಯ, ರಾಜಯ್ಯ, ಮಾದೇವಯ್ಯ, ತಿಮ್ಮಯ್ಯ, ವೆಂಕಟೇಶ, ಮಾದಮ್ಮ, ಕೆಂಚಮ್ಮ, ಪುಟ್ಟಸಿದ್ದಮ್ಮ, ಸಾವಿತ್ರಮ್ಮ, ರಂಗಯ್ಯ, ಶಿವಪ್ಪ ಇತರರು ಈ ಕಾಯಿಲೆಯಿಂದ ನಲುಗಿದ್ದಾರೆ. ಕೂತರೆ ಏಳಲಾಗದ, ಎದ್ದರೆ ಕೂರಲಾಗದ ನೋವಿನಿಂದ ಇವರು ಬಳಲುತ್ತಿದ್ದಾರೆ. ಕಳೆದ 10 ವರ್ಷಗಳಿಂದ ಇಲ್ಲಿನ ಜನರನ್ನು ಕೀಲುಗಳ ನೋವು ಕಾಡುತ್ತಿದೆ. ಮೈಸೂರಿನ ಕೆ.ಆರ್.ಆಸ್ಪತ್ರೆ, ಆಯುರ್ವೇದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದರೂ ಗುಣವಾಗದೇ ಇರುವುದು ಕುಟುಂಬದ ಸದಸ್ಯರನ್ನು ಚಿಂತೆಗೀಡು ಮಾಡಿದೆ. ಕೂಲಿಯನ್ನೇ ನಂಬಿ ಬದುಕುತ್ತಿರುವ ಈ ಜನ ಬಡತನದ ಕಾರಣದಿಂದ ಹೆಚ್ಚಿನ ಚಿಕಿತ್ಸೆ ಪಡೆಯಲಾಗದೆ ನೋವು ಅನುಭವಿಸುತ್ತಿದ್ದಾರೆ.
`10-12 ವರ್ಷಗಳಿಂದ ಮಂಡಿ, ಮೊಳಕಾಲು ಹಾಗೂ ಹಿಮ್ಮಡಿ ನೋವು ಅನುಭವಿಸುತ್ತಿದ್ದೇನೆ. ಮೇಲಿಂದ ಮೇಲೆ ಊತ ಕಾಣಿಸಿಕೊಳ್ಳುತ್ತದೆ. ನೋವು ಹೆಚ್ಚಾದರೆ ಮಾತ್ರೆ ನುಂಗುತ್ತೇನೆ. ಅದರ ಮಾರನೆ ದಿನ ಮತ್ತೆ ನೋವು ಶುರುವಾಗುತ್ತದೆ. ಮೂಳೆ ಸವೆಯುತ್ತಿರುವುದರಿಂದ ಕೀಲುಗಳಲ್ಲಿ ನೋವು ಕಾಣಿಸಿಕೊಳ್ಳುತ್ತಿದೆ. ಕಷ್ಟದ ಕೆಲಸ ಮಾಡಬೇಡಿ ಎಂದು ವೈದ್ಯರು ಹೇಳುತ್ತಾರೆ. ಕೆಲಸ ಮಾಡದಿದ್ದರೆ ಮನೆ ಮಂದಿಯೆಲ್ಲ ಉಪವಾಸ ಮಲಗಬೇಕಾಗುತ್ತದೆ~ ಎಂದು ಗುರುಸಿದ್ದಯ್ಯ ತಮ್ಮ ನೋವು ತೋಡಿಕೊಳ್ಳುತ್ತಾರೆ.
`ನಮ್ಮಪ್ಪಂಗೆ ಆರ್ ತಿಂಗ್ಳಿಗೆ ಒಂದ್ಸಾರಿ ಮಂಡಿ ಚಿಪ್ನ ನೀರು ತೆಗಿಸ್ಬೇಕು. ಇಲ್ದೇ ಇದ್ರೆ ನಿದ್ದೆ ಮಾಡಾಕಿಲ್ಲ. ಒಂದ್ಸಾರಿಗೆ ಸಾವಿರ್ರೂಪಾಯಿ ಖರ್ಚಾಯ್ತದೆ. ಬೆಂಗ್ಳೂರ್ಗೆ ಕರ್ಕೊಂಡೋಗಿ ಅಂತ ಡಾಕುಟ್ರು ಹೇಳ್ತಾರೆ. ಮನೆ ಬಿಟ್ರೆ ನಮಗೆ ಬೇರೇನೂ ಇಲ್ಲ. ಅಲ್ಲೆ ತನ್ಕ ಹೋಗಾಕೆ ಕಾಸು ಎಲ್ಲಿಂದ ತರಾದು?~ ಎಂದು ಹನುಮಯ್ಯನ ಮಗ ವೆಂಕಟೇಶ ತಮ್ಮ ಬಡತನವನ್ನು ಮುಂದಿಡುತ್ತಾರೆ.
`40 ವರ್ಷ ದಾಟಿದವರಿಗೆ ಈ ಬಾಧೆ ಸಾಮಾನ್ಯ. ಮೂಳೆ ಸವೆತದಿಂದ `ಆಸ್ಟಿಯೋ ಆಂತ್ರೈಟಿಸ್~ ಎಂಬ ಸಮಸ್ಯೆ ಕಾಣಿಸಿಕೊಳ್ಳುತ್ತದೆ. 15 ವರ್ಷ ಒಳಗಿನ ಮಕ್ಕಳಿಗೆ ಬರುವ `ರುಮಟೆಡ್ ಆಂತ್ರೈಟಿಸ್~ ಗಂಭೀರವಾದದ್ದು. ಇದು ಹೃದಯದ ಸಮಸ್ಯೆಗೂ ಕಾರಣವಾಗುತ್ತದೆ. ತಕ್ಷಣ ಚಿಕಿತ್ಸೆ ಕೊಡಿಸಿದರೆ ತೊಂದರೆಯಿಂದ ಪಾರಾಗಬಹುದು. ನಗುವನಹಳ್ಳಿ ಕಾಲೊನಿಯ 60ಕ್ಕೂ ಹೆಚ್ಚು ಜನರಿಗೆ ಈ ಬೇನೆ ಇರುವುದು ಗಮನಕ್ಕೆ ಬಂದಿಲ್ಲ. ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಲಾಗುವುದು~ ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ.ಬಾಲಕೃಷ್ಣ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.